ಬಿಜೆಪಿ Rallyಗೆ ಲಾಠಿ ಏಟು:ಮಂಗಳೂರು ಚಲೋಗೆ ಅವಕಾಶ ನೀಡದ ಪೊಲೀಸರು
Team Udayavani, Sep 6, 2017, 8:10 AM IST
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ಬೈಕ್ Rallyಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಲ್ಲದೆ, ಒಂದು ಬಸ್ಗೆ ಬೆಂಕಿ ಹಚ್ಚಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠೀಪ್ರಹಾರ ಮಾಡಿದ್ದಾರೆ.
ಇನ್ನೊಂದೆಡೆ ಅನುಮತಿ ನಿರಾಕರಿಸಿದ ಬಳಿಕವೂ ಬೆಂಗಳೂರಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಬೈಕ್ Rallyಗೆ ಮುಂದಾಗಿದ್ದರಿಂದ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠೀ ಪ್ರಹಾರ ನಡೆಸಿದ್ದಾರೆ. ಲಾಠೀಪ್ರಹಾರದಲ್ಲಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅರವಿಂದ್ ರೆಡ್ಡಿ ಎಂಬವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ Rallyಗೆ ಮುಂದಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಮುಖಂಡರಾದ ಆರ್. ಅಶೋಕ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪ್ರತಾಪ್ ಸಿಂಹ ಸಹಿತ 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರೆ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್, ಬೆಳಗಾವಿಯಲ್ಲಿ ಸಂಜಯ್ ಪಾಟೀಲ್, ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಮತ್ತಿತರರೂ ಬಂಧನಕ್ಕೊಳಗಾಗಿದ್ದಾರೆ.
ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿರುವ ಮತ್ತು ಹಿಂದೂಪರ ಸಂಘಟನೆಗಳ ಹತ್ಯೆಗಳಲ್ಲಿ ತೊಡಗಿರುವ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಈ ಸಂಘಟನೆಗಳಿಗೆ ಸಹಕಾರ ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ಯುವ ಮೋರ್ಚಾ ಮಂಗಳೂರು ಚಲೋ ಹಮ್ಮಿಕೊಂಡಿದೆ. ಅದರಂತೆ ಮಂಗಳವಾರ ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಬೈಕ್ ರ್ಯಾಲಿ ಮಂಗಳೂರಿಗೆ ಹೊರಡಬೇಕಿತ್ತು.
ರಸ್ತೆ ತಡೆ, ಲಾಠೀಪ್ರಹಾರ: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಹಿರಂಗ ಸಭೆ ನಡೆಸಿ ಬೈಕ್ ರ್ಯಾಲಿ ಹೊರಡಬೇಕಿತ್ತಾದರೂ ಪೊಲೀಸರು ರ್ಯಾಲಿಗೆ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟಗಳು ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠೀಪ್ರಹಾರ ನಡೆಸಿ ಕಾರ್ಯಕರ್ತರನ್ನು ಬಂಧಿಸಿ ಬಸ್ಗಳಲ್ಲಿ ಕರೆದೊಯ್ಯ ಲಾರಂಭಿಸಿದರು. ಇದರ ನಡುವೆಯೇ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ತಳ್ಳಿದ ಆರ್. ಅಶೋಕ್, ಪ್ರತಾಪ್ ಸಿಂಹ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಿ. ಸೋಮಣ್ಣ ಮತ್ತಿತರರು ಮುಖ್ಯ ರಸ್ತೆಗೆ ಬಂದು ಧರಣಿ ಆರಂಭಿಸಿದರು. ಅನಂತರ ಪೊಲೀಸರು ಬಲವಂತವಾಗಿ ಅವರನ್ನು ಬಂಧಿಸಿ ಅಲ್ಲಿಂದ ಕರೆದೊಯ್ದರು.
ಬಸ್ಗೆ ಬೆಂಕಿ, ಕಲ್ಲು ತೂರಾಟ
ಹುಬ್ಬಳ್ಳಿಯಲ್ಲಿ ಬೈಕ್ Rallyಗೆ ಮುಂದಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಮತ್ತಿತರರನ್ನು ಪೊಲೀಸರು ಬಂಧಿಸುತ್ತಿದ್ದಂತೆ ನೇಕಾರ ನಗರದಲ್ಲಿ ಬೈಕ್ನಲ್ಲಿ ಆಗಮಿಸಿದ ಇಬ್ಬರು, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಒಂದನ್ನು ತಡೆದು ನಿಲ್ಲಿಸಿ ಮುಂಭಾಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತತ್ಕ್ಷಣವೇ ಸ್ಥಳೀಯರು ಹಾಗೂ ಪ್ರಯಾಣಿಕರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅದೇ ರೀತಿ ರವಿನಗರ ಹಾಗೂ ಮಂಜುನಾಥ ನಗರದಲ್ಲಿ ಎರಡು ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಗಾಜು ಪುಡಿಪುಡಿಯಾಗಿವೆ.
ಮಾರ್ಗ ಮಧ್ಯೆಯೇ ಬಂಧನ
ಮಂಗಳೂರು ಚಲೋ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚನ್ನಪಟ್ಟಣ ಮತ್ತಿತರ ಭಾಗಗಳಿಂದ ಬೆಂಗಳೂರಿಗೆ ಬರುತ್ತಿದ್ದವರನ್ನು ಅಲ್ಲಿನ ಪೊಲೀಸರು ಬೆಳಗ್ಗೆಯೇ ಬಂಧಿಸಿ ಅನಂತರ ಬಿಡುಗಡೆ ಮಾಡಿದ್ದಾರೆ. ಧಾರವಾಡ, ಬೆಳಗಾವಿ ಸಹಿತ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಿಂದ ಹುಬ್ಬಳ್ಳಿಗೆ ಬರುತ್ತಿದ್ದವರನ್ನು ಆಯಾ ಜಿಲ್ಲೆಗಳಲ್ಲೇ ಪೊಲೀಸರು ಬಂಧಿಸಿ Rallyಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಾರೆ.
ಮಂಗಳೂರಲ್ಲಿ Rally ನಡೆಸಿಯೇ ಸಿದ್ಧ
ಏನೇ ಅಡ್ಡಿ - ಆತಂಕಗಳನ್ನು ಒಡ್ಡಿದರೂ ಸೆ. 7ರಂದು ಮಂಗಳೂರಿನಲ್ಲಿ Rally ನಡೆಸುವುದು ಶತಃಸಿದ್ಧ ಎಂದು ಬಿಜೆಪಿ ಯುವ ಮೋರ್ಚಾ ಹೇಳಿದೆ. ಮಂಗಳವಾರ 14 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದ್ದು, ಬುಧವಾರ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಡ್ಯ, ಉತ್ತರ ಕನ್ನಡ, ಕೊಡಗು, ಮೈಸೂರು ಹಾಗೂ ಹಾವೇರಿಯಿಂದ Rally ಆರಂಭವಾಗಲಿದೆ. ಅನೇಕ ನಾಯಕರು ಈಗಾಗಲೇ ಬಸ್, ಕಾರಿನಲ್ಲಿ ಮಂಗಳೂರು ತಲುಪಿದ್ದಾರೆ. ಗುರುವಾರ ಪ್ರಮುಖ ನಾಯಕರೆಲ್ಲರೂ ಮಂಗಳೂರು ತಲುಪಲಿದ್ದಾರೆ. ಸ್ಥಳೀಯ ಕಾರ್ಯ ಕರ್ತರ ಸಹಿತ 20 ಸಾವಿರಕ್ಕೂ ಹೆಚ್ಚು ಮಂದಿ Rallyಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದೆ.
ಬೆಂಗಳೂರಲ್ಲಿದ್ದರೂ ಪ್ರತಿಭಟನೆಗೆ ಬಾರದ ಬಿಎಸ್ವೈ
ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿದ್ದರೂ ಮಂಗಳೂರು ಚಲೋ Rallyಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಮೂಲಗಳ ಪ್ರಕಾರ ಪಕ್ಷದ ಇತರ ಮುಖಂಡರು ಹಾಗೂ ಪೊಲೀಸರ ಮನವಿ ಮೇಲೆ ಅವರು ಪ್ರತಿಭಟನೆಯಿಂದ ದೂರ ಉಳಿದಿದ್ದರು ಎನ್ನಲಾಗಿದೆ. ಪೊಲೀಸರು Rallyಗೆ ಅನುಮತಿ ನಿರಾಕರಿಸಿದ್ದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರನ್ನು ಬಂಧಿಸುತ್ತಾರೆ ಎಂಬುದು ಸೋಮವಾರವೇ ಖಚಿತವಾಗಿತ್ತು. ರಾಜ್ಯಾಧ್ಯಕ್ಷರನ್ನು ಬಂಧಿಸಿದರೆ ಬಳಿಕ ಹೋರಾಟದ ಕಾವು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಕೆಲವು ಮುಖಂಡರು ಸೋಮವಾರ ರಾತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರತಿಭಟನೆಗೆ ಬರುವುದು ಬೇಡ ಎಂಬ ಸಲಹೆ ನೀಡಿದ್ದರು. ಮಂಗಳವಾರ ಬೆಳಗ್ಗೆ ಪೊಲೀಸರೂ ಈ ಕುರಿತು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅವರು ಭಾಗವಹಿಸಲಿಲ್ಲ ಎಂದು ತಿಳಿದುಬಂದಿದೆ.
Rallyಗೆ ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಣೆ
ಮಡಿಕೇರಿ: ಮಂಗಳೂರಿನಲ್ಲಿ ಸೆ. 7ರಂದು ನಡೆಯಲಿರುವ ಬಿಜೆಪಿ Rallyಯಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯಿಂದ ಆಯೋಜಿಸಲಾಗಿರುವ ಬೈಕ್ Rallyಗೆ ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಸಾರ್ವಜನಿಕರಿಗೆ,ವಾಹನ ಚಾಲಕರಿಗೆ ಆಗಬಹುದಾದ ತೊಂದರೆಗಳನ್ನು ಉಲ್ಲೇಖೀಸಿ ಯಾವುದೇ ಸಂಘಟನೆಗಳು ಬೈಕ್ Rally ಸಹಿತ ಜಾಥಾ, ಪಾದಯಾತ್ರೆ, ಮೆರವಣಿಗೆ, ಪ್ರತಿಭಟನೆಗಳನ್ನು ನಡೆಸುವುದನ್ನು ಕಲಂ 35 (3) ಕರ್ನಾಟಕ ಪೊಲೀಸ್ ಕಾಯ್ದೆಯಡಿ ಸೆ. 5ರ ಬೆಳಗ್ಗೆ 10 ಗಂಟೆಯಿಂದ ಸೆ. 9ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ಆದೇಶ ಹೊರಡಿಸಿದ್ದಾರೆ.
ಸೆ. 7ರ ಬೈಕ್ Rallyಗೆ ನಿರ್ಬಂಧ : ಇಂದು ಪಿಐಎಲ್ ವಿಚಾರಣೆ ಸಾಧ್ಯತೆ
ಬಿಜೆಪಿ ಯುವ ಮೋರ್ಚಾ ಸೆ. 7ರಂದು ಮಂಗಳೂರಿನಲ್ಲಿ ಆಯೋಜಿಸಿರುವ ‘ಮಂಗಳೂರು ಚಲೋ’ ಪ್ರತಿಭಟನ Rally ನಡೆಸದಂತೆ ನಿರ್ಬಂಧ ಹೇರಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ದ.ಕ. ಜಿಲ್ಲೆ ಮೂಲ್ಕಿ ತಾಲೂಕಿನ ಕಾರ್ನಾಡ್ ಗ್ರಾಮದ ಸುಹೈಲ್ ಖಾನ್, ಬಂಟ್ವಾಳ ತಾಲೂಕಿನ ಮಾಧವ, ಮಹಮದ್ ಸಫೂನ್, ಅಬ್ದುಲ್ ಅಲ್ತಾಫ್, ಮಂಗಳೂರಿನ ಮಹಮದ್ ಇಕ್ಬಾಲ್, ಅಬು ಸೀನಾನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಬಿಜೆಪಿಯವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಮಂಗಳೂರು ಚಲೋ ಮಾಡುವ ಬದಲಿಗೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ದಿಲ್ಲಿ ಚಲೋ ಮಾಡಿದರೆ ನಾವೂ ಅವರೊಟ್ಟಿಗೆ ಸೇರಿಕೊಳ್ಳುತ್ತೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?