ಪಡಿತರಕ್ಕೆ ಬೆರಳಚ್ಚು ಕಡ್ಡಾಯವಲ್ಲ : ಮೇ ತಿಂಗಳಿಗೆ ಮಾತ್ರ ಅನ್ವಯ
Team Udayavani, May 12, 2021, 10:15 PM IST
ಬೆಂಗಳೂರು : ಕೋವಿಡ್ ಎರಡನೇ ಅಲೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಮೇ ತಿಂಗಳ ಪಡಿತರವನ್ನು ಬೆರಳಚ್ಚು ಪಡೆಯದೆ ವಿತರಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಆದೇಶ ಹೊರಡಿಸಿದೆ.
ಮೇ ತಿಂಗಳಲ್ಲಿ ಪಡಿತರ ವಿತರಣೆಗೆ ಸಂಬಂಧಪಟ್ಟಂತೆ ಕೆಲವು ಪರ್ಯಾಯ ಅವಕಾಶಗಳನ್ನು ನೀಡಲಾಗಿದೆ. ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಪಡೆದ ಒಟಿಪಿ ನೀಡಿ ಪಡಿತರ ಪಡೆಯಬಹುದು. ವಯೋವೃದ್ಧರು, ಅನಾರೋಗ್ಯಪೀಡಿತರು, ವಿಕಲಚೇತನರಿಗೆ ವಿನಾಯಿತಿ ಸೌಲಭ್ಯದಡಿ ಪಡಿತರ ವಿತರಿಸಲಾಗುತ್ತದೆ. ಪಡಿತರ ಚೀಟಿದಾರರ ಪರಿಶೀಲನ ಪಟ್ಟಿ, ಕೈ ಬರಹದ ಬಿಲ್ ಮೂಲಕವೂ ನೇರವಾಗಿ ವಿತರಿಸಲಾಗುತ್ತದೆ. ಪಡಿತರ ಪಡೆಯಲು ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿಗೆ ಪೋರ್ಟೆಬಿಲಿಟಿ ಸೌಲಭ್ಯದ ಮೂಲಕ ಪಡಿತರ ವಿತರಿಸಲಾಗುತ್ತದೆ ಎಂದು ಇಲಾಖೆ ಆಯುಕ್ತರಾದ ಡಾ| ಶಮ್ಲಾ ಇಕ್ಬಾಲ್ ತಿಳಿಸಿದ್ದಾರೆ.
ಇದನ್ನೂ ಓದಿ :ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಅಧಿಕಾರಿಗಳ ಮೇಲ್ವಿಚಾರಣೆ
ಕೋವಿಡ್ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರವನ್ನು ಚೆಕ್ಲಿಸ್ಟ್ ಅಥವಾ ಯಾವುದಾದರೂ ಮೊಬೈಲ್ಗೆ ಒಟಿಪಿ ರವಾನೆ ಮೂಲಕ ವಿತರಣೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಪಡಿತರ ವಿತರಕರ ಸಂಘ ಕೋರಿತ್ತು. ಅದರಂತೆ ಚೆಕ್ಲಿಸ್ಟ್ ಸೌಲಭ್ಯ ಸಹಿತ ಪಡಿತರ ವಿತರಣೆಗೆ ಅನುಕೂಲವಾಗುವ ಎಲ್ಲ ರೀತಿಯ ಅವಕಾಶಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ಕಲ್ಪಿಸಿಕೊಡಲಾಗಿದೆ.