ಪ್ರಧಾನಿಯನ್ನು ದೇವರಿಗೆ ಹೋಲಿಸಿದ್ದು ಪ್ರಜ್ಞಾವಂತ ಸಂಸದರಿಗೆ ಶೋಭೆಯಲ್ಲ: ಹೆಚ್.ಕೆ ಪಾಟೀಲ್
ಉತ್ತರ ಕರ್ನಾಟಕ ಜನರ ನೆರವಿಗೆ ಬಾರದ ಪ್ರಧಾನಿ ವರ್ತನೆ ಬೇಜಾವಾಬ್ದಾರಿತನದಿಂದ ಕೂಡಿದೆ
Team Udayavani, Oct 2, 2019, 12:37 PM IST
ಬೆಂಗಳೂರು: ಉತ್ತರ ಕರ್ನಾಟಕದ 20 ಲಕ್ಷ ಜನ ಪ್ರವಾಹಕ್ಕೆ ತುತ್ತಾಗಿ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಇಂತಹ ಕಷ್ಟಕರ ಸನ್ನಿವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಜನರ ಕಷ್ಟಕ್ಕೆ ಸ್ಪಂದಿಸದೆ ಬೇಜವಬ್ದಾರಿ ಹೇಳಿಕೆ ಕೊಡುವ ಮೂಲಕ ಪ್ರಧಾನಿ ಮೋದಿಯನ್ನು ಮೆಚ್ಚಿಸುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಾದ ಹೆಚ್.ಕೆ. ಪಾಟೀಲ್ ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನೆರೆಯಿಂದ ನೂರಾರು ಜನ ಸಾವನ್ನಪ್ಪಿದ್ದಾರೆ, ಬೆಳೆ, ಜಾನುವಾರು ಗಳು ನೀರುಪಾಲಾಗಿವೆ. ಪ್ರವಾಹ ಅಪ್ಪಳಿಸಿ ಎರಡು ತಿಂಗಳಾದರು ಪರಿಹಾರ ನೀಡಿಲ್ಲ. ಜನರು ನೆಲೆ ಕಳೆದುಕೊಂಡಿದ್ದಾರೆ. ರೈತ ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇವರ ನೆರವಿಗೆ ಬರದ ಪ್ರಧಾನಿ ವರ್ತನೆ ನಿಜಕ್ಕೂ ಬೇಜಾವಾಬ್ದಾರಿತನದಿಂದ ಕೂಡಿದೆ.
ಸಂಸದ ಪ್ರತಾಪ್ ಸಿಂಹ ಅವರಿಗೆ ಪ್ರಧಾನಿ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಅಂತವರನ್ನು ದೇವರೆಂದು ಕರಿಯಬೇಕಾ ? ರಾಜ್ಯದ ಜನರ ಬಗ್ಗೆ ಅನುಕಂಪ ತೋರಿಸದ ಪ್ರಧಾನಿ ದೇವರಾ ? ಪ್ರಜ್ಞಾವಂತ ಸಂಸದರಾಗಿ ಹೀಗೆ ಹೇಳಿದ್ದು ಸರಿಯಲ್ಲ. ದೇವರು, ದೇವ ಮಾನವ ಅನ್ನೋದನ್ನ ಬಿಡಿ.ಅದು ನಮ್ಮ ದೇಶದಲ್ಲಿ ನಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳನ್ನು ಟೀಕಿಸುವ ಭರದಲ್ಲಿ ಇಂದು ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಪ್ರತಾಪ ಸಿಂಹ, “ಮೋದಿ ದೇವರಿದ್ದಂತೆ, ಅವರನ್ನು ಬೈದರೆ ದೇವರನ್ನೇ ಬೈದಂತೆ. ಅವರು ಆಕಾಶದ ಎತ್ತರದಲ್ಲಿದ್ದಾರೆ ಅವರನ್ನು ಉಗಿದರೆ ಅದು ನಿಮ್ಮ ಮೇಲೆಯೇ ಬೀಳುತ್ತದೆ” ಎಂಬ ಹೇಳಿಕೆ ನೀಡಿದ್ದರು.