ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು
ತೆಂಗಿನ ಗರಿ ತೆರವು ವೇಳೆ ತಂತಿ ತುಳಿದ ಸತೀಶ್ | ಶನಿವಾರ ಬಿರುಗಾಳಿ-ಮಳೆ ಸುರಿದಾಗ ಘಟನೆ
Team Udayavani, May 27, 2019, 10:20 AM IST
ವಿಜಯನಗರದ ಆರ್ಪಿಸಿ ಲೇಔಟ್ನಲ್ಲಿ ಫುಟ್ಪಾತ್ ಮೇಲೆ ನಿಲ್ಲಿಸಿದ್ದ ಸ್ಕೂಟರ್ಗಳ ಮೇಲೆ ಬೃಹತ್ ಮರ ಬಿದ್ದಿತ್ತು.
ಬೆಂಗಳೂರು: ನಗರದಾದ್ಯಂತ ಶನಿವಾರ ಸುರಿದ ಭಾರೀ ಬಿರುಗಾಳಿ ಸಹಿತ ಮಳೆ ವೇಳೆ ಬಿದ್ದ ತೆಂಗಿನಮರದ ಗರಿಗಳನ್ನು ತೆರವುಗೊಳಿಸುವಾಗ, ನೆಲದ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾಕ್ಸ್ಟೌನ್ನಲ್ಲಿ ನಡೆದಿದೆ. ಈ ಮೂಲಕ ಮಳೆ ಅವಾಂತರಗಳನ್ನು ತಡೆಯಲು ಬಿಬಿಎಂಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಗೆ ಈಗಾಗಲೇ ನೂರಾರು ಮರಗಳು ಧರೆಗುರುಳಿದ್ದು, ಶನಿವಾರ ಕಾಕ್ಸ್ಟೌನ್ನ ಸತೀಶ್ (35) ಎಂಬವರು ಅಸುನೀಗಿದ್ದೂ ಸೇರಿ ಈವರೆಗೆ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಮಾತ್ರ ಬೀಳುವ ಸ್ಥಿತಿಯಲ್ಲಿರುವ ಮರಗಳು, ಕೊಂಬೆಗಳ ತೆರವು ಕಾರ್ಯಕ್ಕೆ ವೇಗ ನೀಡುತ್ತಿಲ್ಲ. ಮಳೆಗಾಲಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅಬ್ಬರದ ಗಾಳಿ ಸಹಿತ ಶನಿವಾರ ಸುರಿದ ಮಳೆಗೆ ಕಾಕ್ಸ್ಟೌನ್ನ ರಾಮಚಂದ್ರಪ್ಪ ಗಾರ್ಡನ್ನಲ್ಲಿ ತೆಂಗಿನ ಮರದ ಗರಿ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ರಾತ್ರಿ 11.30ರ ಸುಮಾರಿಗೆ ಗರಿ ತೆರವುಗೊಳಿಸಲು ಮುಂದಾದ ಸತೀಶ್, ನೆಲದ ಮೇಲೆ ವಿದ್ಯುತ್ ತಂತಿ ಬಿದ್ದಿರುವುದನ್ನು ಗಮನಿಸದೇ, ಅದನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟರು.
ಧರೆಗೆ ಬಿದ್ದ 56 ಮರ: ಶನಿವಾರ ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ವಿಪರೀತ ಗಾಳಿ ಬೀಸಿದೆ. ರಾತ್ರಿ 8 ಗಂಟೆ ನಂತರ ಗಂಟೆಗೆ ಸುಮಾರು 40 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯ ಆರ್ಭಟಕ್ಕೆ ನಗರದ ವಿವಿಧೆಡೆ 56 ಬೃಹತ್ ಮರಗಳು ಹಾಗೂ 596 ಕೊಂಬೆಗಳು ನೆಲಕಚ್ಚಿವೆ. ಪರಿಣಾಮ ಹತ್ತಾರು ವಾಹನಗಳು ಜಖಂಗೊಂಡಿದ್ದು, ಕೆಲವರು ಗಾಯಗೊಂಡಿದ್ದಾರೆ.
ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಬೃಹತ್ ಮರಗಳು ಉರುಳಿದ್ದರಿಂದ ರಾತ್ರಿಯಿಡಿ ವಿದ್ಯುತ್ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸಿದ್ದು, ಬೆಳಗ್ಗೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಬಿರುಗಾಳಿ ಮಳೆಗೆ ಉರುಳಿದ 56 ಮರಗಳು ಹಾಗೂ 596 ಕೊಂಬೆಗಳನ್ನು ಪಾಲಿಕೆಯ ಅರಣ್ಯ ವಿಭಾಗದ 21 ತಂಡಗಳು ರಾತ್ರಿಯಿಂದಲೇ ತೆರವುಗೊಳಿಸುವ ಕಾರ್ಯ ಆರಂಭಿಸಿ, ಭಾನುವಾರ ಮಧ್ಯಾಹ್ನವರೆಗೆ 44 ಮರಗಳು, 359 ಕೊಂಬೆಗಳನ್ನು ತೆರವುಗೊಳಿಸಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನಗರದಲ್ಲಿ ಬಿರುಗಾಳಿ ಸಹಿತ ಮಳೆಯ ಆರ್ಭಟ ಭಾನುವಾರವೂ ಮುಂದುವರಿದಿದ್ದು, ನಗರದ ವಿವಿದೆಡೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ಶನಿವಾರವಷ್ಟೇ ಭಾರೀ ಗಾಳಿ ಸಹಿತ ಸುರಿದಿದ್ದ ಮಳೆ ನಗರದ ಜನರನ್ನು ಹೈರಾಣಾಗಿಸಿತ್ತು. ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಆರಂಭವಾದ ಗಾಳಿ ಸಹಿತ ಮಳೆ ತಡರಾತ್ರಿವರೆಗೂ ಸುರಿಯಿತು. ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ನಾಯಂಡಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಯಶವಂತಪುರ, ಪೀಣ್ಯ ಸೇರಿ ಇತೆರೆಡೆ ಗಾಳಿಗೆ ವಾಹನಗಳು ಚಲಾಯಿಸುವುದೇ ಕಷ್ಟಕರವಾಗಿತ್ತು. ಹೀಗಾಗಿ ವಾಹನ ಸವಾರರು ಮಾರ್ಗಮಧ್ಯೆಯಿದ್ದ ಬಸ್ ನಿಲ್ದಾಣ, ಕಟ್ಟಡಗಳ ಕೆಳಗೆ ಆಶ್ರಯಪಡೆಯಬೇಕಾಯಿತು.
ಮಂತ್ರಿಮಾಲ್ ಮುಂಭಾಗ ಬೃಹತ್ ಗಾತ್ರದ ಮರ ಬಿದ್ದಿದ್ದು, ಸಂಪಿಗೆರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಹಾಗೆಯೇ ಹಳೇ ಏರ್ಪೋರ್ಟ್ ರಸ್ತೆಯಲ್ಲಿ ಮರ ಬಿದ್ದಿದ್ದು, ಸಂಚಾರ ದಟ್ಟಣೆ ಯಲ್ಲೇ ಹೆಚ್ಚಾಗಿದ್ದು, ನಡು ರಸ್ತೆಯಲ್ಲೇ ಆ್ಯಂಬುಲೆನ್ಸ್ ನಿಲ್ಲಬೇಕಾಯಿತು. ಇನ್ನು ಬಿಟಿಎಂ ಲೇಔಟ್ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್ ಮೇಲೆ ಮರದ ಬಿದಿದ್ದು, ಬಸ್ ಭಾಗಶಃ ಹಾನಿಗೀಡಾಗಿದೆ.
ಕಾರು ಜಖಂ: ಶನಿವಾರದ ಮಳೆಗೆ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹೈರಾಣಾಗಿದ್ದರು. ಅದರ ನಡುವೆಯೇ ಭಾನುವಾರ ರಾತ್ರಿ ಸುರಿದ ಮಳೆಗೆ ಮಲ್ಲೇಶ್ವರದಲ್ಲಿ 5, ಜಯಮಹಲ್, ಹೊಯ್ಸಳನಗರ, ಬಿಟಿಎಂ ಲೇಔಟ್ನಲ್ಲಿ ತಲಾ ಒಂದು ಮರ ಹಾಗೂ ವಿವಿಧೆಡೆ ಕೊಂಬೆಗಳು ಬಿದ್ದಿವೆ. ಜಯಮಹಲ್ 5ನೇ ಮುಖ್ಯರಸ್ತೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದಿದೆ. ಕಾರು ಚಾಲಕ ಒಳಗೆ ಇದ್ದರಾದರೂ, ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಬಿಬಿಎಂಪಿ ಸಿಬ್ಬಂದಿ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸಿದರು.
ಸಂಚಾರ ದಟ್ಟಣೆ: ಮಹದೇವಪುರ ವಲಯದಲ್ಲಿ ಆರಂಭವಾದ ಮಳೆ ಕ್ರಮೇಣ ನಗರದೆಲ್ಲೆಡೆ ವ್ಯಾಪಿಸಿತು. ಅದರ ಪರಿಣಾಮ ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ನಾಯಂಡಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಯಶವಂತಪುರ, ಪೀಣ್ಯ ಸೇರಿ ಇತರ ಕಡೆಗಳಲ್ಲಿ ರಸ್ತೆಗಳಲ್ಲಿ 2-3 ಅಡಿಗಳಷ್ಟು ನೀರು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಆಯುಕ್ತರಿಂದ ಮಾಹಿತಿ ಪಡೆದ ಸಿಎಂ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ