ಮತ್ತೆ ನಡೆಯಲಿದೆ “ಸೀಮಾತೀತ ಸಾಹಿತ್ಯ ಪರ್ಬ’
Team Udayavani, Mar 13, 2020, 11:40 AM IST
ಬೆಂಗಳೂರು: ಜಾತಿ, ವರ್ಣ, ಜನಾಂಗ, ಭಾಷೆ, ಗಡಿ, ಪ್ರಾದೇಶಿಕತೆಗಳನ್ನು ಮೀರಿ ಚಿಂತಿಸುವ “ಸೀಮಾತೀತ ಸಾಹಿತ್ಯ ಪರ್ಬ’ಹಮ್ಮಿಕೊಳ್ಳುವ ಬಗ್ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಲೋಚನೆ ನಡೆಸಿದೆ.
ಈ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ.ಅರವಿಂದ ಮಾಲಗತ್ತಿ ಅವರು “ಸೀಮಾತೀತ ಸಾಹಿತ್ಯ ಪರ್ಬ’ಎಂಬ ವಿಭಿನ್ನರೂಪದ ಕಾರ್ಯಕ್ರಮ ರೂಪಿಸಿದ್ದರು. ಜತೆಗೆ, ಈ ಸಾಹಿತ್ಯ ಹಬ್ಬವನ್ನು ಹಮ್ಮಿಕೊಳ್ಳಲು ಮುಂದಾಗಿದ್ದರು.
ಆ ಹಿನ್ನೆಲೆಯಲ್ಲಿ ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯಗಳ ಸಂಶೋಧಕರು, ವಿದ್ವಾಂಸರು, ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ಮಂದಿ ಸಾಹಿತ್ಯ ಹಬ್ಬದಲ್ಲಿ ಭಾಗವಹಿಸುವ ಸಲುವಾಗಿಯೇ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಆದರೆ, ಸರ್ಕಾರ ಬದಲಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಅರವಿಂದ ಮಾಲಗತ್ತಿ ಅವರು ದಿಢೀರ್ ಆಗಿ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಕಾರಣಕ್ಕಾಗಿಯೇ ರವೀಂದ್ರ ಕಲಾಕ್ಷೇತ್ರದಲ್ಲಿ (ಈ ಹಿಂದೆ ಆಗಸ್ಟ್ 1 ರಿಂದ 3ವರೆಗೆ) ನಡೆಯಬೇಕಾಗಿದ್ದ “ಸೀಮಾತೀತ ಸಾಹಿತ್ಯ ಪರ್ಬ’ ಸ್ಥಗಿತಗೊಂಡಿತ್ತು.
ಸಂಶೋಧನಾ ದೃಷ್ಟಿಯಿಂದ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಆ ಹಿನ್ನೆಲೆಯಲ್ಲಿಯೇ “ಸೀಮಾತೀತ ಸಾಹಿತ್ಯ ಪರ್ಬ’ ಸೇರಿದಂತೆ ಈ ಹಿಂದಿನ ಅಕಾಡೆಮಿಯ ಸದಸ್ಯರು ರೂಪಿಸಿದ ಇನ್ನೂ ಕೆಲವು ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಕುರಿತಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಚರ್ಚೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಸೀಮಾತೀತ ಸಾಹಿತ್ಯ ಪರ್ಬ’ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ಇದೆ. ಆದರೆ, ನಾನೊಬ್ಬನೆ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿಯೇ ಅಕಾಡೆಮಿಯ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅವರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಇದು ಭಿನ್ನವಾದ ಸಾಹಿತ್ಯ ಸಮ್ಮೇಳನ : ಸಂಶೋಧನಾ ಕ್ಷೇತ್ರಕ್ಕೆ ಭದ್ರ ಬುನಾದಿಯನ್ನು ಹಾಕುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಜತೆಗೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಭಿನ್ನವಾದ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಲಾಗಿತ್ತು. ಸಂಶೋಧನಾ ಕ್ಷೇತ್ರದ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಆಶಯ ಇದರಲ್ಲಿತ್ತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ. “ಸೀಮಾತೀತ ಸಾಹಿತ್ಯ ಪರ್ಬ’ಕ್ಕಾಗಿಯೇ ಅಕಾಡೆಮಿ ವತಿಯಿಂದ ಸುಮಾರು 30 ಲಕ್ಷ ರೂ.ಅನುದಾನ ಮೀಸಲಿಡಲಾಗಿತ್ತು. ಕೇರಳ, ಮದ್ರಾಸ್, ಮುಂಬೈ, ಹೈದ್ರಾಬಾದ್ ಸೇರಿದಂತೆ ದೇಶದ ಹಲವು ಕಡೆಗಳಿಂದ ಸಂಶೋಧಕರು ಕೂಡ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ವಿವಿಧ ರಾಜ್ಯಗಳ ಸಾಹಿತಿಗಳು, ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು ಭಿನ್ನವಾದಂತಹ ಸಾಹಿತ್ಯ ಸಮ್ಮೇಳನ ನಡೆಸುವ ಆಲೋಚನೆ ನಮ್ಮದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ತುಳುವಿನ ಪರ್ಬ ಶಬ್ಧ ಪ್ರಚಲಿತಕ್ಕೆ ಬರಬೇಕು : “ಪರ್ಬ’ಎಂಬ ಶಬ್ಧವನ್ನು ಸಮ್ಮೇಳನದ ಶೀರ್ಷಿಕೆಗೆ ಬಳಕೆ ಮಾಡಲಾಗಿದೆ. ತುಳು ಭಾಷೆಯಲ್ಲಿ “ಪರ್ಬ’ ಎಂದರೆ ಹಬ್ಬ ಎಂಬರ್ಥ ಬರುತ್ತದೆ. ನಮ್ಮ ಸಾಂಸ್ಕೃತಿಕ ಬೇರುಗಳು ಸ್ಥಳೀಯ ಭಾಷೆಯೊಂದಿಗೆ ಹೆಚ್ಚು ಸಂಬಂಧವನ್ನು ಹೊಂದಿವೆ. ನಾವು ಸ್ಥಳೀಯ ಭಾಷೆಗಳ ಜತೆಗೆ ಮೇಲೇಳಬೇಕು. ಆಗ ದೇಶಿಯತೆ ಎಂಬುವುದು ಪ್ರಬುದ್ಧತೆಗೆ ತಲುಪುತ್ತದೆ. ದೇಶಿಯ ಭಾಷೆಗಳ ಜತೆಗೆ ಒಡನಾಡಬೇಕು ಎಂಬ ಆಶಯ ಕೂಡ ಇದರಲ್ಲಿದೆ. ಇಂಗ್ಲಿಷ್, ಸಂಸ್ಕೃತ, ಹಿಂದಿ ಪದಗಳನ್ನು ಧಾರಾಳವಾಗಿ ಕನ್ನಡಕ್ಕೆ ಸ್ವೀಕರಿಸುತ್ತೇವೆ. ನಮ್ಮದೇ ಪ್ರಾದೇಶಿಕ ಭಾಷೆಗಳಿಂದ ಏಕೆ ಸ್ವೀಕರಿಸಬಾರದು ಎಂಬ ಕಾರಣಕ್ಕೆ ಈ “ಪರ್ಬ’ ಪದವನ್ನು ಬಳಸಿಕೊಳ್ಳಲಾಗಿತ್ತು ಎಂದು ಅರವಿಂದ ಮಾಲಗತ್ತಿ ತಿಳಿಸಿದರು.
ಅಕಾಡೆಮಿ ಈ ಹಿಂದೆ ರೂಪಿಸಿದ್ದ “ಸೀಮಾತೀತ ಸಾಹಿತ್ಯ ಪರ್ಬ’ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸಂಶೋಧನಾ ಕ್ಷೇತ್ರಕ್ಕೆ ಅನುಕೂಲವಾಗುವ ಆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತಂತೆ ಚಿಂತನೆ ನಡೆದಿದೆ. ಈ ಬಗ್ಗೆ ಅಕಾಡೆಮಿ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. –ಡಾ.ಬಿ.ವಿ.ವಸಂತಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ