ಪೂರೈಕೆ ವ್ಯತ್ಯಯ: ತರಕಾರಿ ಬೆಲೆ ಗಗನಕ್ಕೆ
Team Udayavani, Sep 28, 2019, 3:07 AM IST
ಬೆಂಗಳೂರು: ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಟೊಮೆಟೋ ಸೇರಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಹೊರರಾಜ್ಯಗಳಿಂದ ಬರುವ ತರಕಾರಿ ಪ್ರಮಾಣ ಕಡಿಮೆಯಾಗಿದೆ. ಜತೆಗೆ ರಾಜ್ಯದ ಕೊಪ್ಪಳ, ಗದಗ, ರಾಯಚೂರು, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ನೆರೆಯಿಂದ ತರಕಾರಿ ಬೆಳೆ ಕೈಗೆ ಬಂದಿಲ್ಲ. ಇದರ ನೇರ ಪರಿಣಾಮ ಬೆಲೆ ಏರಿಕೆ ಆಗಿದೆ ಎಂದ ಹೇಳಲಾಗಿದೆ.
ಹಾಪ್ಕಾಮ್ಸ್ನಲ್ಲಿ ಟೊಮೆಟೋ 27- 35 ರೂ. ಇದ್ದು, ಬದನೆಕಾಯಿ 40 ರೂ. ಗಡಿ ದಾಟಿದೆ. ಈರುಳ್ಳಿ (ಸಣ್ಣ) 60 ರೂ., ಈರುಳ್ಳಿ (ದಪ್ಪ) 70 ರೂ. ವರೆಗೆ ಇದ್ದು, ದಸರಾ ವೇಳೆ ಬೆಲೆ ಇನ್ನು ಏರಿಕೆಯಾಗುವ ಸಾಧ್ಯತೆ ಇದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಮಾರುಕಟ್ಟೆಗೆ ಉತ್ತರ ಕರ್ನಾಟಕದ ಬಳ್ಳಾರಿಯಿಂದ ಮೆಣಸಿನಕಾಯಿ, ರಾಯಚೂರಿನಿಂದ ಟೊಮೆಟೋ, ಬೆಳಗಾವಿಯಿಂದ ಶುಂಠಿ ಹೀಗೆ ವಿವಿಧ ಜಿಲ್ಲೆಗಳಿಂದ ತರಕಾರಿಗಳು ಬರುತ್ತಿದ್ದವು.
ಆದರೆ, 15 ದಿನಗಳಿಂದ ತರಕಾರಿ ಕಡಿಮೆ ಬರುತ್ತಿವೆ. ಆದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಬೆಂಗಳೂರಿನ ಹತ್ತಿರ ಜಿಲ್ಲೆಗಳಿಂದ ಬರುವ ತರಕಾರಿಗಳನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರ ಟೊಮೆಟೋ 15ರೂ. ಇದ್ದು, ಪ್ರಸ್ತುತ 30ರೂ. ಆಗಿದೆ. ಹಸಿಮೆಣಸಿನಕಾಯಿ 30- 55 ರೂ. ಆಗಿದ್ದು, ಪ್ರತಿ ತರಕಾರಿಗೂ 5-10 ರೂ. ಬೆಲೆ ಜಾಸ್ತಿಯಾಗಿದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ವ್ಯಾಪಾರಿ ಸರವಣ.
ಹಾಪ್ಕಾಮ್ಸ್ ಮೌಲ್ಯ
ತರಕಾರಿ(ಕೆ.ಜಿಗೆ) ಬೆಲೆ
ಹುರಳೀಕಾಯಿ 45
ಬಾಟಲ್ ಬದನೆ 40
ಹಸಿಮೆಣಸಿನಕಾಯಿ 52
ಊಟಿ ಕ್ಯಾರೇಟ್ 48
ನಾಟಿ ಕ್ಯಾರೇಟ್ 46
ನುಗ್ಗೇಕಾಯಿ 60
ಹಾರಿಕಾಟ ಬೀನ್ಸ್ 48
ಹೀರೇಕಾಯಿ 48
ಈರುಳ್ಳಿ 64
ಟೊಮೆಟೋ 27
ಕೆ.ಆರ್. ಮಾರುಕಟ್ಟೆಯ ತರಕಾರಿ ಬೆಲೆ
ತರಕಾರಿ(ಕೆ.ಜಿಗೆ) ಬೆಲೆ
ಈರುಳ್ಳಿ 60-70
ಬದನೆಕಾಯಿ 40-45
ಹುರುಳೀಕಾಯಿ 50-55
ಟೊಮೆಟೋ 30-35
ಕ್ಯಾರೆಟ್ 45- 50
ಹೀರೇಕಾಯಿ 50-55
ಎಲೆಕೋಸು 30-40
ಹೂ ಕೋಸು 35-45
ಆಲೂಗಡ್ಡೆ 30-35
ಬಿಟ್ರೋಟ್ 50-60
ಹಸಿಮೆಣಸಿನಕಾಯಿ 55-60
ಬೇಡಿಕೆಗೆ ತಕ್ಕಂತೆ ಈರುಳ್ಳಿ ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಏರಿಕೆಯಾಗಿದೆ. ಇದೀಗ ಧಾರವಾಡ, ಚಿತ್ರದುರ್ಗದಿಂದ ಈರುಳ್ಳಿ ಬರುತ್ತಿದ್ದು, ಬೆಲೆ ಕಡಿಮೆಯಾಗಬಹುದು. ಟೊಮೆಟೋ ಸೇರಿ ತರಕಾರಿಗಳ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಸ್ವಲ್ಪ ಏರಿಕೆಯಾಗಿವೆ.
-ಬಿ.ಎನ್. ಪ್ರಸಾದ್, ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ.
ಒಂದು ವಾರದಿಂದ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ತರಕಾರಿಗಳು ಬರುತ್ತಿಲ್ಲ. ಆದ್ದರಿಂದ ತರಕಾರಿಗಳ ಬೆಲೆ ಏರಿಕೆಯಾಗಿದೆ. ಒಂದೇ ವಾರಕ್ಕೆ ಪ್ರತಿಯೊಂದು ತರಕಾರಿ ಬೆಲೆ 10 ರೂ. ಗೂ ಅಧಿಕ ಏರಿಕೆಯಾಗಿದೆ.
-ಅಬ್ದುಲ್ಲಾ, ವ್ಯಾಪಾರಿ