ಗುಂಡೇಟು ತಿಂದು ಪೊಲೀಸರ ಅತಿಥಿಯಾದ ಮಗು ಅಪಹರಣಕಾರ
Team Udayavani, Oct 14, 2017, 10:33 AM IST
ಬೆಂಗಳೂರು: ಜೀವನ ನಿರ್ವಹಣೆಗೆ ಪತಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಮಗಳ ಪ್ರಿಯತಮನ ಜತೆ ಸೇರಿ ಮಗು ಅಪಹರಿಸಿದ ಪ್ರಕರಣವನ್ನ ಕೊತ್ತನೂರು ಠಾಣೆ ಪೊಲೀಸರು ಶುಕ್ರವಾರ ಭೇದಿಸಿದ್ದಾರೆ. ಮಗು ಅಪಹರಣ ಮಾಡಿದ್ದ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟು ತಿಂದು ಜೈಲು ಸೇರಿದ್ದು, ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಗೋವಿಂದಪುರದ ನಿವಾಸಿ ಮೊಹಮ್ಮದ್ ನೂರುಲ್ಲಾ (24) ಗುಂಡೇಟು ತಿಂದಿದ್ದು, ಮಗು ಅಪಹರಣಕ್ಕೆ ಈತನಿಗೆ ನೆರವಾಗಿದ್ದ ಐಸಾಕ್ ಖಾನ್ (19), ಅಬ್ದುಲ್ ವಾಹಿದ್ ಹಾಗೂ ಭಾರತಿ ನಗರ ನಿವಾಸಿ, ಪ್ರಕರಣದ ಮಾಸ್ಟರ್ ಮೈಂಡ್, ಶಹನಾಜ್ ಖಾನಮ್ (39) ಎಂಬಾಕೆಯನ್ನು ಬಂಧಿಸಲಾಗಿದೆ.
ಪೊಲೀಸರ ಮೇಲೇ ಹಲ್ಲೆ ಮಾಡಿದ: ನೂರುಲ್ಲಾನನ್ನು ಬಂಧಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಆತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಕೊತ್ತನೂರು ಠಾಣೆ ಪಿಎಸ್ಐ ಶಿವಪ್ಪ ನಾಯಕ್ ಮತ್ತು ಮುಖ್ಯ ಪೇದೆ ಅಬ್ದುಲ್ ಹಮೀದ್ ಗಾಯಗೊಂಡಿ ದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ನೂರುಲ್ಲಾನ ಕಾಲಿಗೆ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದು, ಆಸ್ಪತ್ರೆಯಲ್ಲಿ ಚಿಕ್ಕಿತ್ಸೆ ನೀಡಲಾಗುತ್ತಿದೆ. ಅ.5ರಂದು ಮಧ್ಯಾಹ್ನ ಹೆಗ್ಗಡೆನಗರದ ಶಬರಿನಗರದ ಎಕ್ಸ್-ಸರ್ವೀಸ್ ಲೇಔಟ್ನ ಕಾರ್ಮಿಕರ ಶೆಡ್ ಮುಂದೆ ಆಟವಾಡುತ್ತಿದ್ದ ರಾಯಚೂರು ಮೂಲದ ದೊಡ್ಡ ಭೀಮಯ್ಯ ಮತ್ತು ಮಹೇಶ್ವರಿ ದಂಪತಿಯ ಒಂದು ವರ್ಷದ ಪುತ್ರ ಅಭಿರಾಮ್ ನನ್ನು ಆರೋಪಿಗಳು ಅಪಹರಣ ಮಾಡಿದ್ದರು. ವಿಷಯ ತಿಳಿದ ಪೋಷಕರು ಕೊತ್ತನೂರು ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು
ತಿಳಿಸಿದ್ದಾರೆ.
ಪತಿಯಿಂದ ಹಣ ವಸೂಲಿಗಾಗಿ ಕೃತ್ಯ: ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಶಹನಾಜ್ ಖಾನಮ್ಳ ಮೊದಲ ಪತಿ ಮೃತಪಟ್ಟಿದ್ದು, ಬಳಿಕ ಗೌರಿಪಾಳ್ಯದ ಫೈರೋಜ್ಖಾನ್ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು. ಮೊದಲ ಪತಿಯಿಂದ ಜನಿಸಿದ್ದ ಮೂವರು ಹೆಣ್ಣು ಮಕ್ಕಳ ಜತೆ ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ನೆಲೆಸಿದ್ದ ಆಕೆಗೆ ಮನೆ ನಿರ್ವಹಣೆಗೆ ಫೈರೋಜ್ ಖಾನ್ ಹಣ ನೀಡುತ್ತಿದ್ದ. ಆದರೆ, ಕೆಲ ತಿಂಗಳಿನಿಂದ ಮನೆಗೆ ಬರುವುದನ್ನೇ ನಿಲ್ಲಿಸಿದ್ದ ಆತ, ಹಣವನ್ನೂ ಕೊಡುತ್ತಿರಲ್ಲಿಲ್ಲ. ಇದರಿಂದ ಬೇಸತ್ತ ಶಹನಾಜ್ ಖಾನಮ್ ಗಂಡು ಮಗುವೊಂದನ್ನು ತಂದು, ಆ ಮಗು ಫೈರೋಜ್ಖಾನ್ಗೆ ಹುಟ್ಟಿದೆ ಎಂದು ಹೇಳಿ, ಆತನಿಂಧ ಹಣ ವಸೂಲಿ ಮಾಡಲು ಯೋಚಿಸಿದ್ದಳು.
ದೊಡ್ಡ ಮಗಳ ಪ್ರೇಮಿಗೆ ಸುಪಾರಿ: ಈ ಕುರಿತು ತನ್ನ ಹಿರಿಯ ಪುತ್ರಿಯ ಪ್ರಿಯಕರ ಮೊಹಮ್ಮದ್ ನೂರುಲ್ಲಾಗೆ ವಿಷಯ ತಿಳಿಸಿದ ಶಹನಾಜ್, ಆಸ್ಪತ್ರೆಯಲ್ಲಿ ಯಾರಾದರೂ ಮಗುವನ್ನು ಸಾಕಲು ಆಗುವುದಿಲ್ಲವೆಂದು ಮಗು ಕೊಡಲು ಮುಂದಾದರೆ ಒಂದು ಚಿಕ್ಕ ಮಗುವನ್ನು ತಂದು ಕೊಡುವಂತೆ ತಿಳಿಸಿದ್ದಳು. ಅದಕ್ಕಾಗಿ 15 ಸಾವಿರ ರೂ. ಕೂಡ ನೀಡಿದ್ದ ಆಕೆ, ಮಗು ತಂದು ಕೊಟ್ಟರೆ, ಆದಷ್ಟು ಬೇಗ ಮಗಳ ಜತೆ ಮದುವೆ ಮಾಡುವುದಾಗಿ ಆಸೆ ಹುಟ್ಟಿಸಿದ್ದಳು. ಇದರಿಂಧ ಉತ್ಸಾಹಿತನಾದ ನೂರುಲ್ಲಾ, ತನ್ನ ಸ್ನೇಹಿತರಾದ ಐಸಾಕ್ಖಾನ್ ಮತ್ತು ವಾಹಿದ್ಗೆ ವಿಷಯ ತಿಳಿಸಿದ್ದಾನೆ. ಆದರೆ, ಆಸ್ಪತ್ರೆಯಲ್ಲಿ ವಿಚಾರಿಸುವ ಬದಲು ಹೆಗ್ಗಡೆನಗರದಲ್ಲಿರುವ ತನ್ನ ಸಂಬಂಧಿಯೊಬ್ಬನ ಜತೆ ಚರ್ಚಿಸಿದ ನೂರುಲ್ಲಾ, ಕೂಲಿ ಕಾರ್ಮಿಕರ ಮಗವೊಂದನ್ನು ಅಪಹರಿಸಲು ಯೋಚಿಸಿದ್ದ. ಅದರಂತೆ ಅಲ್ಲಿದ್ದ ಗಂಡು ಮಗುವೊಂದನ್ನು ಅಪಹರಿಸಲು ಸಂಚು ರೂಪಿಸಿ 15 ದಿನಗಳ ಕಾಲ ಆ ಪ್ರದೇಶದಲ್ಲಿ ಸುತ್ತಾಡಿ ಮಗುವಿನ ಪೋಷಕರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಮಗುವಿನ ತಲೆ ಬೋಳಿಸಿದ್ದ ಶಹನಾಜ್: ಅ.5ರಂದು ಬೆಳಗ್ಗೆ 9 ಗಂಟೆಗೆ ಐಸಾಕ್ ಮತ್ತು ವಾಹಿದ್ನನ್ನು ಹೆಗ್ಗಡೆ ನಗರಕ್ಕೆ ಕರೆತಂದ ನೂರುಲ್ಲಾ, ಆಟೋವೊಂದರಲ್ಲಿ ಅವರನ್ನು ಕೂರಿಸಿ, ತಾನು ಬೈಕ್ ಏರಿ ಕೂಲಿ ಕಾರ್ಮಿಕರ ಶೆಡ್ ಬಳಿ ಸುತ್ತಾಡಿದ್ದಾನೆ. ಈ ವೇಳೆ ಅಭಿರಾಮ್ ಎಂಬ ಬಾಲಕನನ್ನು ವೃದ್ಧೆಯೊಬ್ಬರು ನೋಡಿಕೊಳ್ಳುತ್ತಿದ್ದರು. ಮಧ್ಯಾಹ್ನ 2 ಗಂಟೆವರೆಗೆ ಕಾದ ಆರೋಪಿ, ವೃದ್ಧೆ ಮನೆಯೊಳಗೆ ಹೋಗುತ್ತಿದ್ದಂತೆ ಮಗುವನ್ನು ಅಪಹರಿಸಿದ್ದ. ನಂತರ ಮೂವರು ಆರೋಪಿಗಳು ಒಂದೇ ಬೈಕ್ ನಲ್ಲಿ ಬಂದು, ಶಿವಾಜಿನಗರದಲ್ಲಿರುವ ಶಹನಾಜ್ ಗೆ ಮಗು ಕೊಟ್ಟ ಪರಾರಿಯಾಗಿದ್ದರು. ಇತ್ತ ಮಗುವನ್ನು ಪಡೆದ ಶಹನಾಜ್, ಮಗುವನ್ನು ಯಾರೂ ಗುರುತಿಸಬಾರದು ಎಂದು ತಲೆ ಬೋಳಿಸಿದ್ದಳು. ಬಳಿಕ ತನ್ನ ಎರಡನೇ ಪತಿ ಫೈರೋಜ್ಖಾನ್ ಗೆ ಕರೆ ಮಾಡಿ ಮುಖ್ಯವಾದ ವಿಚಾರವೊಂದರ ಕುರಿತು ಮಾತನಾಡಬೇಕು ಕೂಡಲೇ ಬಾ ಎಂದು ಹೇಳಿದ್ದಳು.
ಸುಳಿವು ಕೊಟ್ಟ ಸಿಸಿಟಿವಿ: ಪ್ರಕರಣ ದಾಖಲಾಗುತ್ತಿದ್ದಂತೆ ಸಂಪಿಗೆಹಳ್ಳಿ ಉಪವಿಭಾಗದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು. ಘಟನಾ ಸ್ಥಳದ ಬಳಿಯಿರುವ ಸಿಸಿಟಿವಿಗಳನ್ನು ಪರಿಶೀಲಿಸಿದ ಈ ತಂಡಕ್ಕೆ ಮೂವರು ಆರೋಪಿಗಳು ಅಪಾಚೆ ಬೈಕ್ನಲ್ಲಿ ಅನುಮಾನಸ್ಪದವಾಗಿ ಹೋಗುತ್ತಿರುವುದು ಕಂಡುಬಂತು. ದರೊಂದಿಗೆ ಈ ಭಾಗದ ಫೋನ್ ಕರೆ ವಿವರಗಳನ್ನೂ ಸಂಗ್ರಹಿಸಿದ ತಂಢ ಗುರುವಾರ ರಾತ್ರಿ ವಾಹಿದ್ ಮತ್ತು ಐಸಾಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದರು. ಇವರು ನೀಡಿದ ಮಾಹಿತಿ ಮೇರೆಗೆ ತಡರಾತ್ರಿ 10.30ರ ಸುಮಾರಿಗೆ ಶಿವಾಜಿನಗರದಲ್ಲಿರುವ ಶಹನಾಜ್ಳನ್ನು ಬಂಧಿಸಿ, ಮಗುವನ್ನು ರಕ್ಷಿಸಲಾಯಿತು.
ಆದರೆ ನೂರುಲ್ಲಾ ಪರಾರಿಯಾಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ