ನಿರ್ಲಕ್ಷ್ಯದಿಂದ ಸ್ಫೋಟ ಸಂಭವಿಸಿಲ್ಲ
Team Udayavani, Dec 7, 2018, 10:46 AM IST
ಬೆಂಗಳೂರು: ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯದಲ್ಲಿ ನಡೆದ ಹೈಡ್ರೋಜನ್ ಸಿಲಿಂಡರ್ ಸ್ಫೋಟ ಪ್ರಕರಣ ಸಂಬಂಧ ಗುರುವಾರ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬ್ಬರಾವ್ ಅವರು ಬೆಳಗ್ಗೆ 11 ಗಂಟೆಗೆ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಸುಮಾರು ಒಂದು ಗಂಟೆಗಳ ಕಾಲ ಸ್ಥಳ ಪರಿಶೀಲಿಸಿದರು. ಬಳಿಕ ಪ್ರಯೋಗಾಲಯದ ಮುಖ್ಯಸ್ಥ ಪ್ರೊ ಜಗದೀಶ್ ಮತ್ತು ಐಐಎಸ್ಸಿ ಭದ್ರತಾ ಉಸ್ತುವಾರಿ ಚಂದ್ರಶೇಖರ್ ಅವರಿಂದ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡರು.
ಯೋಜನೆಯೊಂದರ ಕುರಿತ ಪ್ರಯೋಗದ ವೇಳೆ ಆಮ್ಲಜನಕ ಮತ್ತು ಜಲಜನಕ ಸಂಯೋಜನೆ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಚೂರು ಚೂರಾಗಿದೆ. ನಿರ್ಲಕ್ಷ್ಯ ಅಥವಾ ಅಸುರಕ್ಷತೆಯಿಂದ ದುರ್ಘಟನೆ ನಡೆದಿಲ್ಲ ಎಂದು ಸಚಿವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಐಐಎಸ್ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಐಆರ್ ದಾಖಲು: ಒಟ್ಟಾರೆ ಪ್ರಕರಣದ ಸಂಬಂಧ ಭದ್ರತಾಧಿಕಾರಿ ಎಂ.ಆರ್.ಚಂದ್ರಶೇಖರ್ ನೀಡಿರುವ ದೂರಿನ ಆಧಾರದಲ್ಲಿ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೂಪರ್ವೇವ್ ಟೆಕ್ನಾಲಜಿಯ ಜಗದೀಶ್, ಕೆ.ಪಿ.ಜೆ. ರೆಡ್ಡಿ ಮತ್ತು ಐಐಎಸ್ಸಿ ವಿರುದ್ಧ ಐಪಿಸಿ ಸೆಕ್ಷನ್ 304(ಎ) ಮತ್ತು 338 ಪ್ರಕಾರ ನಿರ್ಲಕ್ಷ್ಯದಿಂದ ಅವಘಡ ಪ್ರಕರಣ ದಾಖಲಿಸಲಾಗಿದೆ.
ವರದಿ ಸಲ್ಲಿಕೆ: ಹೈಪರ್ಸಾನಿಕ್ ಆ್ಯಂಡ್ ಶಾಕ್ವೇವ್ ರಿಸರ್ಚ್ ಸೆಂಟರ್ನ ಮುಖ್ಯಸ್ಥ ಪ್ರೊ ಜಗದೀಶ್, ಐಐಎಸ್ಸಿ ಮತ್ತು ಪೊಲೀಸರಿಗೆ ಘಟನೆ ಬಗ್ಗೆ ವರದಿ ನೀಡಿದ್ದಾರೆ. ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಆಮ್ಲಜನಕ ಮತ್ತು ಜಲಜನಕ ತುಂಬಿದ್ದ ಸಿಲಿಂಡರ್ ಛಿದ್ರವಾಗಿದೆ. ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ ಎಂದು ವರದಿ ನೀಡಿದ್ದಾರೆ.
ಸಂಸ್ಥೆ ಸ್ಥಾಪನೆ: ವಿವಿಧ ರೀತಿಯ ಪ್ರಯೋಗಕ್ಕಾಗಿ ಹೈಪರ್ಸೋನಿಕ್ ಆ್ಯಂಡ್ ಶಾಕ್ವೇವ್ ರಿಸರ್ಚ್ ಸೆಂಟರ್ ಮುಖ್ಯಸ್ಥ ಪ್ರೊ.ಜಗದೀಶ್ ಮತ್ತು ಕೆಪಿಜೆ ರೆಡ್ಡಿ ಎಂಬುವರೇ ಸೂಪರ್ವೇವ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಕೆಲ ಇಂಜಿನಿಯರ್ ವಿದ್ಯಾರ್ಥಿಗಳ ಜತೆ ಜತೆಗೂಡಿ ದೇಶದ ಒಳಿತಿಗಾಗಿ ಪ್ರಯೋಗವೊಂದನ್ನು ನಡೆಸುತ್ತಿದ್ದರು ಎಂದು ಐಐಎಸ್ಸಿ ಅಧಿಕಾರಿಯೊಬ್ಬರು ಹೇಳಿದರು.
ಅದೃಷ್ಟವಶಾತ್ ಬಚಾವ್: ಪ್ರತಿ ನಿತ್ಯ ಈ ಪ್ರಯೋಗಾಲಯದಲ್ಲಿ 25-30 ಮಂದಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದರು. ಆದರೆ, ಬುಧವಾರ ಮಧ್ಯಾಹ್ನ 2 ಗಂಟೆಗೆ ಎಲ್ಲ ವಿದ್ಯಾರ್ಥಿಗಳು ಊಟಕ್ಕೆಂದು ತೆರಳಿದ್ದರು. ಈ ವೇಳೆ ಮನೋಜ್, ಕಾರ್ತಿಕ್, ನರೇಶ್ ಕುಮಾರ್ ಮತ್ತು ಅತುಲ್ಯ ಪ್ರಯೋಗಾಲಯದಲ್ಲಿ ಯೋಜನೆಯೊಂದರ ಪ್ರಯೋಗದಲ್ಲಿ ತೊಡಗಿದ್ದರು. 2.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಒಂದು ವೇಳೆ ಎಲ್ಲ ವಿದ್ಯಾರ್ಥಿಗಳು ಇದ್ದ ಸಂದರ್ಭದಲ್ಲಿ ಸ್ಫೋಟಗೊಂಡಿದ್ದರೆ ಭಾರೀ ಅನಾಹುತವೇ ನಡೆಯುತ್ತಿತ್ತು. ಅದೃಷ್ಟವಶಾತ್ ತಪ್ಪಿದೆ. ಆದರೂ ಘಟನೆ ನಮಗೆ ಅಪಾರ ನೋವು ತಂದಿದೆ ಎಂದು ಪ್ರಯೋಗಾಲಯದ ಭದ್ರತಾ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.
ಸಾಕ್ಷ್ಯ ಸಂಗ್ರಹ: ಗುರುವಾರವೂ ಸಹ ಪೊಲೀಸರು, ಅಗ್ನಿ ಶಾಮಕ ದಳ ಹಾಗೂ ವಿಧಿ ವಿಜ್ಞಾನ ಪರೀಕ್ಷ್ಯಾ ಕೇಂದ್ರದ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದರು. ಸುಮಾರು 8 ಮಂದಿ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಫೋಟಗೊಂಡ ಸಿಲಿಂಡರ್ಗಳ ಅವಶೇಷಗಳು, ಗಾಜಿನ ಚೂರುಗಳು, ಬಟ್ಟೆ, ಪ್ರಯೋಗಾಲಯದಲ್ಲಿ ಬಳಸುತ್ತಿರುವ ವಿವಿಧ ಮಾದರಿಯ ಅನಿಲಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದರು.
70 ಕೋಟಿ ನಷ್ಟ: ಸ್ಫೋಟದ ತೀವ್ರತೆಗೆ ಪ್ರಯೋಗಾಲಯದ ಶೇ. 65-70ರಷ್ಟು ಉಪಕರಣಗಳು ನಾಶವಾಗಿವೆ. ಇದರಿಂದ ಅಂದಾಜು 70 ಕೋಟಿ ರೂ. ನಷ್ಟ ಸಂಭವಿಸಿದೆ. ಪ್ರಯೋಗ ನಡೆಸುವ ಉಪಕರಣಗಳು, ಸಿಲಿಂಡರ್ಗಳು, 8 ಕಿಟಕಿಯ ಗಾಜುಗಳು, ಕ್ಯಾಬಿನ್ಗಳು ಸ್ಫೋಟಕ್ಕೆ ಛಿದ್ರವಾಗಿವೆ. ಸ್ಫೋಟಗೊಂಡ ಹೈಡ್ರೋಜನ್ ಅನಿಲ ಕೊಠಡಿಯ ತುಂಬೆಲ್ಲ ದಟ್ಟವಾಗಿ ಆವರಿಸಿದೆ.
ಗಾಯಾಳುಗಳಿಗೆ ಚಿಕಿತ್ಸೆ
ಬೆಂಗಳೂರು: ಸ್ಫೋಟದಲ್ಲಿ ಗಾಯಗೊಂಡಿರುವ ಮೂರು ಮಂದಿ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನ ಕವಾಗಿದ್ದು, ಒಬ್ಟಾತ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದ್ದಾನೆ. ಚಿಕಿತ್ಸೆ ಕುರಿತು ಮಾಹಿತಿ ನೀಡಿದ ಆಸ್ಪತ್ರೆ ಅಧ್ಯಕ್ಷ ಡಾ.ನರೇಶ್ ಶೆಟ್ಟಿ, ಸಿಲಿಂಡರ್ ಸ್ಫೋಟದಿಂದ ನರೇಶ್ ಕುಮಾರ್ (33) ಹಾಗೂ ಕಾರ್ತಿಕ್ ಶೈಣೈ (25)ಗೆ ಗಂಭೀರ ಗಾಯಗಳಾಗಿವೆ. ಅವರ ಎದೆ ಹಾಗೂ ಹೊಟ್ಟೆ ಭಾಗದಲ್ಲಿ ಸೇರಿಕೊಂಡಿದ್ದ ಕಟ್ಟಿಗೆ ಹಾಗೂ ಲೋಹದ ತುಂಡುಗಳನ್ನು ದೀರ್ಘಾವಧಿ ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲಾಗಿದೆ. ಅವರಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿ ಸಿದ್ದು, ಇನ್ನೂ ಎರಡು ದಿನ ನಿಗಾ ವಹಿಸಲಾಗು ವುದು. ಅಥುಲ್ಯ ಉದಯ್ ಕುಮಾರ್ (24) ಚೇತರಿರಿಸಿಕೊಳ್ಳುತ್ತಿದ್ದು, ವಿಶೇಷ ವಾರ್ಡ್ಗೆ ಕಳುಹಿಸಲಾಗಿದೆ ಎಂದರು.
ಹಠಾತ್ ದುರಂತ
ಸ್ಫೋಟದಲ್ಲಿ ಗಾಯಗೊಂಡರ ಪೈಕಿ ಅತುಲ್ಯ ಎಂಬುವರಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೀಟು ದೊರಕಿತ್ತು. ಕೆಲ ದಿನಗಳಲ್ಲೇ ಅವರು ವಿದೇಶಕ್ಕೆ ಹೊರಡ ಬೇಕಿತ್ತು. ಹೀಗಾಗಿ ಬುಧವಾರ ಪ್ರಯೋಗಾಲಯದ ಎಲ್ಲ ವಿದ್ಯಾರ್ಥಿಗಳು ಅವರಿಗಾಗಿ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಈ ಹಿನ್ನೆಲೆಯಲ್ಲಿ 4 ಕೆ.ಜಿ. ಕೇಕ್ ಕೂಡ ತರಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಎಲ್ಲ ವಿದ್ಯಾರ್ಥಿಗಳು ಊಟಕ್ಕೆ ತೆರಳಿದ್ದರಿಂದ 2.40ರ ಸುಮಾರಿಗೆ ಸಂಭ್ರಮಾಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ದುರಂತ ನಡೆದಿದೆ. ಸದ್ಯ ಅತುಲ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಮುಖದ ಕೆಲ ಭಾಗ ಸುಟ್ಟಿವೆ ಎಂದು ಸಂಸ್ಥೆಯ ಭದ್ರತಾ ಅಧಿಕಾರಿ ಹೇಳಿದರು.
ನೈಟ್ರೋಜನ್, ಆಕ್ಸಿಜನ್, ಹೈಡ್ರೋಜನ್ ರೀತಿಯ ಅನಿಲಗಳನ್ನು ಬಳಸುವ ಪ್ರಯೋಗಾಲಯದಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ, ನಮ್ಮ ಸಂಸ್ಥೆಯಲ್ಲಿ ಆಸ್ಪತ್ರೆ, ಆ್ಯಂಬು ಲೆನ್ಸ್ಗಳಿವೆ. ಸಂಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ.
ಎಂ.ಆರ್. ಚಂದ್ರಶೇಖರ್, ಐಐಎಸ್ಸಿ ಭದ್ರತಾ ಉಸ್ತುವಾರಿ
ಸಮಾಜದ ಒಳಿತಿಗಾಗಿ ಪ್ರಯೋಗ ನಡೆಸಲಾಗುತ್ತಿತ್ತು. ಅವರೆಲ್ಲ ನಮ್ಮ ಮಕ್ಕಳಂತೆ ಇದ್ದರು. ಪ್ರತಿಯೊಬ್ಬರು ಪ್ರಯೋಗದಲ್ಲಿ ಆಸ್ತಕ್ತಿ ಹೊಂದಿದ್ದರು. ಆದರೆ, ಪ್ರಯೋಗ ನಡೆಯುವಾಗಲೇ ದುರಂತ ಸಂಭವಿಸಿರುವುದು ಬಹಳ ನೋವಾಗಿದೆ.
ಪ್ರೊ.ಜಿ.ಜಗದೀಶ್, ಹೈಪರ್ಸಾನಿಕ್ ಆ್ಯಂಡ್ ಶಾಕ್ವೇವ್ ರಿಸರ್ಚ್ ಸೆಂಟರ್ ಮುಖ್ಯಸ್ಥರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…