ರೈಲ್ವೆ ಸೇತುವೆ ಕೆಳಗೆ ಶೌಚ ನೀರಿನ ಪ್ರೋಕ್ಷಣೆ!
ವಿಂಡ್ಸರ್ ಮ್ಯಾನರ್ ಬಳಿ ಬಿಗಡಾಯಿಸಿದ ಪರಿಸ್ಥಿತಿ | ಹಳಿ ಕೆಳಗೆ ಶೀಟ್ ಅಳವಡಿಸದ ರೈಲ್ವೆ ಇಲಾಖೆ
Team Udayavani, Jun 21, 2019, 7:54 AM IST
ವಿಂಡ್ಸರ್ ಮ್ಯಾನರ್ ಬಳಿಯ ರೈಲ್ವೆ ಸೇತುವೆ ಕೆಳಗೆ ಅಳವಡಿಸಿದ್ದ ಶೀಟ್ಗಳು ಕಿತ್ತು ಹೋಗಿವೆ.
ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸದಿಂದ ಅನತಿ ದೂರದಲ್ಲೇ ಇರುವ ವಿಂಡ್ಸರ್ ಮ್ಯಾನರ್, ಶೇಷಾದ್ರಿಪುರಂ ರೈಲ್ವೆ ಸೇತುವೆ ಕೆಳಗೆ ಹಾದು ಹೋಗುವ ಮುನ್ನ ವಾಹನ ಸವಾರರೇ ಕೊಂಚ ನಿಲ್ಲಿ. ಏಕೆಂದರೆ ಸೋರುತಿಹುದು ರೈಲ್ವೆ ಸೇತುವೆಯ ಮಾಳಿಗೆ!
ಬೆಂಗಳೂರಿನ ವಿವಿಧೆಡೆ ಇರುವ ರೈಲ್ವೆ ಸೇತುವೆಗಳ ಮೇಲೆ ರೈಲು ಹೋಗುವಾಗ ಕೆಳಗಡೆ ಪ್ರಯಾಣಿಸುವ ವಾಹನಸವಾರರಿಗೆ ಇನ್ನಿಲ್ಲದ ಕಿರಿಕಿರಿ, ತೊಂದರೆ ಆಗುತ್ತಿದೆ. ಮೆಜೆಸ್ಟಿಕ್, ಮಲ್ಲೇಶ್ವರ, ಓಕಳೀಪುರ, ವಿಂಡ್ಸರ್ ಮ್ಯಾನರ್, ಯಶವಂತಪುರ, ಕೆ.ಆರ್.ಪುರ ಸೇರಿ ನಗರದ ಬಹುತೇಕ ರೈಲ್ವೆ ಕೆಳಸೇತುವೆಗಳಲ್ಲಿ ಈ ಸ್ಥಿತಿ ಇದೆ.
ರೈಲು ಹೋಗುವವರೆಗೆ ನಿಂತು, ಬಳಿಕ ಹೋಗೋಣ ಎಂದರೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಆತಂಕ. ಧೈರ್ಯ ಮಾಡಿ ಮುಂದೆ ಹೋದರೆ ಶೌಚದ ನೀರು, ತ್ಯಾಜ್ಯ ಮೈಮೇಲೆ ಪ್ರೋಕ್ಷಣೆಯಾಗುತ್ತದೆ. ಇಂತಹದ್ದೊಂದು ಉಭಯ ಸಂಕಟವನ್ನು ದಿನನಿತ್ಯ ಸಾವಿರಾರು ವಾಹನ ಸವಾರರು ಅನುಭವಿಸುತ್ತಿದ್ದಾರೆ.
ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ವಿಂಡ್ಸರ್ ಮ್ಯಾನರ್ ಸೇತುವೆ ಬಳಿಯಂತೂ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರೈಲ್ವೇ ಇಲಾಖೆ ಹಳಿಗಳ ಅಡಿಗೆ ಅಳವಡಿಸಿದ್ದ ಕಬ್ಬಿಣದ ಶೀಟುಗಳು ಕಿತ್ತುಹೋಗಿವೆ. ಹೊಸ ಶೀಟು ಅಳವಡಿಸಲು ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಸಮಸ್ಯೆ ಮುಂದುವರಿದಿದೆ.
ಒಂದೆಡೆ ನಿಧಾನವಾಗಿ ಚಲಿಸುವ ರೈಲು, ಮತ್ತೂಂದೆಡೆ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪುವ ಧಾವಂತದಲ್ಲಿ ಐದು ನಿಮಿಷ ಕಾಯುವ ಬದಲಿಗೆ ತೆರಳಿದ ವಾಹನಸವಾರರ ಬಟ್ಟೆಗಳ ಮೇಲೆ ಶೌಚಾಲಯದ ತ್ಯಾಜ್ಯ ಬಿದ್ದು, ಮನೆಗೆ ವಾಪಸ್ ಹೋದವರೂ ಇದ್ದಾರೆ.
ರೈಲುಗಳಿಂದ ಸುರಿಯುವ ಶೌಚಾಲಯ ತ್ಯಾಜ್ಯ ನೀರಿನಿಂದ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ವಿವರಿಸಿದ ಖಾಸಗಿ ಕಂಪನಿ ಉದ್ಯೋಗಿ ರಾಜೇಂದ್ರ, ಮೂರು ವರ್ಷಗಳಿಂದ ಈ ಮಾರ್ಗದಲ್ಲಿ ಬೈಕ್ನಲ್ಲಿ ಓಡಾಡುತ್ತಿದ್ದೇನೆ. ರೈಲ್ವೆ ಸೇತುವೆಯ ಕೆಳಗೆ ಸಾಗುವ ಗೋಳು ಮುಗಿಯದ ಕಥೆ. ಶೀಟ್ ಅಳವಡಿಸುವ ರೈಲ್ವೆ ಇಲಾಖೆ, ಅವು ಕಿತ್ತುಹೋದ ಬಳಿಕ ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಶ್ವತ ಪರಿಹಾರಕ್ಕೆ ಹಿಂದೇಟು:
ಚಲಿಸುತ್ತಿರುವ ರೈಲಿನಿಂದ ಶೌಚಾಲಯದ ನೀರು, ತ್ಯಾಜ್ಯ ಕೆಳಗಡೆ ಬೀಳದಂತೆ ತಡೆಯಲು ರೈಲ್ವೆ ಇಲಾಖೆ ಇಂದಿಗೂ ಹಳಿಗಳ ಕೆಳಗೆ ಶೀಟುಗಳನ್ನು ಅಳವಡಿಸುವ ಪದ್ಧತಿಯನ್ನೇ ಮುಂದುವರಿಸಿದೆ. ಆದರೆ, ಪ್ರತಿದಿನ ನೀರು ಬೀಳುವುದು ಹಾಗೂ ಮಳೆಯಿಂದ ನೆನೆಯುವುದರಿಂದ ಶೀಟುಗಳು ಬಹುಬೇಗ ತುಕ್ಕು ಹಿಡಿಯುತ್ತವೆ. ಮೂರರಿಂದ ನಾಲ್ಕು ತಿಂಗಳು ಬಾಳಿಕೆ ಬಂದರೆ ಹೆಚ್ಚೆಚ್ಚು. ಇವುಗಳು ಕಿತ್ತುಹೋದ ಬಳಿಕ ಪುನಃ ಶೀಟು ಅಳವಡಿಸಲು ಹಲವು ತಿಂಗಳುಗಳೇ ಕಳೆಯುತ್ತದೆ. ಅಲ್ಲಿವರೆಗೂ ಸಾರ್ವಜನಿಕರು ಸಹಿಸಕೊಳ್ಳುವ ಪರಿಸ್ಥಿತಿಯಿದೆ.
ಶಾಶ್ವತ ಪರಿಹಾರದ ಬಗ್ಗೆ ‘ಉದಯವಾಣಿ’ ಜತೆ ಮಾತನಾಡಿದ ರೈಲ್ವೆ ಇಲಾಖೆ ಹಿರಿಯ ಅಧಿಕಾರಿ, ರೈಲುಗಳಲ್ಲಿ ಬಯೋಟಾಯ್ಲೆಟ್ ನಿರ್ಮಾಣ ಒಂದು ಪರಿಹಾರ ಮಾರ್ಗವಷ್ಟೇ. ಆದರೆ, ನೀರು ಬೀಳುತ್ತಲೇ ಇರುತ್ತದೆ. ಹೀಗಾಗಿ, ಸೇತುವೆಗಳ ಕೆಳಗೆ ಸಿಮೆಂಟ್ ಸ್ಲಾಬ್ ಅಳವಡಿಸಿದರೆ ಪರಿಹಾರ ಸಿಗಲಿದೆ. ಇದಕ್ಕೆ ಎಂಜಿಯರಿಂಗ್ ವಿಭಾಗದ ಅಧಿಕಾರಿಗಳು ಯೋಜನೆ ರೂಪಿಸುತ್ತಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ