ಅರ್ಜಿಗಳನ್ನು ಹದಿನೈದು ದಿನದಲ್ಲಿ ಇತ್ಯರ್ಥಪಡಿಸಿ
Team Udayavani, Jul 28, 2018, 7:45 AM IST
ಬೆಂಗಳೂರು: ಹುತಾತ್ಮ ಯೋಧರ ನೇರ ಅವಲಂಬಿತರು ಜಮೀನು, ನಿವೇಶನ ಇಲ್ಲವೇ ಆರ್ಥಿಕ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೇಶ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬದವರು ಜಮೀನು, ನಿವೇಶನ ಮತ್ತಿತರೆ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳು ಸಾಕಷ್ಟು ಸಮಯ ಕಳೆದರೂ ಇತ್ಯರ್ಥಗೊಳ್ಳದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಈ ಸೂಚನೆ ನೀಡಿದ್ದು, ಇನ್ನು ಮುಂದೆ ಅರ್ಜಿಗಳನ್ನು 15 ದಿನಗಳಲ್ಲೇ ಇತ್ಯರ್ಥಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಅಲ್ಲದೆ, ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇವೆ ಎಂಬುದನ್ನು ಪರಿಶೀಲಿಸಿ ಪ್ರಕರಣದ ವಸ್ತುಸ್ಥಿತಿ, ಅರ್ಜಿ ಎಷ್ಟು ಕಾಲದಿಂದ ಬಾಕಿ ಇದೆ ಮತ್ತು ಅದಕ್ಕೆ ಕಾರಣಗಳೇನು ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಸಚಿವರು, ಜು. 30 ಮತ್ತು 31ರಂದು ನಡೆಯಲಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದಾರೆ.
ಹುತಾತ್ಮ ಯೋಧರ ಕುಟುಂಬದವರು ಜಮೀನು, ನಿವೇಶನ ಮತ್ತಿತರೆ ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳು ಇತ್ಯರ್ಥ ಕಾಣದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಮಾಧ್ಯಮ ವರದಿಗಳನ್ನು ಆಧರಿಸಿ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದನ್ನು ಶ್ಲಾ ಸಿರುವ ಸಚಿವ ಆರ್.ವಿ.ದೇಶಪಾಂಡೆ, ಅಂತಹ ಅರ್ಜಿಗಳ ಅತ್ಯರ್ಥಕ್ಕೆ ಕಾಲಮಿತಿ ನಿಗದಿಪಡಿಸಿದ್ದಾರೆ.