ಮನೆಯಲ್ಲಿ ಉಳಿದುಕೊಂಡು ಚಿನ್ನಾಭರಣ ಕದ್ದ ಸ್ನೇಹಿತೆ
Team Udayavani, Sep 19, 2022, 11:18 AM IST
ಬೆಂಗಳೂರು: ಚಿನ್ನಾಭರಣಗಳ ವಿನ್ಯಾಸ ನೋಡುವ ನೆಪದಲ್ಲಿ ಸ್ನೇಹಿತೆಯ ಮನೆಯಲ್ಲೇ ಮಲಗಿ, ಮುಂಜಾನೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ನಿವಾಸಿ ಪಿ.ಜಿ.ಗೀತಾ(32) ಬಂಧಿತೆ. ಆಕೆಯಿಂದ 9.84 ಲಕ್ಷ ರೂ. ಮೌಲ್ಯದ 216 ಗ್ರಾಂ ಚಿನ್ನಾಭರಣ, 231 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತೆ ಗುರುದರ್ಶನ ಬಡಾವಣೆ ನಿವಾಸಿ ಲಕ್ಷ್ಮೀ ಎಂಬುವರ ಮನೆಯಲ್ಲಿ ಆ.16ರಂದು ಚಿನ್ನಾಭರಣ ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಲಕ್ಷ್ಮೀ ಹಾಗೂ ಆರೋಪಿತೆ ಗೀತಾ ಮೈಸೂರು ಮೂಲದವರಾಗಿದ್ದು, ಅಕ್ಕ-ಪಕ್ಕದ ಮನೆಯಲ್ಲೇ ವಾಸವಾಗಿದ್ದಾರೆ. ಹೀಗಾಗಿ ಹತ್ತು ವರ್ಷಗಳಿಂದ ಸ್ನೇಹಿತರು. ಇಬ್ಬರು ಮದುವೆ ಬಳಿಕ ಬೆಂಗಳೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಹೀಗಾಗಿ ಆಗಾಗ್ಗೆ ಗೀತಾ, ಲಕ್ಷ್ಮೀ ನಿವಾಸಕ್ಕೆ ಬರುತ್ತಿದ್ದಳು. ಆ.16ರಂದು ಶಾಪಿಂಗ್ ಮಾಡಲು ಕೆಂಗೇರಿಯಿಂದ ಸಿಟಿಗೆ ಬಂದಿದ್ದಾರೆ. ಸಂಜೆಯಾಗಿದ್ದರಿಂದ ಲಕ್ಷ್ಮೀ, ಸ್ನೇಹಿತೆಯನ್ನು ಮನೆಯಲ್ಲಿ ಉಳಿದುಕೊಂಡು, ಬೆಳಗ್ಗೆ ಹೋಗುವಂತೆ ಸೂಚಿಸಿದ್ದರು. ರಾತ್ರಿ ಇಬ್ಬರು ಚಿನ್ನಾಭರಣಗಳ ವಿನ್ಯಾಸದ ಬಗ್ಗೆ ಚರ್ಚಿಸಿದ್ದಾರೆ. ತಡರಾತ್ರಿ ಲಕ್ಷ್ಮೀಯ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಗೀತಾ, ಮರು ದಿನ ಮುಂಜಾನೆ ಎದ್ದು ಕೆಂಗೇರಿಯ ಮನೆಗೆ ಹೋಗಿದ್ದಳು. ಮೂರು ದಿನಗಳ ಬಳಿಕ ಲಕ್ಷ್ಮೀ ಚಿನ್ನಾಭರಣದ ಬಾಕ್ಸ್ ನೋಡಿಕೊಂಡಾಗ ಕಳವು ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ಅನುಮಾನದ ಮೇರೆಗೆ ಗೀತಾಳನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಗೀತಾಳ ವಿಚಾರಣೆ ವೇಳೆ, ಮರು ದಿನ ಬೆಳಗ್ಗೆ ಮನೆಗೆ ಹೋಗುವಾಗ, ಬಟ್ಟೆ ಬದಲಿಸಲು ಕೊಠಡಿಯ ಬಾಗಿಲು ಲಾಕ್ ಮಾಡಿಕೊಂಡು, ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ತನ್ನ ಬ್ಯಾಗ್ಗೆ ಹಾಕಿಕೊಂಡು ಪರಾರಿಯಾಗಿದ್ದಳು. ಅದೇ ಚಿನ್ನಾಭರಣವನ್ನು ಮೈಸೂರಿಗೆ ಕೊಂಡೊಯ್ದು ಗಿರವಿ ಇಟ್ಟು ಹಣ ಪಡೆದುಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ