ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ
Team Udayavani, Sep 4, 2018, 6:00 AM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ಧ ನಡೆಸುತ್ತಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ. ರಫೆಲ್ ಯುದ್ಧ ವಿಮಾನ ಖರೀದಿ, ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ನೋಟು ಅಮಾನ್ಯಿಕರಣದ ವಿರುದ್ಧ ಸೆ.6ರಿಂದ 15ರವ ರೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಈಗಲೇ ಸಿದ್ಧವಾಗಿದ್ದು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ನಿರಂತರ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ರಫೆಲ್ ಯುದ್ಧ ವಿಮಾನ ಖರೀದಿ ಸಂದರ್ಭದಲ್ಲಿ ಆಗಿರುವ ಒಪ್ಪಂದಕ್ಕೂ ಎನ್ಡಿಎ ಸರ್ಕಾರದ ಅವಧಿಯಲ್ಲಿನ ಒಪ್ಪಂದಕ್ಕೂ ವ್ಯತ್ಯಾಸವಿದೆ. ಯುಪಿಎ ಅವಧಿಯಲ್ಲಿ ಫ್ರಾನ್ಸ್ನಲ್ಲಿ 18 ಯುದಟಛಿ ವಿಮಾನ ಖರೀದಿಸಿ ಉಳಿದ ವಿಮಾನ ತಯಾರಿಕಾ ಕಾರ್ಯವನ್ನು ಎಚ್ಎಎಲ್ಗೆ ನೀಡಬೇಕು ಹಾಗೂ ಅದಕ್ಕೆ ಅಗತ್ಯವಾದ ತಂತ್ರಜ್ಞಾನವನ್ನು ಫ್ರಾನ್ಸ್ ಒದಗಿಸ ಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ಕರ್ನಾಟಕದ ಸಾವಿರಾರು ಯುವಜನತೆ ಉದ್ಯೋಗ ಕಂಡುಕೊಳ್ಳಲು ಅವಕಾಶವಿತ್ತು. ಅಲ್ಲದೇ ಯುದ್ಧ ವಿಮಾನದಿಂದ ಪಡೆದ ಹಣದಲ್ಲಿ ಫ್ರಾನ್ಸ್ ಶೇ. 50ರಷ್ಟನ್ನು ಭಾರತದಲ್ಲಿ ಹೂಡಿಕೆ ಮಾಡುವುದು ಹಾಗೂ ಪ್ರತಿ ವಿಮಾನವನ್ನು 526 ಕೋಟಿ ರೂ. ದರದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ವಿವರಿಸಿದರು. ಆದರೆ, ಪ್ರಧಾನಿ ಮೋದಿ ನಿಯಮಗಳನ್ನು ಗಾಳಿಗೆ ತೂರಿ ನೇರವಾಗಿ ಫ್ರಾನ್ಸ್ಗೆ ತೆರಳಿ 36 ವಿಮಾನ ಖರೀದಿ ಮಾಡಿದ್ದು, ಯಾವುದೇ ತಂತ್ರಜ್ಞಾನ ವಿನಿಮಯಕ್ಕೆ ಅವಕಾಶವಿಲ್ಲ. ಅಲ್ಲದೇ 526 ಕೋಟಿ ರೂ. ಬೆಲೆಯ ಯುದಟಛಿ ವಿಮಾನವನ್ನು 1670 ಕೋಟಿ ರೂ. ದರದಲ್ಲಿ ಖರೀದಿಸಲಾಗಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವರನ್ನು ಸಂಸತ್ತಿನಲ್ಲಿ ಪ್ರಶ್ನಿಸಿದರೆ, ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗಿದೆ ಎಂದು ಹೇಳಿದರು.
ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ಜಂಟಿ ಸದನ ಸಮಿತಿ ರಚಿಸುವಂತೆ ಒತ್ತಡ ಹೇರಿದರೂ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಲಾಗುವುದು. ಸೆಪ್ಟೆಂಬರ್ ಅಂತ್ಯದೊಳಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಹೇಳಿದರು. ಅಲ್ಲದೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದ್ದರೂ ಕೇಂದ್ರ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಆದರೂ, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಾ
ಹೊರಟಿದೆ ಎಂದರು. 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸನ್ನದ್ಧವಾಗಿದ್ದು, ಅಕ್ಟೋಬರ್ನಲ್ಲಿ ಜಿಲ್ಲಾವಾರು ಸಮಾವೇಶ ಮಾಡಲಾಗುವುದು ಎಂದು ಹೇಳಿದರು.
ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಪರಿಹಾರ
ಬೆಂಗಳೂರು: ಕೇರಳ ಹಾಗೂ ಕೊಡಗು ನೆರೆ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಘಟಕದಿಂದ 10 ಕೋಟಿ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ಈಗಾಗಲೇ ಕೆಪಿಸಿಸಿ ವತಿಯಿಂದ ಕೇರಳ ಮತ್ತು ಕೊಡಗಿಗೆ 60 ಟ್ರಕ್ನಲ್ಲಿ ಅಗತ್ಯ ಅಕ್ಕಿ, ಬೇಳೆ, ಸಕ್ಕರೆ ರವಾನಿಸಲಾಗಿದೆ. ಕೇರಳಕ್ಕೆ 100 ಜನ ಕೌಶಲ್ಯ ಹೊಂದಿದ ಕುಶಲಕರ್ಮಿಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರು. ಪಕ್ಷದ ಶಾಸಕರು, ಸಂಸದರು ತಮ್ಮ ಎರಡು ತಿಂಗಳ ಸಂಬಳ ನೀಡಲು ತೀರ್ಮಾನಿಸಲಾಗಿದ್ದು, ಅದರ ಹೊರತಾಗಿ ಪ್ರತಿ ಜಿಲ್ಲಾ ಘಟಕಗಳಿಂದ ಕನಿಷ್ಠ 5 ಲಕ್ಷ ರೂ. ಸಂಗ್ರಹಿಸಿ ಕನಿಷ್ಠ 10 ಕೋಟಿ ರೂ. ನೆರವನ್ನು ಪರಿಹಾರ ಕಾರ್ಯಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
5 ವರ್ಷ ಸರ್ಕಾರ ನಿರಾತಂಕ
ಬೆಂಗಳೂರು: “ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ಪುಟ್ಟ ಗೊಂದಲಗಳಿದ್ದರೂ, ಸರ್ಕಾರ ಯಾವುದೇ ದರೆಯಿಲ್ಲದೇ ಐದು ವರ್ಷ ಪೂರೈಸಲಿದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ಪೂರ್ವ ಸಿದಟಛಿತೆ ಕುರಿತು ಕ್ಷೇತ್ರವಾರು ಸಭೆ ನಡೆಸಿದ ಅವರು, ಯಾವುದೇ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಅವುಗಳನ್ನು ಬಗೆಹರಿಸಿಕೊಳ್ಳಲು ನಮ್ಮಲ್ಲಿ ವೇದಿಕೆ ಇದೆ. ಹೀಗಾಗಿ ಈ ಸರ್ಕಾರ ಯಾವುದೇ ತೊಂದರೆ ಇಲ್ಲದೆ ಐದು ವರ್ಷ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಯಶಸ್ವಿಯಾಗಿ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದಟಛಿ ಯಾವುದೇ ದೂರು ನೀಡಿಲ್ಲ. ನೂರು ದಿನದಲ್ಲಿ ರೈತರ ಸಾಲಮನ್ನಾ ಹಾಗೂ ಕೊಡಗು ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಉತ್ತಮವಾಗಿ ನಿಭಾಯಿಸಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ನಾಯಕರು ಉತ್ತಮ ಸಹಕಾರ ಕೊಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಕೂಡ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಅಂದಿನ ಭೇಟಿಯಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವೇಣುಗೋಪಾಲ್ ತಿಳಿಸಿದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 28 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಈಗಾಗಲೇ ನಿರ್ಧರಿಸಲಾಗಿದೆ. ಕ್ಷೇತ್ರಗಳ ಹಂಚಿಕೆ ಕುರಿತಂತೆ ಹೈಕಮಾಂಡ್ ಮಟ್ಟದಲ್ಲಿ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ಸೆ.3ನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಎಷ್ಟು ಸ್ಥಾನಗಳನ್ನು ಭರ್ತಿ ಮಾಡುತ್ತೇವೆ ಎನ್ನುವುದನ್ನು ಸ್ಪಷ್ಟಪಡಿಸದ ಣುಗೋಪಾಲ್, ಕಾದು ನೋಡಿ ಎಂದಷ್ಟೇ ಹೇಳಿದರು.
ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿದರೆ, ಕೆಲವರಿಗೆ ನಡುಕ ಶುರುವಾಗುತ್ತದೆ. ಪ್ರಧಾನಿ ಮೋದಿ ಅವರು ಚೀನಾ ಪ್ರಧಾನಿಯವರೊಂದಿಗೆ ನೃತ್ಯ ಮಾಡಿದರೆ ಯಾರೂ ಮಾತನಾಡುವುದಿಲ್ಲ. ರಾಹುಲ್ ಚೀನಾ ಮೇಲೆ ಹಾಯ್ದು ಹೋದರೂ ಸಾಕಷ್ಟು ಚರ್ಚೆಯಾಗುತ್ತದೆ. ತಾವು ಶಿವ ಭಕ್ತ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ.
● ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ