ಎರಡನೇ ದಿನಕ್ಕೆ ಕಾಲಿಟ್ಟ ಅಹೋ ರಾತ್ರಿ ಧರಣಿ
Team Udayavani, Sep 8, 2017, 6:10 AM IST
ಬೆಂಗಳೂರು: ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ 12
ವಿಧಾನ ಪರಿಷತ್ ಸದಸ್ಯರು ಪಕ್ಷಾತೀತವಾಗಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ವಿಧಾನಸೌಧ-ವಿಕಾಸ ಸೌಧ ನಡುವಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿರುವ ವಿಧಾನ ಪರಿಷತ್
ಸದಸ್ಯರು, ಮುಖ್ಯ ಮಂತ್ರಿಯವರು ಖುದ್ದು ಸಭೆ ಆಶ್ವಾಸನೆ ಕೊಡಿಸುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಹೀಗಾಗಿ,ಬುಧವಾರ ಆರಂಭಗೊಂಡ ಧರಣಿ ಗುರುವಾರ ರಾತ್ರಿಯೂ ಮುಂದುವರಿದಿದ್ದು, ವಿಧಾನ ಪರಿಷತ್ ಸದಸ್ಯರು ದಿಂಬು-ಹಾಸಿಗೆ ಸಮೇತ ಠಿಕಾಣಿ ಹೂಡಿದ್ದಾರೆ. ಈ ಮಧ್ಯೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್
ಸೇಠ್ ಗುರುವಾರ ಬೆಳಗ್ಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಪ್ರಯೋಜನವಾಗಲಿಲ್ಲ.ಬದಲಿಗೆ, ತನ್ವೀರ್ ಸೇಠ್ ಧರಣಿ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ.ಏನಾದರೂ ಮಾಡಿ ಕೊಳ್ಳಿ ಎಂದು ಬೇಜವಾಬ್ದಾರಿಯಾಗಿ
ಮಾತನಾಡಿದ್ದಾರೆ.
ಲಕ್ಷಾಂತರ ಶಿಕ್ಷಕರು ಹಾಗೂ ವಿದ್ಯಾರ್ಥಿ ಸಮುದಾಯದ ಪ್ರತಿ ನಿಧಿಗಳಾದ ನಾವು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದರೆ ಸ್ಪಂದನೆ ಮಾಡುವ ಬದಲು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಸದಸ್ಯರು, ಬಸವರಾಜ ಹೊರಟ್ಟಿಯಂತಹ ಹಿರಿಯರು ಧರಣಿ ಕುಳಿತಿರುವಾಗ ಸಚಿವರ ವರ್ತನೆ ಸರಿಯಲ್ಲ. ಮುಖ್ಯಮಂತ್ರಿಯವರು ತಕ್ಷಣ ಸಂಪುಟದಿಂದ ತನ್ವೀರ್ ಸೇಠ್ ಕೈ ಬಿಡಬೇಕು ಎಂದು ಆಗ್ರಹಿಸಿದರು.
ನಾನು ಬೆದರಿಕೆಯೊಡ್ಡಿಲ್ಲ. ಮುಖ್ಯಮಂತ್ರಿ ಜತೆ ಮಾತುಕತೆಗೆ ಸಮಯ ನಿಗದಿ ಪಡಿಸಿದರೂ ಪರಿಷತ್ ಸದಸ್ಯರು ಬರಲಿಲ್ಲ. ಅವರ ಉದ್ದೇಶವೇ ಬೇರೆ ಇದೆ. ಶಿಕ್ಷಕ ಸಮುದಾಯದ ಬಗ್ಗೆ ಸರ್ಕಾರಕ್ಕೂ ಕಾಳಜಿಯಿದ್ದು ಸಮಸ್ಯೆ ಗಳನ್ನು ಈಡೇರಿಸಲು ಬದ್ಧವಾಗಿದೆ.
– ತನ್ವೀರ್ ಸೇಠ್ ಶಿಕ್ಷಣ ಸಚಿವ