ಕಿಂಗ್ ಇಲ್ಲದ ಕಾಫೀ ಡೇಯಲ್ಲಿ ಮೌನ
Team Udayavani, Jul 31, 2019, 3:08 AM IST
ಬೆಂಗಳೂರು: ಕಾಫಿ ಉದ್ಯಮಿ ವಿ.ಜಿ.ಸಿದ್ಧಾರ್ಥ ನಾಪತ್ತೆ ಪ್ರಕರಣದಿಂದ ಕೆಫೆ ಕಾಫೀ ಡೇ ಸಿಬ್ಬಂದಿ ನೀರವ ಮೌನದಲ್ಲಿ ಮುಳುಗಿದ್ದಾರೆ. ಸದಾ ನೌಕರರ ಹಿತ ಬಯಸುತಿದ್ದ ಸಿದ್ಧಾರ್ಥ ಅವರು ಕಾಣೆಯಾದ ಸುದ್ದಿ ಕೇಳಿ ಸಿಬ್ಬಂದಿ ಮೌನಕ್ಕೆ ಶರಣಾಗಿದ್ದಾರೆ.
ಸೋಮವಾರ ರಾತ್ರಿ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾದ ಸಿದ್ಧಾರ್ಥ ಸುಳಿವಿಗಾಗಿ ನಿಂರತರ ಹುಡುಕಾಟ ನಡೆಯುತ್ತಿದೆ. ಪ್ರಪಂಚದ ಉದ್ದಗಲಕ್ಕೂ ತನ್ನ ಕಾಫಿ ಉದ್ಯಮವನ್ನು ವಿಸ್ತರಿಸಿದ್ದ ಸಿದ್ಧಾರ್ಥ 1,500ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದೆ. ಈ ಮೂಲಕ 50ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ ನೀಡಿದೆ. ಕಾಫಿ ಡೇನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದ ಸಾವಿರಾರು ಗ್ರಾಮೀಣ ಭಾಗದ ಯುವಕರಿಗೆ ಇಂಗ್ಲಿಷ್ ತರಬೇತಿ ನೀಡಿ ಉದ್ಯೋಗ ನೀಡಿದೆ.
ಕಚೇರಿಗೆ ಭದ್ರತೆ: ಸಿದ್ಧಾರ್ಥ ನಾಪತ್ತೆ ಬಳಿಕ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಕಾರ್ಪೊರೇಟ್ ಕಚೇರಿ ಸುತ್ತಮುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಸೋಮವಾರ ರಾತ್ರಿಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಈ ಕಚೇರಿಗೆ ನಿಯೋಜನೆ ಮಾಡಲಾಗಿತ್ತು. ಯಾವುದೇ ವಾಹನ ಪ್ರಾಕಿಂಗ್ ಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.
ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖ: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಾಫಿ ಸೇವಿಸಲು ಬರುತಿದ್ದ ಗ್ರಾಹಕರ ಸಂಖ್ಯೆ ಮಂಗಳವಾರ ಕೊಂಚ ಇಳಿಮುಖವಾಗಿತ್ತು. ತಮ್ಮ ಮಾಲಿಕನ ಹುಡುಕಾಟದ ನಿರೀಕ್ಷೆಯಲ್ಲಿದ್ದ ಕಚೇರಿ ಸಿಬ್ಬಂದಿ ಆತಂಕದಲ್ಲಿ ಮುಳುಗಿದ್ದರು. ಈ ವೇಳೆ “ಉದಯವಾಣಿ’ಯೊಂದಿಗೆ ಮಾತನಾಡಿದ ಹತ್ತಾರು ಸಿಬ್ಬಂದಿ ತಮ್ಮ ಮಾಲಿಕನ ಹೃದಯ ವೈಶಾಲ್ಯತೆ ಬಗ್ಗೆ ವಿವರಿಸಿದರು.
ವಿಠuಲ್ ಮಲ್ಯಾ ರಸ್ತೆಯ ಕಚೇರಿ ಬಳಿ ಮಾತನಾಡಿದ ಸಿಬ್ಬಂದಿ ದೀಪ್ತಿ ದೇಸಾಯಿ, ಸಿದ್ಧಾರ್ಥ ಸರ್ ಅತೀ ಮೃದು ಸ್ವಾಭಾವದ ವ್ಯಕ್ತಿಯಾಗಿದ್ದರು. ಕಚೇರಿಗೆ ವಾರಕ್ಕೆ ಕನಿಷ್ಠ 4ಬಾರಿ ಬರುತಿದ್ದರು. ಸೋಮವಾರ ಸಹಾ ಕಚೇರಿಗೆ ಬಂದು ಸಹಜವಾಗಿಯೇ ಇದ್ದರು. ಆದರೆ, ಈಗ ಸಿದ್ಧಾರ್ಥ ಸರ್ ಕಾಣೆಯಾಗಿರುವ ವಿಚಾರ ತಿಳಿದು ನಿಜಕ್ಕೂ ತುಂಬಾ ಬೇಸರ ತಂದಿದೆ ಎಂದರು.
ಗ್ರಾಮೀಣ ಭಾಗಕ್ಕೆ ಉದ್ಯೋಗ: ಬ್ರಿಗೇಡ್ ರಸ್ತೆ ಬಳಿ ಇರುವ ಕೆಫೆ ಕಾಫಿ ಡೇ ಸಿಬ್ಬಂದಿ ಕಿರಣ್ “ಉದಯವಾಣಿ’ ಜತೆ ಮಾತನಾಡಿ, ನಾನು ಇಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತಿದ್ದೇನೆ. ಕನಿಷ್ಠ ಒಂದು ತಿಂಗಳು ಸಹಾ ಸಂಬಳ ನೀಡುವ ವಿಚಾರದಲ್ಲಿ ವಿಳಂಬವಾಗಿರಲಿಲ್ಲ. ನಾನು ಕೋಲಾರದ ಚಿಂತಾಮಣಿ ತಾಲೂಕಿನಿಂದ ಬಂದಿದ್ದೇನೆ. ನನ್ನ ಜತೆ ಇನ್ನೂ ಆರು ಜನ ಕೆಲಸಕ್ಕೆ ಸೇರಿಕೊಂಡರು. ನಮಗೆ ಇಂಗ್ಲಿಷ್ ಓದಲು ಸಹಾ ಕಷ್ಟವಾಗುತಿತ್ತು.
“ಬಟ್ ನೌ ಐ ಕಾನ್ ಸ್ಪೀಕ್ ಬೆಸ್ಟ್ ಇನ್ ಇಂಗ್ಲಿಷ್’ ಎಂದು ಥಟ್ಟನೆ ಆಂಗ್ಲಭಾಷೆಯಲ್ಲಿ ಉದ್ಗರಿಸಿದ. ಇದಲ್ಲದೆ ಗ್ರಾಮೀಣ ಪ್ರದೇಶದ ಯುವಕರಿಗೆ ಊರುಗಳಲ್ಲಿ ದುಡಿಯಲು ಕೆಲಸ ಇಲ್ಲ. ಕೆಫೆ ಕಾಫಿ ಡೇ ನಮಗೆ ಅವಕಾಶ ನೀಡದಿದ್ದರೆ ನಾವು ಕೂಡ ಹಳ್ಳಿಗಳಲ್ಲಿಯೇ ಉಳಿದು ಬಿಡುತಿದ್ದೆವು. ನಮಗೆ ಅವಕಾಶ ಕೊಟ್ಟ ಕಾಫಿ ಡೇ ಮಾಲಿಕ ಇಂದು ಕಾಣೆಯಾಗಿದ್ದಾರೆ. ಆದಷ್ಟು ಬೇಗ ಅವರು ಸಿಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತೇನೆ ಎಂದು ಕಿರಣ್ ಹೇಳಿದರು.
ಪಾರ್ಟ್ ಟೈಂ ಕೆಲಸಗಾರರಿಗೆ ಆಸರೆ: ಗರುಡಾ ಮಾಲ್ನಲ್ಲಿರುವ ಕಾಫಿ ಡೇ ಅಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿರುವ ಆಕಾಶ್ ,ನಾನು ಬಿಕಾಂ ಓದುತಿದ್ದೇನೆ. ನನ್ನ ಓದಿಗೆ ತಗಲುವ ವೆಚ್ಚ ಭರಿಸಲು ಕಾಫಿ ಡೇಗೆ ಕೆಲಸಕ್ಕೆ ಸೇರಿದ್ದೇನೆ. ಇಲ್ಲಿ ಯಾವುದೇ ಟಾರ್ಗೆಟ್ ಇಲ್ಲ, ಟಾರ್ಚರ್ ಇಲ್ಲ. ನಮ್ಮ ಕೆಲಸದ ಸಮಯಕ್ಕೆ ಸರಿಯಾಗಿ ಇಲ್ಲಿಗೆ ಬಂದು ರಾತ್ರಿ ಕ್ಲೋಸಿಂಗ್ ಟೈಂಮಿಗ್ಸ್ ತನಕ ಇರುತೇನೆ.
ಇಲ್ಲಿ ಕೆಲಸ ಮಾಡುವುದರಿಂದ ಹತ್ತಾರು ರೀತಿಯ ಜನರನ್ನು ನಾವು ನೋಡುತ್ತೇವೆ. ಇದರಿಂದ ನಮ್ಮ ಭಾಷಾ ಕೌಶಲ್ಯ ಹೆಚ್ಚಾಗಲಿದೆ. ಈವರಗೆ ಸಂಬಳದ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ನನ್ನಂತಹ ಎಷ್ಟೋ ಜನ ಇಲ್ಲಿ ಕೆಲಸ ಮಾಡುತಿದ್ದಾರೆ ಇವರಿಗೆಲ್ಲಾ ಅವಕಾಶ ಮಾಡಿಕೊಟ್ಟ ಕಾಫಿ ಡೇ ಮಾಲೀಕ ಸಂಕಷ್ಟದಲ್ಲಿದೆ ಎನುವುದು ದುಃಖಕರ ಸಂಗತಿ ಎಂದು ಬೇಸರಿಸಿಕೊಂಡರು.
ನಮಗೆ ಬೆಂಗಳೂರಿನ ಪರಿಚಯವೇ ಇರಲಿಲ್ಲ. ಕನ್ನಡ ಬಿಟ್ಟರೇ ಬೇರೆ ಯಾವ ಭಾಷೆ ಬರುತಿರಲಿಲ್ಲ. ಆದರೆ, ಕಾಫಿ ಡೇ ಮೂಲಕ ನಮಗೆ ಇಂಗ್ಲಿಷ್ ತರಬೇತಿ ನೀಡಿ ಕೆಲಸ ನೀಡಿದ್ದಾರೆ.ನಂತರ ಇಲ್ಲಿನ ಗ್ರಾಹಕರ ಜತೆ ಮಾತನಾಡಿ ಈಗ ಹಿಂದಿ ಕೂಡ ಕಲಿತಿದ್ದೇನೆ. ನನ್ನಂತ ಸಾವಿರಾರು ಯುವಕರು ಕೆಫೆ ಕಾಫಿ ಡೇನ ಉಪಯೋಗ ಪಡೆದಿದ್ದಾರೆ. ಸದ್ಯ ನಾನೇ ನನ್ನ ಕುಟುಂಬವನ್ನು ಮುನ್ನಡೆಸುತಿದ್ದೇನೆ.
-ದೀಪಕ್, ಉತ್ತರ ಕನ್ನಡ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ