ಹೆಸರು ನಾಪತ್ತೆ ಹಿಂದೆ ಕುತಂತ್ರ: ಆರ್.ಅಶೋಕ್
Team Udayavani, Apr 20, 2019, 3:00 AM IST
ಬೆಂಗಳೂರು: ರಾಜಧಾನಿಯ ಪ್ರತಿ ಕ್ಷೇತ್ರದಲ್ಲೂ 50ರಿಂದ 60 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಲಕ್ಷಾಂತರ ಮತದಾರರು ಹಕ್ಕು ಚಲಾವಣೆಯಿಂದ ವಂಚಿತವಾಗಲು ಪಾಲಿಕೆ ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಚಿಂತಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಒಂದೊಂದು ಕ್ಷೇತ್ರದಲ್ಲೂ 50,000ದಿಂದ 60,000 ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮಾ.16ರಂದು ಮತದಾರರ ಪಟ್ಟಿಯಲ್ಲಿದ್ದ ಸಾಕಷ್ಟು ಮಂದಿಯ ಹೆಸರನ್ನು ಮತದಾನದ ಹಿಂದಿನ ದಿನ ತೆಗೆದು ಹಾಕಲಾಗಿದೆ. ಪಟ್ಟಿಯಿಂದ ಮತದಾರರ ಹೆಸರು ಕೈಬಿಡಲು ಅನುಸರಿಸಿರುವ ಮಾನದಂಡ ಹಾಗೂ ಹೆಸರು ನಾಪತ್ತೆಗೆ ಕಾರಣವಾದ ಅಂಶಗಳ ಬಗ್ಗೆ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮತದಾರರೇ ತಮ್ಮ ಹೆಸರು ರದ್ದತಿಗೆ ಪ್ರಸ್ತಾವ ಸಲ್ಲಿಸಿದ್ದರೆ, ಅಥವಾ ಆಯೋಗದಿಂದ ಈ ಸಂಬಂಧ ನೋಟಿಸ್ ನೀಡಲಾಗಿತ್ತೇ ಎಂಬುದನ್ನು ಸ್ಪಷ್ಟಪಡಿಸಬೇಕು. ವಿದ್ಯಾವಂತ ಮತದಾರರು, ನಿರ್ದಿಷ್ಟ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಹೆಸರು ಕೈಬಿಡಲಾಗಿದೆ. ರದ್ದುಪಡಿಸಬಹುದಾದ ಹೆಸರುಗಳನ್ನು ಮೊದಲೇ ತೆಗೆದುಹಾಕಿ ಪರಿಷ್ಕೃತ ಮತದಾರರ ಪಟ್ಟಿ ಮುದ್ರಿಸಿ ನೀಡಬಹುದಿತ್ತು. ಆದರೆ ಹೆಸರಿನ ಮೇಲೆ ಡಿಲೀಟ್ ಎಂದು ಮುದ್ರೆಯೊತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ದೂರಿದರು.
ಹಲವೆಡೆ ಒಂದೊಂದು ಮತಗಟ್ಟೆಯಲ್ಲಿ 50-60 ಮತದಾರರ ಹೆಸರು ನಾಪತ್ತೆಯಾಗಿವೆ. ಅಮೆರಿಕ ಸೇರಿದಂತೆ ವಿದೇಶದಿಂದ ಮತದಾನ ಮಾಡಲೆಂದು ಬಂದಿದ್ದವರು ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲದ ಕಾರಣ ನಿರಾಸೆಯಿಂದ ತೆರಳಿದರು. ಮಣಿಪಾಲದಿಂದ ಮತದಾನ ಮಾಡಲೆಂದು ಪದ್ಮನಾಭನಗರಕ್ಕೆ ಬಂದಿದ್ದ ಯುವ ಮತದಾರರೊಬ್ಬರು ತಮ್ಮ ಹೆಸರು ಕಾಣೆಯಾಗಿರುವ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದಿರುವುದು ಖಂಡನೀಯ. ಸುಮಾರು 2 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ. ಮತದಾರರ ಪಟ್ಟಿಗೆ ಹೆಸರು ನೋಂದಣಿ, ಪರಿಷ್ಕರಣೆಯಲ್ಲಿ ತೊಡಗಿಸಿಕೊಂಡಿದ್ದ ಪಾಲಿಕೆ ಅಧಿಕಾರಿ, ನೌಕರರೇ ಕುತಂತ್ರ ನಡೆಸಿರುವ ಸಾಧ್ಯತೆ ಇದೆ.
ಮತದಾನದಲ್ಲಿ ಪಾಲ್ಗೊಳ್ಳುವಂತೆ ಆಯೋಗ ಜಾಗೃತಿ, ಪ್ರಚಾರಕ್ಕೆ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಆದರೆ ಆಸಕ್ತಿಯಿಂದ ಮತದಾನ ಮಾಡಲು ಬಂದವರ ಹೆಸರೇ ನಾಪತ್ತೆಯಾಗಿರುವುದು ಬೇಸರ ತಂದಿದೆ. ಕೂಡಲೇ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದ ಹಲವರ ಹೆಸರು ಕಾಣೆಯಾಗಿದ್ದು, ಮಾಹಿತಿಯನ್ನು ಕಲೆ ಹಾಕಲಾಗಿದೆ.
ಪತಿ-ಪತ್ನಿ, ಮಕ್ಕಳು, ಮಗ ಸೊಸೆ, ಮಗಳು ಅಳಿಯ ಹೀಗೆ ಒಬ್ಬರ ಹೆಸರಿದ್ದರೆ ಮತ್ತೂಬ್ಬರ ಹೆಸರಿಲ್ಲದಂತಾಗಿದೆ. ಎಲ್ಲ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿದ್ದರೆ ಮತದಾನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಮತದಾರರ ಗುರುತಿನ ಚೀಟಿ ಹೊಂದಿರುವವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಆಯೋಗದಿಂದ ಲೋಪವಾಗಿರುವುದನ್ನು ತೋರಿಸುತ್ತದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್, ಪಾಲಿಕೆ ಮಾಜಿ ಸದಸ್ಯ ಧನರಾಜ್, ಮುಖಂಡ ಬಾಲಾಜಿ ಇತರರು ಉಪಸ್ಥಿತರಿದ್ದರು.
ಮರು ಮತದಾನಕ್ಕೆ ಅವಕಾಶ ನೀಡಲು ಆಗ್ರಹ: ನಗರದ ಮೂರೂ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರಿಗೆ ಮರು ಮತದಾನಕ್ಕೆ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವಿಎಂನಲ್ಲಿ ದೋಷ ಕಂಡು ಬಂದರೆ, ಗಲಾಟೆ ಆದರೆ ಅಥವಾ ಅಭ್ಯರ್ಥಿ ಮೃತರಾದರೆ ಮರು ಮತದಾನಕ್ಕೆ ಅವಕಾಶ ನೀಡುವಂತೆ, ಮತದಾರರ ಪಟ್ಟಿಯಿಂದ ಹೆಸರುಗಳು ನಾಪತ್ತೆಯಾದ ಮತದಾರರಿಗೂ ನಿರ್ದಿಷ್ಟ ದಿನದಂದು ಮತದಾನ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗದ ವಿರುದ್ಧ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಂದು ತಿಂಗಳು ಮೊದಲು ಬಂದ ಮತದಾರರ ಪರಿಷ್ಕೃತ ಪಟ್ಟಿಯಲ್ಲಿ ಇದ್ದ ಹೆಸರುಗಳು ಮತದಾನದ ದಿನ ಪಟ್ಟಿಯಿಂದ ಮಾಯವಾಗಿದ್ದು ಹೇಗೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ಓಟ್ ಮಾಡುತ್ತಾರೆ ಎಂದೇ ಬ್ರಾಹ್ಮಣರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಸಲಾಗಿದೆ.
ಬಸವನಗುಡಿ ವಿಧಾನಸಭಾ ಕ್ಷೇತ್ರ ಒಂದರಲ್ಲೇ 50-60 ಸಾವಿರ ಮತದಾರ ಹೆಸರು ಪಟ್ಟಯಿಂದ ನಾಪತ್ತೆಯಾಗಿವೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಹೆಸರಿದೆ, ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಮೃತಪಟ್ಟವರ ಹೆಸರಿದೆ, ಆದರೆ ಜೀವಂತ ಇರುವವರ ಹೆಸರಿಲ್ಲ. ಈ ಬಗ್ಗೆ ಚುನಾವಣಾ ಆಯೋಗ 2-3 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್