ಬಹಮನಿ ಉತ್ಸವ ಆಚರಿಸಿದ್ರೆ ಉಗ್ರ ಹೋರಾಟ
Team Udayavani, Feb 16, 2018, 6:10 AM IST
ಬೆಂಗಳೂರು: ಬಹಮನಿ ಸುಲ್ತಾನರ ಜಯಂತಿ ಆಚರಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಟಿಪ್ಪು ಜಯಂತಿಗಿಂತ ನೂರು ಪಟ್ಟು ವಿರೋಧ ವ್ಯಕ್ತಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಹಾಪುರುಷರ ಜಯಂತಿ ನಾವೂ ಮಾಡುತ್ತೇವೆ. ಸರ್ಕಾರ ಮಾಡಿದರೆ ಬೆಂಬಲಿಸುತ್ತೇವೆ. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ. ಆದರೆ, ಜನರ ಭಾವನೆಗಳಿಗೆ ಘಾಸಿ ಮಾಡುವ ರೀತಿಯಲ್ಲಿ ಟಿಪ್ಪು, ಬಹಮನಿ ಸುಲ್ತಾನರಂತವರ ಜಯಂತಿ ಏಕೆ ಆಚರಿಸಬೇಕೆಂದು ಪ್ರಶ್ನಿಸಿದ ಯಡಿಯೂರಪ್ಪ, ಬಹಮನಿ ಸುಲ್ತಾನರ ಜಯಂತಿ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ನಿರ್ಧರಿಸಿದ್ದು, ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲ್ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಹುಸಂಖ್ಯಾತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವುದೇ ಕಾರಣಕ್ಕೂ ಬಹಮನಿ ಉತ್ಸವ ಮಾಡಬಾರದೆಂದು ಸರ್ಕಾರವನ್ನು ಒತ್ತಾಸಿದರಲ್ಲದೆ, ತಕ್ಷಣ ಬಹಮನಿ ಉತ್ಸವ ಆಚರಣೆ ಕೈಬಿಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಹಾಮಹಿಮರ ಜಯಂತಿ ಆಚರಣೆಯಿಂದ ಮನಸ್ಸಿಗೆ ಖುಷಿ ಆಗುತ್ತದೆ ಮತ್ತು
ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ. ಆದರೆ, ಟಿಪ್ಪು ಸುಲ್ತಾನ್, ಬಹಮನಿ ಸುಲ್ತಾನರ ಜಯಂತಿ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ. ಇದು ಗೊತ್ತಿದ್ದರೂ ಸರ್ಕಾರ ಸಮಾಜಕ್ಕೆ ಪೂರಕವಲ್ಲದ ವ್ಯಕ್ತಿಗಳ ಜಯಂತಿ ಆಚರಣೆ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದರು.
ಮಾಜಿ ಸಚಿವ ಬಾಬುರಾವ್ ಚೌಹಾಣ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಎಸ್ಸಿ ಮೋರ್ಚಾ
ಅಧ್ಯಕ್ಷ ಡಿ.ಎಸ್.ವೀರಯ್ಯ, ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.
ನೃತ್ಯಕ್ಕೆ ಹೆಜ್ಜೆ: ಇದಕ್ಕೂ ಮುನ್ನ ಬಿಜೆಪಿ ಕಚೇರಿ ಆವರಣದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಲಂಬಾಣಿ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ನೃತ್ಯಕ್ಕೆ ಹೆಜ್ಜೆಹಾಕಿದರು.
ಈ ಮಧ್ಯೆ ತಮಗೆ ನೃತ್ಯದ ಮೂಲಕ ಸ್ವಾಗತ ಕೋರಿದ ಲಂಬಾಣಿ ಮಹಿಳೆಯರಿಗೆ ಯಡಿಯೂರಪ್ಪ 2 ಸಾವಿರ ರೂ. ನೋಟು ನೀಡಿ
ಅಭಿನಂದಿಸಿದರು. ಲಂಬಾಣಿ ಮಹಿಳೆಯರು ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.