ಮೋಡಬಿತ್ತನೆ ಕೇವಲ ಬರಗಾಲಕ್ಕೆ ಸೀಮಿತ ಬೇಡ
Team Udayavani, May 31, 2019, 1:13 PM IST
ಬೆಂಗಳೂರು: ‘ಮೋಡಬಿತ್ತನೆ ಕೇವಲ ಬರಗಾಲದ ಸಂದರ್ಭಗಳಿಗೆ ಸೀಮಿತವಾಗದೆ, ಅದೊಂದು ನಿರಂತರ ಪ್ರಕ್ರಿಯೆ ಆಗಬೇಕು’ ಎಂಬ ಒತ್ತಾಯ ತಜ್ಞರಿಂದ ಕೇಳಿಬಂದಿದೆ.
ನಗರದ ಹೋಟೆಲ್ ಲಿ.ಮೆರಿಡಿಯನ್ನಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ಮೋಡಬಿತ್ತನೆ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಅಭಿಪ್ರಾಯ ಕೇಳಿಬಂದಿತು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಡಾ.ಜಿ.ಎಸ್. ಭಟ್ ಮಾತನಾಡಿ, ಮೋಡಬಿತ್ತನೆಯನ್ನು ಜಲಸಂಪನ್ಮೂಲ ನಿರ್ವಹಣೆ ದೃಷ್ಟಿಯಿಂದ ನೋಡಬೇಕು. ಬರ ಮುನ್ಸೂಚನೆ ಇದ್ದಾಗ ನಾವು ಮೋಡಬಿತ್ತನೆ ಕೈಗೆತ್ತಿಕೊಳ್ಳುತ್ತೇವೆ. ಎಷ್ಟೋ ಸಲ ಅಲ್ಲಿ ಮೋಡಗಳೇ ಇರುವುದಿಲ್ಲ. ಮೋಡಗಳು ಇದ್ದಾಗಲೇ ಈ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಹೆಚ್ಚು ಮಳೆ ಸುರಿಸುವ ಸಾಧ್ಯತೆ ಇರುತ್ತದೆ. ಹೀಗೆ ಬಿದ್ದ ಮಳೆ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಭೈರೇಗೌಡ, ಕಳೆದ 19 ವರ್ಷಗಳಲ್ಲಿ 14 ಬರಪೀಡಿತ ವರ್ಷ ಎದುರಾಗಿವೆ. ಇದನ್ನು ಎದುರಿಸಲು ಹಲವು ಪ್ರಯತ್ನಗಳು ನಡೆಯುತ್ತಿದ್ದು, ಅದರಲ್ಲಿ ಮೋಡಬಿತ್ತನೆಯೂ ಒಂದು ಎಂದರು. ಬರದಿಂದ ಉಂಟಾಗುವ ಎಲ್ಲಾ ಸಮಸ್ಯೆಗಳಿಗೂ ಮೋಡಬಿತ್ತನೆಯೊಂದೇ ಪರಿಹಾರ ಅಲ್ಲ. 2017ರಲ್ಲಿ ಯಶಸ್ವಿಯಾಗಿ ಮೋಡಬಿತ್ತನೆ ಮಾಡಲಾಗಿದ್ದು, ಮಳೆ ಪ್ರಮಾಣದಲ್ಲಿ ಶೇ.28ರಷ್ಟು ಏರಿಕೆ ಕಂಡುಬಂದಿದೆ. ಮೋಡಬಿತ್ತನೆಯಾದ ಪ್ರದೇಶಗಳಲ್ಲಿ ಮೌಲ್ಯಮಾಪನ ಮಾಡಿದಾಗ ಸುಮಾರು 2.51ರಿಂದ 5 ಟಿಎಂಸಿ ನೀರು ಹೆಚ್ಚಳ ಆಗಿರುವುದು ಕಂಡುಬಂದಿದೆ ಎಂದರು.
ಕೃಷಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮೋಡಬಿತ್ತನೆ ನಡೆಸಲು ಸರ್ಕಾರ ಉದ್ದೇಶಿಸಿದ್ದು, 2017ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುವುದೆಂದರು.
ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತಿತರರಿದ್ದರು.