ದತ್ತ ಪೀಠದ ವಿಚಾರ,ಅವಸರದ ಕ್ರಮ ಬೇಡ
Team Udayavani, Jun 12, 2018, 6:20 AM IST
ಬೆಂಗಳೂರು: ಬಾಬಾ ಬುಡನ್ಗಿರಿ-ದತ್ತಪೀಠದ ಉಸ್ತುವಾರಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು
ನಡೆಸಲು ಶಾಖಾದ್ರಿ ನೇಮಕ ಮಾಡಿರುವ ಸರ್ಕಾರದ ಕ್ರಮ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದೆ.
ದತ್ತಪೀಠದ ಉಸ್ತುವಾರಿ ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಶಾಖಾದ್ರಿ ನೇಮಕ ಸೇರಿ ಇನ್ನಿತರೆ ಅಂಶಗಳನ್ನೊಳಗೊಂಡಂತೆ ಕಂದಾಯ ಇಲಾಖೆ (ಮುಜರಾಯಿ ವಿಭಾಗ) ಕಾರ್ಯದರ್ಶಿ ಮಾ. 19ರಂದು ಹೊರಡಿಸಿರುವ ಆದೇಶ ರದ್ದುಕೋರಿ ಗುರುದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ರಿಟ್ ಅರ್ಜಿ ಸಲ್ಲಿಸಿದೆ. ಸೋಮವಾರ ಈ ಅರ್ಜಿ ನ್ಯಾ. ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬಂದಿದ್ದು, ಕಂದಾಯ ಇಲಾಖೆ ಕಾರ್ಯದರ್ಶಿ ಮಾ. 19ರಂದು ಹೊರಡಿಸಿರುವ ಆದೇಶ ಸಂಬಂಧ ಮುಂದಿನ ವಿಚಾರಣೆಯವರೆಗೆ ಯಾವುದೇ ಅವಸರದ ಕ್ರಮಕ್ಕೆ ಮುಂದಾಗದಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂ. 18ಕ್ಕೆ ಮುಂದೂಡಿದೆ.