ಮನ್ನಾದ ಮೇಲೆ ಸಿದ್ದು ಮನಸು?
Team Udayavani, Feb 15, 2018, 6:00 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರದ ಕಡೆಯ ಬಜೆಟ್ ಅನ್ನು ಶುಕ್ರವಾರ ಮಂಡಿಸಲಾಗುತ್ತಿದ್ದು, ರೈತರು, ಕೈಗಾರಿಕೋದ್ಯಮಿಗಳು, ಜನಸಾಮಾನ್ಯರಲ್ಲಿ ಹತ್ತು ಹಲವಾರು ನಿರೀಕ್ಷೆಗಳಿವೆ.
ಸದ್ಯದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 13ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರಿಗೆ ಜನಪ್ರಿಯ ಯೋಜನೆಗಳ ಘೋಷಣೆ ಅನಿವಾರ್ಯ. ಹೀಗಾಗಿ, ಬಜೆಟ್ ಗಾತ್ರ 2.10 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆಯಿದ್ದು ಸಂಪನ್ಮೂಲ ಕ್ರೂಢೀಕರಣವೇ ಸವಾಲಾಗಿದೆ.
ಈ ಬಾರಿಯ ಬಜೆಟ್ನಲ್ಲೂ ಭಾಗ್ಯಗಳ ಸರಣಿ ಮುಂದುವರಿಯಲಿದ್ದು “ಅಹಿಂದ’ ವರ್ಗದ ಸರ್ಕಾರ ಎಂಬ “ಹಣೆಪಟ್ಟಿ’ಯಿಂದ ಪಾರಾಗಲು ಅಹಿಂದ ಜತೆ ಇತರೆ ಸಮುದಾಯ ಸೆಳೆಯಲು ಭರಪೂರ ಘೋಷಣೆಗಳು ಇರಬಹುದು ಎಂಬ ಮಾತುಗಳಿವೆ. ಜಾತಿಗಳ ಓಲೈಕೆಗಾಗಿ ಸಮುದಾಯ ಭವನ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಜಮೀನು ಹಾಗೂ ಅನುದಾನ ಬಿಡುಗಡೆ ಬೇಡಿಕೆಗೆ ಬಜೆಟ್ನಲ್ಲಿ ಸ್ಪಂದನೆ ದೊರೆಯಲಿದೆ ಎಂದು ಹೇಳಲಾಗಿದೆ.
ಸಾಲ ಮನ್ನಾದ ನಿರೀಕ್ಷೆ
ಪ್ರಮುಖವಾಗಿ ಸಂಪೂರ್ಣ ಸಾಲ ಮನ್ನಾ ರೈತಾಪಿ ಸಮುದಾಯದ ಒಕ್ಕೊರಲ ಬೇಡಿಕೆಯಾಗಿದೆ. ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ ಸಂಪೂರ್ಣ ಸಾಲ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದಲ್ಲಿ ಸ್ವಲ್ಪ ಪ್ರಮಾಣವನ್ನಾದರೂ ಮಾಡಬೇಕು ಎಂಬ ಆಗ್ರಹ ಪ್ರಬಲವಾಗಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಧೈರ್ಯ ಮಾಡುತ್ತಾರಾ ಕಾದು ನೋಡಬೇಕಾಗಿದೆ. ಆದರೆ, ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈಗಾಗಲೇ ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ 50 ಸಾವಿರ ರೂ.ವರೆಗಿನ 8.165 ಕೋಟಿ ರೂ.ಮನ್ನಾ ಆಗಿದ್ದು, ಶೂನ್ಯ ಬಡ್ಡಿದರದ ಸಾಲದ ಬಾಬಿ¤ನಲ್ಲಿ ಇನ್ನೂ 2600 ಕೋಟಿ ರೂ. ಬಾಕಿಯಿದೆ. ಅದನ್ನಾದರೂ ಮಾಡಿ ಎಂಬ ಮನವಿಯಿದೆ. ಜತೆಗೆ 28.73 ಲಕ್ಷ ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ 42 ಸಾವಿರ ಕೋಟಿ ರೂ.ನಷ್ಟು ಸಾಲ ಪಡೆದಿದ್ದಾರೆ.
ಕೈಗಾರಿಕೋದ್ಯಮಿಗಳ ಬಹುಕಾಲದ ಬೇಡಿಕೆಯಾದ ಕೈಗಾರಿಕೆ ಪ್ರದೇಶಗಳ ಸ್ಥಾಪನೆ, ತೆರಿಗೆ ಹಾಗೂ ಸೆಸ್ ಪ್ರಮಾಣ ಇಳಿಕೆ, 24 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ, ರಸ್ತೆ, ರೈಲು, ವಿಮಾನ ಸಂಪರ್ಕ ಮಾರ್ಗ ಸೇರಿ ಮೂಲಸೌಕರ್ಯ ವೃದ್ಧಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಪ್ರತ್ಯೇಕ ಕನಿಷ್ಠ ವೇತನ ನೀತಿ ಜಾರಿಯ ಬೇಡಿಕೆಯಿದ್ದು ಆ ಬಗ್ಗೆ ಬಜೆಟ್ನಲ್ಲಿ ಯಾವ ರೀತಿಯ ಸ್ಪಂದನೆ ದೊರೆಯಲಿದೆ ಕಾದು ನೋಡಬೇಕಾಗಿದೆ. ಕೃಷ್ಣಾ – ಕಾವೇರಿ ಕೊಳ್ಳದಲ್ಲಿ ಚಾಲ್ತಿಯಲ್ಲಿರುವ ನೀರಾವರಿ ಕಾಮಗಾರಿಗಳು, ಮೇಕೆದಾಟು ಯೋಜನೆ ಅನುಷ್ಟಾನ ಹಾಗೂ ಎತ್ತಿನಹೊಳೆ ಯೋಜನೆಗಾಗಿ ಅಗತ್ಯ ಇರುವ ಹೆಚ್ಚುವರಿ ಅನುದಾನ ಬಜೆಟ್ನಲ್ಲಿ ಮೀಸಲಿಡಬೇಕಾಗಿದೆ.
ಜಿಎಸ್ಟಿ ಜಾರಿ ಹಿನ್ನೆಲೆಯಲ್ಲಿ ತೆರಿಗೆ ವಿಚಾರದಲ್ಲಿ ಹೆಚ್ಚಳ ಅಥವಾ ಇಳಿಕೆ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಪೆಟ್ರೋಲಿಯಂ ಉತ್ಪನ್ನಗಳು, ಮದ್ಯ ಹಾಗೂ ಸಿಗರೇಟ್ ಸೇರಿದಂತೆ ಅಬಕಾರಿ ವಲಯದಿಂದಲೇ ಹೆಚ್ಚು ಸಂಪನ್ಮೂಲ ನಿರೀಕ್ಷಿಸಬೇಕು. ಈ ವಲಯದಲ್ಲಿ ತೆರಿಗೆ ಹೆಚ್ಚಳವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
2018-19ನೇ ಸಾಲಿನಲ್ಲಿ ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಗುರಿ (ಕೇಂದ್ರ ಸರ್ಕಾರದ ಸಹಾಯಧನ ಮತ್ತು ತೆರಿಗೆ ಹಂಚಿಕೆ ಹೊರತುಪಡಿಸಿ) 1 ಲಕ್ಷ ಕೋಟಿ ರೂ. ಮೀರುವ ಅಂದಾಜು ಮಾಡಲಾಗಿದೆ. ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ.ಗೆ ತಲುಪುವ ನಿರೀಕ್ಷೆ ಇರುವುದರಿಂದ ಮತ್ತಷ್ಟು ಸಾಲ ಪಡೆದರೆ ಪ್ರತಿಪಕ್ಷಗಳಿಂದ ಟೀಕೆಗೊಳಗಾಗುವ ಆತಂಕವೂ ಇದೆ.
ಅನುದಾನ ಕಡಿತಕ್ಕೆ ಸೂಚನೆ
ರಾಜ್ಯ ಸರ್ಕಾರ ಹೆಚ್ಚುವರಿ ಸಾಲ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ 2017-18ನೇ ಸಾಲಿನ ಬಜೆಟ್ನಲ್ಲಿ ಇಲಾಖೆಗಳಿಗೆ ನೀಡಿದ ಅನುದಾನ ಕಡಿತಗೊಳಿಸುವಂತೆ ಸಿದ್ದರಾಮಯ್ಯ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. ಬಜೆಟ್ ನಂತರ ಕೆಲವು ಹೊಸ ಕಾರ್ಯಕ್ರಮಗಳು, ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹೊರೆ ಬಿದ್ದಿದೆ. ಈ ಹೊರೆಗೆ ತಕ್ಕಂತೆ ರಾಜಸ್ವ ಸಂಗ್ರಹ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನದಲ್ಲಿ ಇದುವರೆಗೆ ಬಿಡುಗಡೆ ಮಾಡಿರುವ ಹಣವನ್ನು ಪೂರ್ಣ ವೆಚ್ಚ ಮಾಡದ ಇಲಾಖೆಗಳಿಗೆ ಶೇ. 20ರವರೆಗೆ ಕಡಿತಗೊಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ