ಬೆಂಗ್ಳೂರಲೀಗ ಅಸಲಿ ಮಾವಿನ ಸುಗ್ಗಿ
Team Udayavani, May 28, 2018, 10:56 AM IST
ಮಾವಿನ ಸುಗ್ಗಿ ಬಂದ್ರೆ ಸಾಕು ಮಹಾನಗರದ ತುಂಬಾ ಮಾವಿನ ಹಣ್ಣುಗಳ ಘಮಲು. ಜತೆಗೆ ಹಲಸು ಕೂಡ ಕಣ್ಮನ ಸೆಳೆಯುತ್ತದೆ. ಮಾವು ಮತ್ತು ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸಲು ಹಾಗೂ ಗ್ರಾಹಕರಿಕೆ ರುಚಿಕರ, ರಾಸಾಯನಿಕ ಮುಕ್ತ ಹಣ್ಣುಗಳನ್ನು ಒದಗಿಸುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಹಾಪ್ಕಾಮ್ಸ್ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ಒಂದರ ಹಿಂದೊಂದು ಮಾವು-ಹಲಸು ಮೇಳ ಆಯೋಜಿಸುತ್ತವೆ. ನಗರದಲ್ಲಿ ಸದ್ಯ ನಡೆಯುತ್ತಿರುವ ಇಂಥ ಹಲವು ಮೇಳಗಳ ಕುರಿತ ಮಾಹಿತಿ ಇಲ್ಲಿದೆ.
ಸಸ್ಯಕಾಶಿಯಲ್ಲಿ ರೈತರ ಮಾವುಮೇಳ ಕಳೆದ 7 ವರ್ಷಗಳಿಂದ ಲಾಲ್ಬಾಗ್ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮಾವು ಮತ್ತು ಹಲಸು ಮೇಳ ಯೋಜಿಸುತ್ತಿವೆ. ಈ ಬಾರಿ ಮೇಳ ಈಗಾಗಲೇ ಆರಂಭವಾಗಿದ್ದು, ಜೂ.15ರವರೆಗೆ ನಡೆಯಲಿದೆ. ಮಾವು ಬೆಳೆದ ರೈತರೇ ಖುದ್ದು ಇಲ್ಲಿ ಹಣ್ಣು ಮಾರುತ್ತಿದ್ದಾರೆ. ಲಾಲ್ಬಾಗ್ನಲ್ಲಿ 90 ಮಳಿಗೆಗಳಿದ್ದು, 25-30 ತಳಿಯ ಮಾವು ಮತ್ತು ಹಲಸಿನ ಹಣ್ಣುಗಳು ಲಭ್ಯವಿವೆ.
ಮಾರುಕಟ್ಟೆಗಿಂತ ಕಡಿಮೆ ಬೆಲೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರೇ ನೇರವಾಗಿ ನೇರವಾಗಿ ಮಾವು ಮಾರಾಟ ಮಾಡುವುದರಿಂದ ಹಣ್ಣಿನ ಬೆಲೆ ಮಾರುಕಟ್ಟೆಗಿಂತ ಶೇ.40ರಷ್ಟು ಕಡಿಮೆ ಇರುತ್ತದೆ. ಮಾರುಕಟ್ಟೆಯಲ್ಲಿ ಬಾದಾಮಿ ಮಾವಿನ ಹಣ್ಣಿನ ಬೆಲೆ 100 ರೂ. ಇದ್ದರೇ ಈ ಮೇಳದಲ್ಲಿ 60 ರೂ. ದೊರೆಯುತ್ತದೆ. ಇನ್ನು ಪ್ರತಿನಿತ್ಯ ಬೆಲೆ ವ್ಯತ್ಯಾಸವಾಗಲಿದ್ದು, ಮಾವು ನಿಗಮದ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಮಿತಿ ಬೆಲೆ ನಿರ್ಧರಿಸುತ್ತದೆ. ಮಾರಾಟಕ್ಕೆ ಮುನ್ನ ಕೃಷಿ ತಜ್ಞರ ತಂಡ ಹಣ್ಣುಗಳನ್ನು ಪರೀಕ್ಷಿಸಲಿದ್ದು, ನೈಸರ್ಗಿಕವಾಗಿ ಮಾಗಿರುವ, ಕನಿಷ್ಠ ರಾಸಾಯನಿಕ ಬಳಸಿ ಬೆಳೆದ ಹಣ್ಣುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡುತ್ತದೆ.
ಮೆಟ್ರೋದಲ್ಲಿ ಮಾವಿನ ಘಮಲು ಈ ಬಾರಿ ನಗರದ 22 ಮೆಟ್ರೋ ರೈಲು ನಿಲ್ದಾಣಗಳಲ್ಲಿ ಮಾವಿನ ಮಳಿಗೆ ಹಾಕಲಾಗಿದೆ. ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಮಾವು ಮೆಟ್ರೋ ಪ್ರಯಾಣಿಕರು ಖರೀದಿಸಬಹುದಾಗಿದ್ದು, ಶನಿವಾರ ಮತ್ತು ಭಾನುವಾರ ಕಬ್ಬನ್ ಉದ್ಯಾನವನ ಹಾಗೂ ಮೈಸೂರು ಬ್ಯಾಂಕ್ ವೃತ್ತದ ಎಫ್ ಕೆಸಿಸಿಐಯಲ್ಲೂ ಮಾವು ಸಿಗುತ್ತದೆ.
ತರಾವರಿ ತಳಿಗಳ ಸಂಶೋಧನೆ ಮಾವು ಹಾಗೂ ಹಲಸಿನ ವೈವಿಧ್ಯತೆ ಪರಿಚಯಿಸುವ ನಿಟ್ಟಿನಲ್ಲಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಮೇ 24ರಿಂದ 26 ವರೆಗೆ ಮಾವು ಮತ್ತು ಹಲಸಿನ ಹಣ್ಣಿನ ತಳಿ ವೈವಿಧ್ಯತಾ ಮೇಳ ಹಮ್ಮಿಕೊಂಡಿತ್ತು. ಸಂಸ್ಥೆ ಈ ಬಾರಿ 750 ತಳಿಗಳನ್ನು ಸಂಶೋಧಿಸಿ ಬೆಳೆಸಿದ್ದು, ಆ ಪೈಕಿ 352 ಮಾವಿನ ತಳಿಗಳು, ಹಲಸಿನ 120 ತಳಿಗಳು ಫಲ ನೀಡಿವೆ. ಮೇಳಕ್ಕೆ ಭೇಟಿ ನೀಡಿದ ಸಾರ್ವಜನಿಕರಿಗೆ ಸಂಸ್ಥೆಯ 12 ವಿಜ್ಞಾನಿಗಳು ಹಾಗೂ 25 ತಂತ್ರಜ್ಞರು ಮಾರ್ಗದರ್ಶನ ಹಾಗೂ ತಳಿಗಳ ಪರಿಚಯ ಮಾಡಿಕೊಟ್ಟಿದ್ದು, ಮೂರು ದಿನ ನಡೆದ ಮೇಳಕ್ಕೆ 8 ಸಾವಿರ ಮಂದಿ ಭೇಟಿ ನೀಡಿದ್ದು ವಿಶೇಷ.
ದಾಖಲೆ ಮುಂಗಡ ಬುಕ್ಕಿಂಗ್ ಹೆಸರಘಟ್ಟ ಮೇಳಕ್ಕೆ ಭೇಟಿಕೊಟ್ಟ ರೈತರಿಗೆ ಮಾವು ಹಾಗೂ ಹಲಸಿನ ಹೊಸ ತಳಿ ಗಿಡಗಳನ್ನು ಕೊಂಡುಕೊಳ್ಳಲು ಹಾಗೂ ಮುಂಗಡ ಖಾಯ್ದಿರಿಸಲು ಅವಕಾಶ ನೀಡಲಾಗಿತ್ತು. ಒಂದು ಗಿಡಕ್ಕೆ 75 ರೂ. ಬೆಲೆ ನಿಗದಿ ಮಾಡಲಾಗಿತ್ತು. ಮೂರು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳು ಮಾರಾಟವಾಗಿದ್ದು, 25 ಸಾವಿರ ಮಾವು ಹಾಗೂ 10 ಸಾವಿರಕ್ಕೂ ಹೆಚ್ಚಿನ ಹಲಸು ಸಸಿಗಳ ಬುಕಿಂಗ್ ಆಗಿದೆ. ಜತೆಗೆ ಬೇಸಾಯ, ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ತಳಿ ಅಭಿವೃದ್ಧಿ ಕುರಿತು ವಿಜ್ಞಾನಿಗಳಿಂದ ರೈತರು ಮಾಹಿತಿ ಪಡೆದರು.
ಸೀಸನ್ ಮುಗಿಯುವವರೆಗೂ ಹಾಪ್ಕಾಮ್ಸ್ ಮಾವು ಮೇಳ ಪ್ರತಿ ವರ್ಷದಂತೆ ಈ ಬಾರಿಯೂ ಹಾಪ್ಕಾಮ್ಸ್ ನಗರದ 250 ಮಳಿಗೆಗಳಲ್ಲಿ ಮಾವು ಹಾಗೂ ಹಲಸು ಮೇಳ ಹಮ್ಮಿಕೊಂಡಿದೆ. ರೈತರು ಬೆಳೆದ ಮಾವಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಹಾಗೂ ಗ್ರಾಹಕರಿಗೆ ರಾಸಾಯನಿಕ ಮುಕ್ತ ಸಾವ ಯವ ಹಣ್ಣುಗಳನ್ನು ನೀಡುವುದು ಮೇಳದ ಉದ್ದೇಶ. ವಿಶೇಷವೆಂದರೆ ಸುಗ್ಗಿ ಮುಗಿ ಯುವವರೆಗೂ ಮೇಳ ನಡೆ ಯಲಿದ್ದು, ಹಣ್ಣುಗಳ ಮೇಲೆ ಶೇ.10ರಷ್ಟು ರಿಯಾಯಿತಿ ಇದೆ. ಇನ್ನು ವಿಶೇಷವಾಗಿ ಕಾರ್ಬೈಟ್ ಮುಕ್ತ ಹಣ್ಣುಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌ ತಿಳಿಸಿದ್ದಾರೆ.
1200 ಕೆ.ಜಿ ಮಾವು ಖರೀದಿ
ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಮಾವು ನಿಗಮ ಮ್ಯಾಂಗೋ ಪಿಕ್ಕಿಂಗ್ ಟೂಟ್ ಆಯೋಜಿಸಿದ್ದು,
ಭಾನುವಾರ ತೆರಳಿದ್ದ ಈ ಸುಗ್ಗಿಯ ಮೊದಲ ಪ್ರವಾಸದಲ್ಲಿ 150 ಜನರನ್ನು 3 ಬಸ್ಗಳಲ್ಲಿ ಮಾವಿನ ತೊಟಕ್ಕೆ ಕರೆದೊಯ್ಯಲಾಗಿತ್ತು. ರಾಮನಗರ ಜಿಲ್ಲೆ (ಕನಕಪುರ ತಾಲೂಕು) ವೆಂಕಟರಾಯನದೊಡ್ಡಿ ಗ್ರಾಮದ ಮಂಜು ಅವರ ತೋಟಕ್ಕೆ 100 ಜನ ಹಾಗೂ ತುಮಕೂರು ಜಿಲ್ಲೆ (ಮಧುಗಿರಿ ತಾಲೂಕು) ದೊಡ್ಡ ಮಾಲೂರು ಗ್ರಾಮದ ಕೆ.ಮುನಿರಾಜು ಅವರ ಮಾವಿನ ತೋಟಕ್ಕೆ 50 ಜನ ಭೇಟಿಕೊಟ್ಟಿದ್ದಾರೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೂ ಮಾವಿನ ತೋಟದಲ್ಲಿ ಕಾಲ ಕಳೆದ ಪ್ರವಾಸಿಗರು, 1200 ಕೆ.ಜಿ ಮಾವು ಖರೀದಿಸಿದ್ದು, ಒಟ್ಟು 40 ಸಾವಿರ ರೂ. ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ವರ್ಷಗಳಿಂದ ಲಾಲ್ಬಾಗ್ನಲ್ಲಿ ಮೇಳ ಆಯೋಜಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾವು ಹಾಗೂ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚುತ್ತಿದೆ. ಜತೆಗೆ ರೈತರೇ ನೇರವಾಗಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.
ಕೆ.ಎಂ.ಪರಶಿವಮೂರ್ತಿ, ತೋಟಗಾರಿಕೆ ಅಪರ ನಿರ್ದೇಶಕ (ಹಣ್ಣುಗಳ ವಿಭಾಗ)
ನಿತ್ಯ ಒಂದು ಮಳಿಗೆಯಲ್ಲಿ 300ರಿಂದ 400 ಕೆ.ಜಿ ಮಾವು ಮಾರಾಟವಾಗುತ್ತಿದೆ. ವಾರಾಂತ್ಯಕ್ಕೆ ಒಂದು ಟನ್ ಮಾವು ಬಿಕರಿಯಾಗಿದೆ. 20 ದಿನಗಳಲ್ಲಿ 10 ಟನ್ ಮಾವಿನ ವ್ಯಾಪಾರ ಹಾಗೂ 30ರಿಂದ 35ಲಕ್ಷ ರೂ. ವಹಿವಾಟಿನ ಜತೆಗೆ ಒಟ್ಟಾರೆ ಮೇಳದಲ್ಲಿ 1000 ಟನ್ ಮಾವು ಮಾರಾಟ ನಿರೀಕ್ಷಿಸಲಾಗಿದೆ.
ಸಿ.ಜಿ. ನಾಗರಾಜ್, ಮಾವು ನಿಗಮದ ವ್ಯವಸ್ಥಾಪಕ ನಿರ್ದೇಶಕ
ಆರಂಭದಿಂದಲೂ ಮೇಳದಲ್ಲಿ ಅಂಗಡಿ ಹಾಕುತ್ತಿದ್ದೇನೆ. ನಿಗಮದಿಂದ ಎಲ್ಲ ರೀತಿಯಿಂದಲೂ ಸಹಕಾರ ದೊರೆಯುತ್ತಿದೆ. ದಿನವೊಂದಕ್ಕೆ 400 ಕೆ.ಜಿ ಮಾವು ಮಾರುತ್ತಿದ್ದೇನೆ. ಕಳೆದ ಬಾರಿ ಮೇಳದಿಂದ 4 -5 ಲಕ್ಷ ರೂ ಲಾಭ ಮಾಡಿದ್ದೆ. ಈ ಬಾರಿ ನಿರೀಕ್ಷೆ ಹೆಚ್ಚಿದೆ.
ವೆಂಕಟೇಶ್ ರೆಡ್ಡಿ, ಕೋಲಾರ ಜಿಲ್ಲೆ ರೈತ
ಹಣ್ಣುಗಳ ಪೌಷ್ಟಿಕಾಂಶ ಹಾಗೂ ಮಹತ್ವದ ಬಗ್ಗೆ ಪರಿಚಯಿಸುವ ಹಾಗೂ ರೈತರು ವಿವಿಧ ತಳಿಗಳನ್ನು ಬಳಸಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು ಖುಷಿ ತಂದಿದೆ.
ಎಂ.ಆರ್.ದಿನೇಶ್, ನಿರ್ದೇಶಕರು ಐಐಎಚ್ಆರ್
ದೇಶದ ವಿವಿಧೆಡೆ ಬೆಳೆಯುವ ಪ್ರತಿ ಮಾವಿನ ಹಣ್ಣುಗಳಲ್ಲೂ ಅನುವಂಶೀಯ ಹಾಗೂ ಭೌಗೋಳಿಕ ವಿಭಿನ್ನತೆ ಇರುತ್ತದೆ. ಆ ವಿಭಿನ್ನತೆ ಕಂಡುಹಿಡಿದು ಹೊಸತಳಿ ಸಂಶೋಧಿಸಲಾಗಿದೆ. ಯಶಸ್ವಿಯಾದ ತಳಿಗಳನ್ನು ರೈತರಿಗೆ ನೀಡಿ ಬೆಳೆಯಲು ಪ್ರೋತ್ಸಾಹಿಸಲಾಗುತ್ತದೆ.
ಡಾ.ಬಿ. ನಾರಾಯಣ ಸ್ವಾಮಿ, ಐಐಎಚ್ಆರ್ ವಿಜ್ಞಾನಿ
ಹಾಪ್ಕಾಮ್ಸ್ ಮೇಳಕ್ಕೆ ಎಲ್ಲ ಭಾಗದಲ್ಲೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಜಕ್ತವಾಗುತ್ತಿದೆ. ಈ ಬಾರಿ 1000 ಟನ್ ಮಾರಾಟ ಗುರಿ ಹೊಂದಿದ್ದೇವೆ. ಇನ್ನು ಸೋಮವಾರದಿಂದ ಮಾವಿನದರ ಕಡಿಮೆಯಾಗಲಿದೆ.
ವಿಶ್ವನಾಥ್, ಹಾಪ್ಕಾಮ್ಸ್ ಎಂ.ಡಿ
ಸ್ಪೆಷಲ್ ಏನು ಗೊತ್ತಾ?
ನೈಸರ್ಗಿಕವಾಗಿ ಮಾಗಿದ ಹಣ್ಣುಗಳ ಮಾರಾಟಕ್ಕೆ ಮಾತ್ರ ಮೇಳದಲ್ಲಿ ಅವಕಾಶವಿದ್ದು, ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಮಾವು ಲಭ್ಯ
ಇಲ್ಲಿ 35ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕಿದ್ದು, ವಿಶೇಷ, ಅಪರೂಪದ ತಳಿಗಳನ್ನು ಕೊಳ್ಳಬಹುದು
ಭಾರತೀಯ ತೊಟಗಾರಿಕೆ ಸಂಶೋಧನಾ ಸಂಸ್ಥೆಯು ಅನ್ವೇಷಿಸಿರುವ ಹೊಸ, ವಿಶಿಷ್ಟ ತಳಿಗಳ ಮಾವು, ಹಲಸಿನ ಪ್ರದರ್ಶನ
ಹೊರದೇಶ ಹಾಗೂ ಹೊರರಾಜ್ಯಗಳಿಗೆ ರಫ್ತು ಮಾಡಲು ಕರ್ಸಿರಿ ಎಂಬ ಬ್ರಾಂಡ್ ರೂಪಿಸಿ, ಚಿಹ್ನೆ ವಿನ್ಯಾಸ ಮಾಡಲಾಗಿದೆ
ಕರ್ಸಿಟಿ ಬ್ರಾಂಡ್ ಅಡಿಯಲ್ಲಿ ಜೈವಿಕ ವಿಘಟನಾ ಚೀಲ ಹಾಗೂ ರಟ್ಟಿನ ಬಾಕ್ಸ್ ರೂಪಿಸಿದ್ದು, ಅವುಗಳಲ್ಲೇ ಹಣ್ಣು
ನೀಡಲಾಗುತ್ತದೆ
ಮಾವಿನ ಜತೆಗೆ ಹಲಸಿನನತ್ತ ಗ್ರಾಹಕರನ್ನು ಸೆಳೆ ಯುವ ಉದ್ದೇಶದಿಂದ ಸ್ಥಳದಲ್ಲೇ ಹಣ್ಣು ಬಿಡಿಸಿ ರುಚಿ ನೋಡಲು ಗ್ರಾಹಕರಿಗೆ ನೀಡಲಾಗುತ್ತದೆ
ಹಣ್ಣುಗಳು ಮಾತ್ರವಲ್ಲದೆ ಹಲಸಿನ ಹಣ್ಣು ಬಳಸಿ ಮಾಡಲಾದ ಹಪ್ಪಳ, ಚಿಪ್ಸ್ಗಳನ್ನು ಕೂಡ ಗ್ರಾಹಕರು ಮೇಳದಲ್ಲಿ ಖರೀದಿಸಬಹುದು