ನಗರದ ವಿವಿಧೆಡೆ ಕಾರ್ಮಿಕರ ದಿನಾಚರಣೆ
Team Udayavani, May 2, 2019, 3:02 AM IST
ಬೆಂಗಳೂರು: ಹಕ್ಕುಗಳಿಗಾಗಿ ಒಗ್ಗಟ್ಟಿನ ಮಂತ್ರ, ದಮನಕಾರಿ ನೀತಿಗಳ ವಿರುದ್ಧ ಆಕ್ರೋಶ, ಸಂಸ್ಥೆಗಾಗಿ ಶ್ರಮಿಸಿದ ಜೀವಗಳಿಗೆ ಪ್ರಶಂಸೆ, ಅಲ್ಲಲ್ಲಿ ರಾರಾಜಿಸಿದ ಕೆಂಪು ಬಾವುಟಗಳು, ಬಿಬಿಎಂಪಿ ಇತಿಹಾಸದಲ್ಲಿ ಮೊದಲ ಬಾರಿಗೆ ಪೌರಕಾರ್ಮಿಕರಿಗೆ ಸಿಕ್ಕಿತು ಕಾರ್ಮಿಕ ದಿನಾಚರಣೆಯ ರಜೆ.
ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಕಂಡುಬಂದ ದೃಶ್ಯಗಳಿವು. ಹಲವಾರು ಸಂಘಟನೆ, ಒಕ್ಕೂಟಗಳಡಿ ಸಹಸ್ರ ಸಂಖ್ಯೆಯಲ್ಲಿ ಕಾರ್ಮಿಕರು ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಿದರು.
“ಮೇ ಡೇ’ ಸಂಭ್ರಮಾಚರಣೆ ಜತೆಗೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿರುವ ಕಾರ್ಮಿಕ ಚಳವಳಿಗಳು, ಹಕ್ಕುಗಳ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಹೋರಾಟಗಳ ಬಗ್ಗೆ ಚಿಂತನ-ಮಂಥನ ನಡೆಯಿತು. ನಗರದಾದ್ಯಂತ ವಿವಿಧ ಸಂಘಟನೆಗಳಡಿ ನಡೆದ ಕಾರ್ಮಿಕ ದಿನಾಚರಣೆ ವಿವರ ಹೀಗಿದೆ.
ಬಂಡವಾಳಶಾಹಿ ಕಪಿಮುಷ್ಠಿ: ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕಿರುವ ಕೇಂದ್ರ ಸರ್ಕಾರ, ದೇಶದ ಕಾರ್ಮಿಕರು ಹಾಗೂ ದುಡಿಯುವ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ರೂಪಿಸಿರುವ ದಮನಕಾರಿ ನೀತಿಗಳನ್ನು ರೂಪಿಸಿದೆ ಎಂದು ಸಿಐಟಿಯು ಮುಖಂಡ ಗೋಪಾಲ ಆರೋಪಿಸಿದರು.
“ಮೇ ದಿನಾಚರಣೆ’ ಪ್ರಯುಕ್ತ ಸಂಘಟನೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಕಾರ್ಮಿಕರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳು ಆಡಳಿತ ನಡೆಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.ಜತೆಗೆ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ದೇಶದಲ್ಲಿ ಬಂಡವಾಳಶಾಹಿಗಳು ಅಭಿವೃದ್ಧಿಯಾಗುತ್ತಿದ್ದು, ದುಡಿಯುವ ವರ್ಗ ಹಿಂದುಳಿಯಲು ಆಳುವ ವರ್ಗಗಳ ದ್ವಿಮುಖ ನೀತಿಯೇ ಕಾರಣ ಎಂದು ಆರೋಪಿಸಿದರು. ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನಕ್ಕೆ ಆಗ್ರಹಿಸಿ ದಶಕಗಳಿಂದ ಹೋರಾಟ ಮಾಡಲಾಗುತ್ತಿದ್ದರೂ ಆಳುವ ವರ್ಗಗಳು ನ್ಯಾಯ ದೊರಕಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಸಭೆಗೂ ಮುನ್ನ ಪುರಭವನದಿಂದ ಆವರಣದಿಂದ ಸ್ವಾತಂತ್ರವ್ಯ ಉದ್ಯಾನದವರೆಗೂ ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ನೂರಾರು ಕಾರ್ಮಿಕರು ಸಿಐಟಿಯು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಿಎಂಟಿಸಿಯಿಂದ ನಗದು ಪುರಸ್ಕಾರ: ಸಂಸ್ಥೆಯ ಎಲ್ಲ 45 ಘಟಕಗಳಲ್ಲಿ ನೌಕರರಿಂದ ಕಾರ್ಮಿಕ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿ ಘಟಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತಲಾ ಐವರು ಚಾಲಕರು, ಮೂವರು ನಿರ್ವಾಹಕರು ಹಾಗೂ ಇಬ್ಬರು ಮೆಕಾನಿಕ್ಗಳಿಗೆ ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಆಯಾ ವಿಭಾಗ ಮತ್ತು ಘಟಕಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಪೌರಕಾರ್ಮಿಕರಿಗೆ ರಜಾ-ಮಜಾ: ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಸುಮಾರು 17 ಸಾವಿರ ಪೌರಕಾರ್ಮಿಕರಿಗೂ ವೇತನ ಸಹಿತ ರಜೆ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರೆಲ್ಲಾ ನಗರದ ವಿವಿಧೆಡೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಗಳು, ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ಈ ಮೊದಲು ಅವರಿಗೆಲ್ಲಾ ಕಾರ್ಮಿಕ ದಿನದ ರಜೆಯನ್ನು ಮತ್ತೂಂದು ದಿನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!
CCB Raid: ಲೋಕ ಚುನಾವಣೆ ಹಿನ್ನೆಲೆ; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ
Motivational: ಪಿಯುನಲ್ಲಿ 2 ಬಾರಿ ಫೇಲ್, ಯುಪಿಎಸ್ಸಿ ಪಾಸ್
Bike Theft: ಹಗಲಲ್ಲಿ ಫುಡ್ಡೆಲಿವರಿ ಕೆಲಸ, ರಾತ್ರಿ ಬೈಕ್ಗಳ ಕಳವು: ಆರೋಪಿ ಬಂಧನ