ತ್ಯಾಜ್ಯ ಸಮಸ್ಯೆ ಪರಿಹಾರ ಕ್ರಮಕುರಿತು ವರದಿ ಕೇಳಿದ ಆಯುಕ್ತ
Team Udayavani, Nov 27, 2017, 12:11 PM IST
ಬೆಂಗಳೂರು: ನಗರದ ತ್ಯಾಜ್ಯ ಸಮಸ್ಯೆಗೆ ವಾರ್ಡ್ ಮಟ್ಟದಲ್ಲಿಯೇ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಿ ಶೀಘ್ರ ವರದಿ ನೀಡುವಂತೆ ಎಲ್ಲ ವಾರ್ಡ್ ಸಮಿತಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಸೂಚಿಸಿದ್ದಾರೆ.
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ವಾರ್ಡ್ ಸಮಿತಿಗಳೊಂದಿಗೆ ಚರ್ಚಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದ್ದು, ಸಮಿತಿಗಳಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ತ್ಯಾಜ್ಯ ಸಮಸ್ಯೆ ನಿವಾರಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಪಾಲಿಕೆ ಅಧಿಕಾರಿಗಳು ಡಿ.8ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಪಾಲಿಕೆಯ ಎಲ್ಲ ವಾರ್ಡ್ ಸಮಿತಿಗಳಿಗೆ ವಾರ್ಡ್ ಮಟ್ಟದಲ್ಲಿ ಸಂಪೂರ್ಣ ವಿಲೇವಾರಿ, ಸಂಸ್ಕರಣೆ ಕ್ರಮಗಳ ಕುರಿತ ವರದಿಯನ್ನು ನ.30ರೊಳಗೆ ಪಾಲಿಕೆಗೆ ಸಲ್ಲಿಸುವಂತೆ ಸಮಿತಿಗಳಿಗೆ ಸೂಚಿಸಿದ್ದಾರೆ.
ಪುಸ್ತಕಗಳ ಪೂರೈಕೆ: ಈ ನಡುವೆ ಬಿಬಿಎಂಪಿ ವತಿಯಿಂದ ಈವರೆಗೆ ಘನತ್ಯಾಜ್ಯ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಪಾಲಿಕೆಯಿಂದ ಹೊರಡಿಸಿರುವ ಸುತ್ತೋಲೆಗಳ ಮಾಹಿತಿಯುಳ್ಳ ಪುಸ್ತಕವನ್ನು ಸಿದ್ಧಪಡಿಸಲಾಗುತ್ತಿದೆ. ಪುಸ್ತಕದಲ್ಲಿ ನಗರದಲ್ಲಿ ಎಷ್ಟು ತ್ಯಾಜ್ಯ ಸಂಸ್ಕರಣೆ ಘಟಕಗಳಿವೆ, ಎಷ್ಟು ಕ್ವಾರಿಗಳಿವೆ, ಎಲ್ಲೆಲ್ಲಿ ಲ್ಯಾಂಡ್ಫಿಲ್ ಮಾಡಲಾಗಿದೆ. ಅದನ್ನು ಆಧರಿಸಿ ವಾರ್ಡ್ ಸಮಿತಿಗಳು ವಾರ್ಡ್ನಲ್ಲಿ ಏನು ಕ್ರಮಕೈಗೊಳ್ಳಬೇಕು ಎಂಬ
ನಿರ್ಧಾರ ಕೈಗೊಳ್ಳಲಿವೆ.
ಜಾಗದ ಕೊರತೆ: ಆಯಾ ವಾರ್ಡ್ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಅಲ್ಲೇ ಸಂಸ್ಕರಿಸಲು 198 ವಾರ್ಡ್ಗಳಲ್ಲಿ 10 – 15 ಟನ್ ಸಾಮರ್ಥಯದ ಸಂಸ್ಕರಣೆ ಘಟಕ ನಿರ್ಮಿಸಲು ಪಾಲಿಕೆಯ ಅಧಿಕಾರಿಗಳು ಉದ್ದೇಶಿಸಿದ್ದರು. ಆದರೆ, ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ ವಾರ್ಡ್ಗಳು ಹೊರತುಪಡಿಸಿ, ಉಳಿದ ಯಾವುದೇ ವಾರ್ಡ್ಗಳಲ್ಲಿ ಘಟಕ ನಿರ್ಮಾಣಕ್ಕೆ ಜಾಗ ದೊರೆಯುತ್ತಿಲ್ಲ.