ಹಿಂದಿನ ಸ್ಪೀಕರ್ ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದಾರೆ ಎಂಬುದು ಜಗಜ್ಜಾಹೀರು: ಸಿ.ಟಿ ರವಿ
Team Udayavani, Nov 13, 2019, 12:36 PM IST
ಬೆಂಗಳೂರು: ಸರ್ವೋಚ್ಛ ನ್ಯಾಯಾಲಯವು ಅನರ್ಹತೆ ಎತ್ತಿಹಿಡಿದು ಚುನಾವಣೆ ನಿಲ್ಲಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಹಿಂದಿನ ಸಭಾಧ್ಯಕ್ಷರು ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದಾರೆ ಎಂದು ತೋರಿಸಿಕೊಟ್ಟಿದೆ ಎಂದು ಅನರ್ಹತೆಗೊಂಡ ಶಾಸಕರ ತೀರ್ಪು ಕುರಿತು ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಇಂದು ಮೂರು ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆ ಇದ್ದು, ಅಲ್ಲಿ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡುವ ಕುರಿತು ಚರ್ಚೆ ಮಾಡುತ್ತೇವೆ. ಅನರ್ಹ ಶಾಸಕರು ಯಾವ ಪಕ್ಷದಿಂದ ನಿಲ್ಲುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ. ಆ ಶಾಸಕರು ಚುನಾವಣೆಗೆ ಬಿಜೆಪಿಯಿಂದ ನಿಲ್ಲುತ್ತೇವೆ ಎಂದು ಪಕ್ಷಕ್ಕೆ ಅರ್ಜಿ ಸಲ್ಲಿಸಿದರೆ, ಆ ಬಳಿಕ ಹಿರಿಯರೊಂದಿಗೆ ಚರ್ಚಿಸಿ ಅವಕಾಶಕೊಡುವ ಕುರಿತು ನಿರ್ಧರಿಸಲಾಗುತ್ತದೆ.
ಕೆಲ ಅನರ್ಹ ಶಾಸಕರು ತಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿಲ್ಲುತ್ತೇವೆ ಎಂದು ಖಾಸಗಿಯಾಗಿ ಹೇಳಿರಬಹುದು. ಆದರೆ ಇದುವರೆಗೂ ಅಧಿಕೃತವಾಗಿ ಬಿಜೆಪಿಯಿಂದ ಸ್ಪರ್ಧಿಸುತ್ತೇವೆ ಎಂದು ಯಾವುದೇ ಅರ್ಜಿ ಬಂದಿಲ್ಲ ಎಂದು ತಿಳಿಸಿದರು.