ಮತ ಜಾಗೃತಿಗೆ ವೀಡಿಯೋ ಸ್ಪರ್ಧೆ
Team Udayavani, Mar 29, 2019, 11:49 AM IST
ಬೆಂಗಳೂರು: ಒಂದೆಡೆ ಮತದಾನಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೇ ಮತ್ತೂಂದೆಡೆ ಈ ಬಗ್ಗೆ “ಯುವ ಮತದಾರ’ರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ವಿನೂತನ ಪ್ರಯೋಗಗಳು ನಡೆಯುತ್ತಿವೆ.
ಜೈನ್ ಮಹಾವಿದ್ಯಾಲಯದಲ್ಲಿ ಮತದಾನ ಜಾಗೃತಿಗಾಗಿ ವೀಡಿಯೊ ಸ್ಪರ್ಧೆ ಏರ್ಪಡಿಸಿದ್ದರೆ, ಕೆಎಲ್ಇ ಮಹಾವಿದ್ಯಾಲಯವು ಶುಕ್ರವಾರದಿಂದ ಮೂರು ದಿನಗಳ ಕಾಲ ಅಣಕು ನ್ಯಾಯಾಲಯ ಪ್ರದರ್ಶನ ಹಮ್ಮಿಕೊಂಡಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿ-ಪ್ಯಾಕ್, ಪದವಿ ಶಿಕ್ಷಣ ಹಂತದಲ್ಲೇ ಕಡ್ಡಾಯವಾಗಿ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಲು ಉದ್ದೇಶಿಸಿದೆ.
ವಿವಿ ಪುರದ ಜೈನ್ ಕಾಲೇಜಿನ ಎನ್ಎಸ್ಎಸ್ ತಂಡ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಅಂತರ ಕಾಲೇಜು ವೀಡಿಯೊ ಸ್ಪರ್ಧೆ ಆಯೋಜಿಸಿದೆ. ಇದರಲ್ಲಿ ಬೆಂಗಳೂರಿನ 25 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಉತ್ತಮ ವಿಡಿಯೊಗಳನ್ನು ಏ.3 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಾಸಾರ ಮಾಡಲಾಗುವುದು. ಕಾರ್ಯಕ್ರಮದಲ್ಲಿ ವಿಷಯತಜ್ಞರು ಮತದಾನದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಮತದಾನ ಜಾಗೃತಿ ಕುರಿತು ಎರಡು ನಿಮಿಷಗಳ ವೀಡಿಯೊ ಮಾಡಿ [email protected] ಇಲ್ಲಿಗೆ ಇ-ಮೇಲ್ ಮಾಡಲು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ವೀಡಿಯೊ ಮತದಾನ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವಂತಿರಬೇಕು. ಯಾವುದೇ ರಾಜಕೀಯ ಪಕ್ಷದ ಪ್ರಚಾರದ ವಸ್ತುವಾಗಿರಬಾರದು, ಪ್ರಚೋದನಕಾರಿ ಆಗಿರಬಾರದು.
ಏ. 3ರ ವರೆಗೆ ವೀಡಿಯೊ ಕಳುಹಿಸುವುದಕ್ಕೆ ಅವಕಾಶವಿದೆ. ಉತ್ತಮ ವೀಡಿಯೊ ಕಳುಹಿಸಿದವರಿಗೆ ಏ. 5ರಂದು ಜೈನ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಟ್ರೋಫಿ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಜೈನ್ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಸಿ. ಪರಮೇಶ್ ಮಾಹಿತಿ ನೀಡಿದರು.
“ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು. ಅದಕ್ಕೆ ಯುವಕರ ಸೃಜನಶೀಲತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷಗಳ ಪರ ಅಥವಾ ವಿರೋಧ ಇರುವುದಿಲ್ಲ’ ಎನ್ನುತ್ತಾರೆ
ಪದವಿ ಹಂತದಲ್ಲೇ ನೋಂದಣಿ ಕಡ್ಡಾಯ – ಒತ್ತಾಯ: ಅದೇ ರೀತಿ, ಬಿ-ಪ್ಯಾಕ್ ಪದವಿ ಶಿಕ್ಷಣದ ಹಂತದಲ್ಲೇ ಎಲ್ಲ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಆಯಾ ಕಾಲೇಜುಗಳಿಗೆ ಸೂಚಿಸಬೇಕು.
ಇದರಿಂದ ಮತದಾರರ ಸಂಖ್ಯೆ ಹೆಚ್ಚುವುದರ ಜತೆಗೆ ಜಾಗೃತಿ ಮೂಡಲಿದೆ. ಈ ಸಂಬಂಧ ವಾರದಲ್ಲಿ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಉದ್ದೇಶಿಸಿದ್ದು, ಸುಮಾರು 30 ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಇದಕ್ಕೆ ಆಹ್ವಾನಿಸಲಾಗಿದೆ. ಅಂದಹಾಗೆ ಪ್ರಸ್ತುತ ವಿವಿಧ ಪಕ್ಷಗಳು ಆಯಾ ಪ್ರದೇಶದಲ್ಲಿ ಕಾರ್ಯಕರ್ತರ ಮೂಲಕ ನೋಂದಣಿ ಮಾಡಿಸುತ್ತಿವೆ.
ಅಣಕು ನ್ಯಾಯಾಲಯ ಸ್ಪರ್ಧೆ: ಈ ಮಧ್ಯೆ ಕೆಎಲ್ಇ ಕಾನೂನು ಮಹಾವಿದ್ಯಾಲಯವು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಣುಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ “ಒಂದು ರಾಷ್ಟ್ರ ಒಂದು ಚುನಾವಣೆ’, ಚುನಾವಣಾ ಸಮಯದಲ್ಲಿ ಪಕ್ಷಾಂತರ ಸೇರಿದಂತೆ ಹಲವು ವಿಷಯಗಳ ಕುರಿತು ವಾದಗಳು ಮಂಡನೆ ಆಗಲಿವೆ.
ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಏಕರೂಪದ ಹಾಗೂ ಒಂದೇ ಸಮಯದಲ್ಲಿ ಚುನಾವಣೆ ನಡೆಸಿ ದೇಶದ ಬೊಕ್ಕಸಕ್ಕೆ ಹೊರೆಯಾಗದಂತೆ ನೋಡಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಒಂದು ಬಾರಿ ರಾಜ್ಯ ಶಾಸಕಾಂಗಗಳ ಚುನಾಯಿತ ಅವಧಿಯನ್ನು ಮೊಟುಕುಗೊಳಿಸಿದರೆ ಅಥವಾ ವಿಸ್ತರಿಸಿದರೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವೇ? ಇದರ ಸಾಧಕ ಬಾಧಕಗಳು ಏನು? ಎಂಬುದರ ಕುರಿತು ಸ್ಪರ್ಧಾಳುಗಳು ವಿಚಾರ ಮಂಡಿಸಲಿದ್ದಾರೆ.
ಕರ್ನಾಟಕದಿಂದ 12 ತಂಡಗಳು ಹಾಗೂ 18 ವಿವಿಧ ರಾಜ್ಯಗಳಿಂದ 50 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ವಿಜೇತರಿಗೆ ಪ್ರಥಮ ಬಹುಮಾನ 25 ಸಾವಿರ ನಗದು ಹಾಗೂ ದ್ವಿತೀಯ ಬಹುಮಾನ 15 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಜೆ.ಎಂ. ಮಲ್ಲಿಕಾರ್ಜುನಯ್ಯ ಮಾಹಿತಿ ನೀಡಿದ್ದರೆ.
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ