ಅಧಿಕಾರಿಗಳು ಆಡಿದ್ದೇ ಆಟ!
Team Udayavani, Jul 28, 2018, 11:43 AM IST
ಬೆಂಗಳೂರು: “ಡಯಾಲಿಸಿಸ್ ಕೇಂದ್ರವಿಲ್ಲ, ಸಿಜಿಎಚ್ಎಸ್ ದರಪಟ್ಟಿ ಅನ್ವಯ ಶುಲ್ಕ ಪಡೆಯುತ್ತಿಲ್ಲ, ಯುಪಿಎಸ್ – ಜನರೇಟರ್ ವ್ಯವಸ್ಥೆಯಿಲ್ಲ, ಲಭ್ಯವಿರುವ ಸೌಲಭ್ಯ ಕುರಿತ ಫಲಕವಿಲ್ಲ, ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಿಲ್ಲ’.
ಬಿಬಿಎಂಪಿ ಕೋಟ್ಯಂತರ ರೂ. ಸುರಿದು ಶ್ರೀರಾಮಪುರದಲ್ಲಿ ನಿರ್ಮಿಸಿರುವ ಡಾ.ಅಂಬೇಡ್ಕರ್ ಡೇ ಕೇರ್ ಸೆಂಟರ್ ಅನ್ನು ಅತ್ಯಂತ ಕಡಿಮೆ ಬಾಡಿಗೆಗೆ ಪಡೆದಿರುವ ಖಾಸಗಿ ಸಂಸ್ಥೆ, ಉಲ್ಲಂ ಸಿರುವ ನಿಯಮಗಳ ಒಂದಿಷ್ಟು ಉದಾಹರಣೆಗಳಿವು.
ಪಾಲಿಕೆಯಿಂದ ದಯಾನಂದ ನಗರ ವಾರ್ಡ್ನಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡವನ್ನು ಖಾಸಗಿಯವರಿಗೆ 7,000 ರೂ. ಮಾಸಿಕ ಬಾಡಿಗೆಗೆ ನೀಡಲಾಗಿದೆ.
ಆದರೆ, ಒಪ್ಪಂದದ ವೇಳೆ ಪಾಲಿಕೆ ವಿಧಿಸಿದ್ದ ಎಲ್ಲ ನಿಯಮಗಳನ್ನು ಬಾಡಿಗೆದಾರರು ಉಲ್ಲಂ ಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆ ಮಾಸಿಕ 1,84,595 ರೂ. ಬಾಡಿಗೆ ನಿಗದಿಪಡಿಸಿದೆ. ಆದರೆ, ಅಧಿಕಾರಿಗಳು ಕೇವಲ 7 ಸಾವಿರ ರೂ.ಗೆ ಕಟ್ಟಡವನ್ನು ಬಾಡಿಗೆಗೆ ನೀಡಿದೆ. ಈ ನಡುವೆ ಎಲ್ಲ ರೀತಿಯ ನಿಯಮಗಳನ್ನು ಉಲ್ಲಂ ಸಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಸ್ಥಳೀಯ ಪಾಲಿಕೆ ಸದಸ್ಯರ ಆರೋಪ.
ಪಾಲಿಕೆಯಿಂದ ನಿರ್ಮಿಸಿದ ಅಂಬೇಡ್ಕರ್ ಡೇ ಕೇರ್ ಸೆಂಟರ್ ಕಟ್ಟಡವನ್ನು ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆ ಅನುಮೋದನೆ ಪಡೆದು ಎರಡು ಸಂಸ್ಥೆಗಳಿಗೆ ಬಾಡಿಗೆಗೆ ನೀಡಲಾಗಿದೆ.
ಆದರೆ, ಒಂದು ಸಂಸ್ಥೆ ತನಗೆ ಸೌಲಭ್ಯ ಬೇಡವೆಂದು ಪತ್ರ ನೀಡಿ ಒಪ್ಪಂದದಿಂದ ದೂರ ಸರಿದಿತ್ತು. ಅದರಂತೆ ಒಪ್ಪಂದವನ್ನು ರದ್ದುಗೊಳಿಸಿ ಮತ್ತೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕಿತ್ತಾದರೂ, ಒಂದೇ ಸಂಸ್ಥೆಗೆ ಅಧಿಕಾರಿಗಳು ಕಟ್ಟಡವನ್ನು ನೀಡಿದ್ದಾರೆ.
ಷರತ್ತು ಉಲ್ಲಂಘನೆ: ಬಾಡಿಗೆದಾರರೊಂದಿಗೆ ಬಿಬಿಎಂಪಿ ಕೆಲವು ಷರತ್ತು ವಿಧಿಸಿದೆ. ಸಾರ್ವಜನಿಕರಿಗೆ ಸರ್ಕಾರದ ಸಿಜಿಎಚ್ಎಸ್ ದರಪಟ್ಟಿ ಅನ್ವಯ ಶುಲ್ಕ ಪಡೆಯಬೇಕು ಎಂದು ಸೂಚಿಸಿದೆ. ಆದರೆ, ಬಾಡಿಗೆದಾರರು ತಮ್ಮದೇ ಆದ ಪ್ರತ್ಯೇಕ ದರಪಟ್ಟಿ ಹೊಂದಿದ್ದಾರೆ. ಹಾಗೆಯೇ ಷರತ್ತಿನನ್ವಯ ಡಯಾಲಿಸಿಸ್ ಕೇಂದ್ರವನ್ನೂ ಸ್ಥಾಪಿಸಿಲ್ಲ,
ಅಗತ್ಯ ವೈದ್ಯರು ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ. ಉಪಕರಣಗಳನ್ನು ಅಳವಡಿಸಿಲ್ಲ. ಇದರೊಂದಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬ ನಿಯಮವಿದೆ. ಆದರೆ, ಇತ್ತೀಚೆಗೆ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನೂ ಆಯೋಜಿಸಿಲ್ಲ ಎಂಬುದು ವಲಯ ಜಂಟಿ ಆಯುಕ್ತರು ನೀಡಿರುವ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಆಸ್ಪತ್ರೆ ಸ್ಥಳಾಂತರಕ್ಕೆ ಹಿಂದೇಟು: ಪಾಲಿಕೆಯಿಂದ ನಿರ್ಮಿಸಿದ ಹೊಸ ಕಟ್ಟಡಕ್ಕೆ ಶ್ರೀರಾಮಪುರ ರೆಫರಲ್ ಆಸ್ಪತ್ರೆಯನ್ನು ಸ್ಥಳಾಂತರಿಸುವಂತೆ ಈ ಮೊದಲೇ ಸ್ಥಳೀಯ ಪಾಲಿಕೆ ಸದಸ್ಯರು, ಆಯುಕ್ತರಿಗೆ ಮನವಿ ನೀಡಿದ್ದರು.
ಆದರೂ ಅಧಿಕಾರಿಗಳು ಕಟ್ಟಡವನ್ನು ಬಾಡಿಗೆಗೆ ನೀಡುವ ಮೂಲಕ ಪಾಲಿಕೆಯ ಆಸ್ಪತ್ರೆಯನ್ನು ನಿರ್ಲಕ್ಷಿಸಿದ್ದಾರೆ. ಶ್ರೀರಾಮಪುರ ಆಸ್ಪತ್ರೆ 20 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಪ್ರತಿ ತಿಂಗಳು ಕನಿಷ್ಠವೆಂದರೂ 100ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ.
ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗವೂ ಇದ್ದು, ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ, ಕೊಠಡಿಗಳು ಹಾಗೂ ಸಮರ್ಪಕ ವಿದ್ಯುತ್, ಜನರೇಟರ್ ವ್ಯವಸ್ಥೆಯಿಲ್ಲದಂತಾಗಿದೆ.
ವಿದ್ಯುತ್ ವ್ಯತ್ಯಯದಿಂದ ಇತ್ತೀಚೆಗೆ ಕಾಮಾಲೆ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಬ್ಲೂಲೈಟ್ ಫೋಟೋ ಥೆರಪಿ ನೀಡಲು ಸಾಧ್ಯವಾಗದೇ ಮಗು ಸಾವು ಸಂಭವಿಸಿದ ಘಟನೆಯೂ ನಡೆದಿದೆ. ಆದರೂ ಪಾಲಿಕೆಯ ಅಧಿಕಾರಿಗಳು ಆಸ್ಪತ್ರೆಯ ಅಭಿವೃದ್ಧಿ ಅಥವಾ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುತ್ತಿಲ್ಲ.
ಅಂಬೇಡ್ಕರ್ ಡೇ ಕೇರ್ ಸೆಂಟರ್ಅನ್ನು ಬಾಡಿಗೆಗೆ ಪಡೆದರೂ ಹಲವು ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂಬುದು ಜಂಟಿ ಆಯುಕ್ತರೇ ವರದಿ ನೀಡಿದ್ದಾರೆ. ಹೀಗಾಗಿ ಕೂಡಲೇ ಕಟ್ಟಡ ವಾಪಸ್ ಪಡೆದು ಶ್ರೀರಾಮಪುರ ರೆಫರಲ್ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು.
-ಕುಮಾರಿ ಪಳನಿಕಾಂತ್, ದಯಾನಂದ ನಗರ ಪಾಲಿಕೆ ಸದಸ್ಯೆ
ಜಂಟಿ ಆಯುಕ್ತರಿಂದ ಮುಂದಿನ ಕೌನ್ಸಿಲ್ ಸಭೆಯಲ್ಲಿ ಉತ್ತರ ಪಡೆಯಲಾಗುವುದು. ಒಂದೊಮ್ಮೆ ನಿಯಮಗಳನ್ನು ಉಲ್ಲಂ ಸಿರುವುದು ಖಚಿತವಾದರೆ, ಒಪ್ಪಂದ ರದ್ದುಪಡಿಸಿ ಪಾಲಿಕೆಯ ರೆಫರಲ್ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು.
-ಆರ್.ಸಂಪತ್ರಾಜ್, ಮೇಯರ್
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ