ರಾಜ್ಯ ಬಿಜೆಪಿ ಕಾರ್ಯಕಾರಿಣಿ ಇಂದಿನಿಂದ
Team Udayavani, Aug 5, 2017, 7:00 AM IST
ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದ ಸೇರಿ ರಾಜಕೀಯ ಗೊಂದಲಗಳ ನಡುವೆಯೇ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಶನಿವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ.
ನಗರದ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿರುವ ಸಭೆಯಲ್ಲಿ ಸದಸ್ಯರು, ಮುಖಂಡರು ಸಕ್ರಿಯವಾಗಿ ಭಾಗವಹಿಸಬೇಕು ಹಾಗೂ ಎಲ್ಲಾ ರೀತಿಯ ಚರ್ಚೆ, ನಿರ್ಣಯಗಳಲ್ಲಿ ತಪ್ಪದೆ ಹಾಜರಾಗಬೇಕು ಎಂಬ ಉದ್ದೇಶದಿಂದ ಮೊದಲ ದಿನದ ಕಾರ್ಯಕಾರಿಣಿ, ಮುಖಂಡರೊಂದಿಗಿನ ಸಭೆಗೆ ಸೀಮಿತಗೊಳ್ಳಲಿದೆ. ನಂತರ ಸದಸ್ಯರೊಂದಿಗೆ ಸಭೆ ನಡೆಯಲಿದೆ.
ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಿರ್ಮಲಾ ಸೀತಾರಾಮನ್ ಸೇರಿ ಕೇಂದ್ರ ಸಚಿವರು ಮತ್ತಿತರರು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಏಪ್ರಿಲ್ನಲ್ಲಿ ನಡೆದ ಕಾರ್ಯಕಾರಿಣಿಯ ನಂತರದಲ್ಲಾದ ಪಕ್ಷದ ಕಾರ್ಯಕ್ರಮಗಳು, ಮುಂದಿನ ಮೂರು ತಿಂಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ರಾಜ್ಯ ನಾಯಕರಿಗೆ ವರದಿ ಸಲ್ಲಿಸಲಾಗುತ್ತದೆ.
ಎರಡು ನಿರ್ಣಯಗಳು?: ಭಾನುವಾರ ನಡೆಯುವ ಕಾರ್ಯಕಾರಿಣಿಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ, ರಾಜ್ಯದ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ವಿಶೇಷ ನಿರ್ಣಯಗಳು ಮಂಡನೆ ಆಗಲಿವೆ ಎಂದು ತಿಳಿದುಬಂದಿದೆ. ಸಚಿವ
ಡಿ.ಕೆ.ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ, ಈ ಕುರಿತು ಎದ್ದಿರುವ ವಿವಾದ ಹಾಗೂ ಇದರಿಂದ ಪಕ್ಷಕ್ಕೆ ಆಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ. ನಾಡಧ್ವಜ, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿವಾದ ಹಾಗೂ ಇದರಿಂದ ಕಾಂಗ್ರೆಸ್ಗೆ ಲಾಭ ಆಗದಂತೆ ಯಾವ ರೀತಿ ತಂತ್ರ ರೂಪಿಸಬೇಕು ಎನ್ನುವುದರ ಬಗ್ಗೆಯೂ ಚರ್ಚೆ ನಡೆಯಲಿದೆ. ದಕ್ಷಿಣ ಕನ್ನಡದಲ್ಲಿ ಈಚೆಗೆ
ನಡೆದ ಕೋಮುಗಲಭೆ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲಿನ ಹಲ್ಲೆಗಳು, ಕೇಂದ್ರ ಕಾರಾಗೃಹದಲ್ಲಿನ ಅಕ್ರಮ, ಐಪಿಎಸ್ ಅಧಿಕಾರಿ ರೂಪಾ ವರ್ಗಾವಣೆ ಕುರಿತ ಚರ್ಚೆ ಹಾಗೂ ಸರ್ಕಾರದ ವಿರುದಟಛಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಾರ್ಯಕರ್ತರಲ್ಲಿ ಅಸಮಾಧಾನ? ಡಿ.ಕೆ. ಶಿವಕುಮಾರ್ ಮತ್ತು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ
ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿಯು ರಾಜಕೀಯ ಲಾಭ ಪಡೆಯುವಲ್ಲಿ ವಿಫಲವಾಗಿದೆ ಎಂಬ ಆರೋಪ ಕಾರ್ಯಕಾರಣಿಯಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ. ಈ ಎರಡೂ ಪ್ರಕರಣಗಳಲ್ಲಿ ಅದರಲ್ಲೂ ಮುಖ್ಯವಾಗಿ ಐಟಿ ದಾಳಿಗೆ ಸಂಬಂಧಿಸಿದಂತೆ ಪಕ್ಷದ ವಿವಿಧ ಘಟಕಗಳಲ್ಲಿ ಮತ್ತು ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಸತತ ಮೂರು ದಿನಗಳು ಐಟಿ ದಾಳಿ ನಡೆದರೂ ಪಕ್ಷದ ನಾಯಕರು, ಸಚಿವರು ಅಥವಾ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸದಿರುವ ಬಗ್ಗೆ ಈಗಾಗಲೇ ಪಕ್ಷದ ಮಟ್ಟದಲ್ಲಿ ಬೇಸರ ವ್ಯಕ್ತವಾಗಿದ್ದು, ರಾಜಕೀಯವಾಗಿ ಲಾಭ ಪಡೆಯುವಲ್ಲಿ ನಾಯಕರು ವಿಫಲವಾಗಿದ್ದಾರೆ ಎಂಬ ಮಾತು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಎಲ್ಲ ಹಿನ್ನೆಲೆಗಳಲ್ಲಿ ಕಾರ್ಯಕಾರಣಿ ಹೆಚ್ಚು ಮಹತ್ವ ಪಡೆದುಕೊಂಡಿದೆ.