ಪತ್ನಿ ಪ್ರಿಯಕರನ ಕೊಲೆಗೆ ಸುಪಾರಿ ಕೊಟ್ಟವ ಸೆರೆ
Team Udayavani, Jul 29, 2018, 12:02 PM IST
ಬೆಂಗಳೂರು: ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಬೀಡಾ ಅಂಗಡಿ ಮಾಲೀಕನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಫೈನಾನ್ಸಿಯರ್ ಸೇರಿ ನಾಲ್ವರು ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆನೇಕಲ್ನ ಮಣಿ (30), ಜೆ.ಪಿ.ನಗರದ ರೂಪೇಶ್ (33), ಸೆಲ್ವರಾಜ್ (33) ಹಾಗೂ ಕೊಲೆಗೆ ಸುಪಾರಿ ಕೊಟ್ಟಿದ್ದ ಸಿದ್ದಾಪುರ ಗುಟ್ಟೆಪಾಳ್ಯ ನಿವಾಸಿ, ಫೈನಾನ್ಸಿಯರ್ ಲಕ್ಷ್ಮಣ್ (38) ಬಂಧಿತ ಆರೋಪಿಗಳು. ಅರಕೆರೆ ಬಳಿಯ ಬೀಡಾ ಅಂಗಡಿ ಮಾಲೀಕ ಶಿವಕುಮಾರ್ನನ್ನು ಹತ್ಯೆಗೈಯಲು ಆರೋಪಿಗಳು ಜು.25ರಂದು ಪೆದ್ದಣ್ಣ ಎಂಬ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆನೇಕಲ್ ಮೂಲದ ಕ್ಯಾಬ್ ಚಾಲ ಪೆದ್ದಣ್ಣ ವೈಟ್ಫೀಲ್ಡ್ನ ಐಟಿ ಕಂಪನಿಗಳ ನೌಕರರನ್ನು ಪಿಕ್ ಆ್ಯಂಡ್ ಡ್ರಾಪ್ ಮಾಡುತ್ತಿದ್ದರು. ಜು.25ರಂದು ರಾತ್ರಿ 11ಗಂಟೆಗೆ ಕಂಪನಿ ಕೆಲಸಗಾರರನ್ನು ಮೈಕೋಲೇಔಟ್ ಕಡೆ ಬಿಟ್ಟು, ಮನೆಗೆ ಹಿಂದಿರುಗುತ್ತಿದ್ದರು.
ಈ ವೇಳೆ ಹೊಮ್ಮದೇವನಹಳ್ಳಿ ಗ್ರಾಮದ ಸಿ.ಕೆ. ಪಾಳ್ಯ ರಸ್ತೆಯ ತಿರುವಿನಲ್ಲಿ ಪೊದೆಯಲ್ಲಿ ಅವಿತುಕುಳಿತಿದ್ದ ಮೂವರು ಆರೋಪಿಗಳು ಏಕಾಏಕಿ ಕಾರನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಕಾರು ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೆದ್ದಣ್ಣ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಕಾರು ನಂಬರ್ ಆಧಾರಿಸಿ ಜು.26ರಂದು ತಲಘಟ್ಟಪುರ ನೈಸ್ರಸ್ತೆ ಬಳಿ ಅನುಮಾನಾಸ್ಪದವಾಗಿ ಕಾರಿನಲ್ಲಿ ತಿರುಗಾಡುತ್ತಿದ್ದ ಮೂವರನ್ನು ವಿಶೇಷ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟ ವಿಚಾರ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3 ಲಕ್ಷಕ್ಕೆ ಸುಪಾರಿ: ಫೈನಾನ್ಸಿಯರ್ ಲಕ್ಷ್ಮಣ್ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನ ಪತ್ನಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ಈಕೆ ಅರಕೇರೆ ಬೀಡಾ ಅಂಗಡಿ ಮಾಲೀಕ ಶಿವಕುಮಾರ್ ಜತೆ ಅನೈತಿಕ ಸಂಬಂಧ ಹೊಂದಿದ್ದರು.
ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದ್ದು, ಪತಿಯನ್ನು ತೊರೆದ ಪತ್ನಿ ಶಿವಕುಮಾರ್ ಜತೆ ವಾಸವಾಗಿದ್ದರು ಎಂದು ಹೇಳಲಾಗಿದೆ. ಕಳೆದ ತಿಂಗಳು ಲಕ್ಷ್ಮಣ್ ಬನ್ನೇರುಘಟ್ಟದಲ್ಲಿರುವ ತನ್ನ ಸಂಬಂಧಿಕರ ಖಾಲಿ ನಿವೇಶನಕ್ಕೆ ಹೋಗಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ, ಅಪರಾಧ ಹಿನ್ನೆಲೆಯುಳ್ಳ ಆರೋಪಿ ಮಣಿ ಪರಿಚಯವಾಗಿದೆ.
ಈತನನ್ನು ಪರಿಚಯಿಸಿಕೊಂಡ ಲಕ್ಷ್ಮಣ್ ಈತನ ಮೊಬೈಲ್ ನಂಬರ್ ಪಡೆದು, ಬನ್ನೇರುಘಟ್ಟದ ಬಾರ್ವೊಂದಕ್ಕೆ ಕರೆಸಿಕೊಂಡು ಶಿವಕುಮಾರ್ನನ್ನು ಕೊಲೆಗೈಯಲು 3 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದು, ಮುಂಗಡವಾಗಿ 7 ಸಾವಿರ ರೂ. ಹಣ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುಪಾರಿ ಪಡೆದ ಮಣಿ ತನ್ನ ಸಹಚರರಾದ ರೂಪೇಶ್ ಮತ್ತು ಸೆಲ್ವರಾಜ್ ಜತೆ ಸೇರಿ ಕಳವು ಮಾಡಿದ ಕಾರಿನಲ್ಲಿ ಶಿವಕುಮಾರ್ನನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಕೊಲ್ಲಲು ಸಂಚು ರೂಪಿಸಿದ್ದರು.
ಅದರಂತೆ ಪೆದ್ದಣ್ಣ ನ ಕಾರು ಕಳವು ಮಾಡಿ ರಾತ್ರಿ 11.30ರಲ್ಲಿ ಬೀಡ ಅಂಗಡಿ ಮುಚ್ಚಿ ಮನೆಗೆ ನಡೆದುಕೊಂಡು ಹೋಗುವಾಗ ಶಿವಕುಮಾರ್ನನ್ನು ಅಪಹರಿಸಿದ್ದರು. ಆತನ ಮೇಲೆ ಹಲ್ಲೆ ನಡೆಸಿ ಕೊಲೆಗೈಯಲು ಯತ್ನಿಸಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಶಿವಕುಮಾರ್ನನ್ನು ರಕ್ಷಣೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ