ಮುಂದುವರಿದ ಸುಳ್ಳಿನ ಪರಂಪರೆ: ಶೆಟ್ಟರ್
Team Udayavani, Feb 7, 2017, 3:45 AM IST
ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯಪಾಲರ ಮೂಲಕ ಸುಳ್ಳಿನ ಕಂತೆ ಹೇಳಿಸಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ನಂತರ ಪ್ರತಿಕ್ರಿಯಿಸಿದ ಅವರು, ಮೂರು ವರ್ಷದಿಂದಲೂ ಸುಳ್ಳಿನ ಪರಂಪರೆಯನ್ನೇ ಮುಂದುವರೆಸಿಕೊಂಡು ಬರಲಾಗಿತ್ತು. ಈ ಬಾರಿಯೂ ಅದನ್ನೇ ಮುಂದುವರಿಸಲಾಗಿದೆ. ಅನೇಕ ಯೋಜನೆಗಳ ಬಗ್ಗೆ ಸುಳ್ಳಿನ ದಾಖಲೆ ನೀಡಿದ್ದು ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಪಡೆದ ನಂತರ 371ಜೆ ಪ್ರಕಾರ 50 ಸಾವಿರ ಹುದ್ದೆ ತುಂಬಿದ್ದೇವೆ ಅಂತ ಹೇಳಿದ್ದಾರೆ. ಆದರೆ, ನಾಲ್ಕರಿಂದ ಐದು ಸಾವಿರ ಹುದ್ದೆ ಭರ್ತಿ ಮಾಡಿಲ್ಲ ಎಂದು ಆರೋಪಿಸಿದರು.
160 ತಾಲೂಕುಗಳಲ್ಲಿ ಬರಗಾಲ ಬಿದ್ದಿದೆ. ಉದ್ಯೋಗ ಖಾತ್ರಿ, ಬರ ಪರಿಹಾರ, ಗೋ ಶಾಲೆ, ಮೇವಿನ ಖರೀದಿ ಬಗ್ಗೆ ಸಂಪೂರ್ಣ ಸುಳ್ಳು ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲಿಯೂ ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರ ಹೇಳಿಕೊಂಡಷ್ಟು ಘಟಕಗಳು ಸ್ಥಾಪನೆಯಾಗಿದ್ದರೆ, ಅವರು ಹೇಳಿದ್ದನ್ನು ಕೇಳುತ್ತೇನೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಮಹದಾಯಿ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣ ವಾಪಸ್ ಪಡೆಯುವ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಕಪ್ಪತ್ ಗುಡ್ಡ ಸಂರಕ್ಷಿತ ಪ್ರದೇಶ ಸ್ಥಾನ ವಾಪಸ್ ಪಡೆದಿರುವ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಬೆಂಗಳೂರಿನ ಶೂಟೌಟ್ ಪ್ರಕರಣಗಳು, ಲಕ್ಷ್ಮೇಶ್ವರದಲ್ಲಿ ಲಾಕಪ್ ಡೆತ್ ಪ್ರಕರಣಗಳು ಇದಕ್ಕೆ ಸಾಕ್ಷಿ ಎಂದರು.