ಊರ ಕಡೆ ಹೋಗದಿದ್ರೆ ನಿಮ್ಮ ಕರ್ಮ!
Team Udayavani, Dec 17, 2017, 2:21 PM IST
ಬೆಂಗಳೂರು: “ಈ ಬೆಂಗಳೂರಿನಲ್ಲಿದ್ದು ಏನು ಮಾಡ್ತೀರಾ? ಇಲ್ಲಿ ಸೇವಿಸುವ ಆಹಾರ, ನೀರು, ಉಸಿರಾಡುವ ಗಾಳಿ ಎಲ್ಲವೂ ವಿಷ. ತಿಂಗಳಿಗೆ 2 ಲಕ್ಷ ರೂ. ದುಡಿದ್ರೂ ತಿಂಗಳ ಕೊನೇಲಿ ಬ್ಯಾಂಕ್ ಅಕೌಂಟಲ್ಲಿ ಹಣ ಇರಲ್ಲ; ನೆಮ್ಮದಿಯೂ ಇರಲ್ಲ. ಇಲ್ಲಿ ಹೀಗೆ ಬಾಳ್ಳೋದಕ್ಕಿಂತಾ ಹಳ್ಳಿಗೆ ಹೋಗಿ, ಅಲ್ಲಿ ಬರೀ 10 ಗುಂಟೆ ಜಮೀನು ಇಟ್ಕೊಂಡು, ಅದರಲ್ಲಿ ಮನೆಗೆ ಬೇಕಾದಷ್ಟೇ ತರಕಾರಿ-ಹಣ್ಣು ಬೆಳ್ಕೊಂಡು, ಹಿಡಿ ರಾಗಿ ಗಂಜಿ ಕುಡ್ಕೊಂಡು, ಹಾಡು ಹೇಳ್ಕೊಂಡು ಹಾಯಾಗಿರೋದೇ ಚೆಂದ.. ಇಲ್ಲ ನಾವು ಊರಿಗೆ ಹೋಗಲ್ಲ, ಇಲ್ಲೇ ಇರಿವಿ ಅನ್ನೋದಾದ್ರೆ ಅದು ನಿಮ್ಮ ಕರ್ಮ..!
- ಕೃಷಿ ಸಾಧಕ ನಾರಾಯಣ ರೆಡ್ಡಿ, ಯುವಕರಿಗೆ ನೀಡಿದ ಸಲಹೆ ಇದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರೆಡ್ಡಿ ಅವರು, “ಈ ಬೆಂಗಳೂರಿನಲ್ಲಿ ನೀವು ಎಷ್ಟು ಬೇಕಾದರೂ ಗಳಿಸಹುದು. ಏನು ಬೇಕಾದರೂ ಮೋಜು, ಮಸ್ತಿ ಮಾಡಬಹುದು. ಆದರೆ, ಸಹಜ ಜೀವನ ಬೇಕಾದರೆ ನೀವು ಹಳ್ಳಿಗೇ ಹೋಗಬೇಕು. ಅಲ್ಲಿಯೇ ಕೇವಲ 10 ಗುಂಟೆ ಜಮೀನು ಇಟ್ಕೊಂಡು, ಅದರಲ್ಲಿ ಒಂದಿಷ್ಟು ಕೃಷಿ ಮಾಡಿಕೊಂಡು, ಪರಿಸರದ ನಡುವೆ ಕುಳಿತು ಪಕ್ಷಿಗಳ ಇಂಚರದ ಸಂಗೀತ ಕಚೇರಿ ಕೇಳ್ಕೊಂಡು ಇರೋದರಲ್ಲಿನ ಸುಖ ಈ ನಗರ ಜೀವನದಲ್ಲಿ ಸಿಗುವುದಿಲ್ಲ. ಊರು ಕಡೆಗೆ ಹೋಗದಿದ್ದರೆ, ಅದು ನಿಮ್ಮ ಕರ್ಮ ಅಷ್ಟೇ ಎಂದು ಹೇಳಿದರು.
“ಕೃಷಿ ಲಾಭದಾಯಕವಲ್ಲ. ಸಾಲದಿಂದ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಕೇಳಿದ್ರೆ, ನನಗೆ ನಗು ಮತ್ತು ಅಳು ಎರಡೂ ಬರುತ್ತದೆ. ಕಸಬಿನ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಇದು ರೈತರಿಗೂ ಅನ್ವಯಿಸುತ್ತದೆ. ನಮ್ಮ ರೈತರು ಕೆಟ್ಟಿದ್ದು ಇಲ್ಲಿಯೇ. ಬೀಜ-ಗೊಬ್ಬರ ಕಂಪೆನಿಯವರು ತೋರಿಸುವ ಚಿತ್ರಗಳಿಗೆ ಮರುಳಾಗಿ, ಸಮರ್ಪಕ ಮಾಹಿತಿ ಇಲ್ಲದೆ ಬೆಳೆಯುತ್ತಾರೆ. ನಂತರ ಸಾಲ ತೀರಿಸಲಾಗದೆ ಪರದಾಡುತ್ತಾರೆ. ನಾನು 40 ವರ್ಷದಿಂದ ಕೃಷಿ ಮಾಡುತ್ತಿದ್ದೇನೆ. ನಾನು ಯಾವತ್ತೂ ಸಾಲ ಮಾಡಿಲ್ಲ. ಬದಲಿಗೆ 150 ಕೋಟಿ ರೂ.ಗಳ ಒಡೆಯನಾಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಇದಕ್ಕೂ ಮುನ್ನ ತಮ್ಮ ಜೀವನದ ಹಾದಿಯ ಮೆಲುಕುಹಾಕಿದ ನಾರಾಯಣ ರೆಡ್ಡಿ, “150 ಕೋಟಿ ಒಡೆಯನಾಗುವ ಮೊದಲು ನಾನು ಹೋಟೆಲ್ನಲ್ಲಿ ಲೋಟ ತೊಳೆಯುತ್ತಿದ್ದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳು. ಮನೆಬಿಟ್ಟು ಬಂದ ನಾನು, ಅಲ್ಲಿ ಜೀವನ ಪಾಠ ಕಲಿತೆ. ಓದಲು ಪುರಸೊತ್ತು ಸಿಗಲಿಲ್ಲ; ಬದುಕು ಕಟ್ಟಿಕೊಳ್ಳುವುದರಲ್ಲೇ ಅರ್ಧ ಜೀವನ ಕಳೆದುಹೋಯ್ತು. ಐದು ವರ್ಷ ಕೃಷಿ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದೆ. ಆದರೆ, ಅಲ್ಲಿ 5 ವರ್ಷ ಆಯಸ್ಸು ಕಳೆದೋಯ್ತು ಹೊರತು, ಕೃಷಿ ಜ್ಞಾನ ಸಿಗಲಿಲ್ಲ. ನಂತರ ಟ್ರಾನ್ಸ್ಪೊàರ್ಟ್ ಕಂಪನಿ ಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದೆ. ಲಾರಿ ಟ್ರಾನ್ಸ್ಪೊàರ್ಟ್ ಮಾಡಬೇಕು
ಅಂದುಕೊಂಡಿದ್ದೆ. ಆದರೆ, ಅದರಲ್ಲಿನ ಮೋಸ-ವಂಚನೆ ಮನಸ್ಸಿಗೆ ಕಿರಿಕಿರಿ ಉಂಟುಮಾಡಿತು.
ಹಾಗಾಗಿ, 8 ವರ್ಷಗಳ ನಂತರ ಹಳ್ಳಿಗೆ ಹಿಂತಿರುಗಿದೆ. ತಂದೆಯ ಒಂದೂವರೆ ಎಕರೆ ಜಮೀನು ಇತ್ತು. ನಾನು ದುಡಿದು ಸಂಗ್ರಹಿಸಿಟ್ಟ 45 ಸಾವಿರ ರೂ. ಇತ್ತು. ಅದರಿಂದ ಜಮೀನು ಖರೀದಿಸಿ, ವ್ಯವಸಾಯದಲ್ಲಿ ತೊಡಗಿಕೊಂಡೆ’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಉಪಸ್ಥಿತರಿದ್ದರು. ತಿಂಗಳ ಅತಿಥಿಗೆ ಪ್ರೇಕ್ಷಕರ ಪ್ರಶೆ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಬರುವುದು ಯಾವಾಗ? ರೈತರು ಆರು ತಿಂಗಳ ಮಟ್ಟಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಆಗ, ಬೆಲೆಯೂ ಬರುತ್ತದೆ. ಪ್ರಧಾನಿ, ಸಿಎಂನಿಂದ ಹಿಡಿದು ಎಲ್ಲರೂ ರೈತರ ಬಳಿ ಬರುತ್ತಾರೆ.
ಕೃಷಿ ಮಾಡ್ಬೇಕಂತಾ ಆಸೆ ಇದೆ. ಆದರೆ, ಭೂಮಿ ಇಲ್ವಲ್ಲಾ? ಕೇವಲ 3-4 ಗುಂಟೆ ಜಮೀನನ್ನು ಗುತ್ತಿಗೆ ಪಡೆಯಿರಿ ಸಾಕು. ಅದರಲ್ಲಿ ತರಕಾರಿ, ಹಣ್ಣು ಬೆಳೆಯಿರಿ. ದುಡ್ಡಿದ್ದರೂ ರಾಜ್ಯದಲ್ಲಿ ಭೂಮಿ ಸಿಗದಿದ್ದರೆ, 30 ಕಿ.ಮೀ. ದೂರದಲ್ಲಿರುವ ತಮಿಳುನಾಡಿನಲ್ಲಿ ಭೂಮಿ ಖರೀದಿಸಿ. ಅದಕ್ಕೂ ಮೊದಲು ಕೃಷಿ ತರಬೇತಿ ಪಡೆಯಿರಿ.
ಜಿಎಂ ತಳಿಗಳು ಮಾರಕವೇ? ಈ ಬಗ್ಗೆ ಪರ-ವಿರೋಧ ಎರಡೂ ಇವೆ. ಆದರೆ, ವಿಜ್ಞಾನಿಗಳು ಯಾಕೆ ಇಷ್ಟು ತರಾತುರಿಯಲ್ಲಿ ಇದನ್ನು ತುಂಬುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅದೇನೇ ಇರಲಿ, ಈ ಕುರಿತು ನನಗೂ ಗೊಂದಲವಿದೆ. ಕೃಷಿಗೂ ವಾಸ್ತು ಇದೆಯಾ? ವೈಜ್ಞಾನಿಕವಾಗಿ ಹೇಳುವುದಾದರೆ ಆಗ್ನೇಯ ದಿಕ್ಕಿಗೆ ತುಸು ಎತ್ತರ ಇರಬೇಕು ಹಾಗೂ ಈಶಾನ್ಯದಲ್ಲಿ ಇಳಿಜಾರು ಇರಲಿ. ಇದರಿಂದ ಬೆಳೆಗಳ ಮೇಲೆ ಎಳೆಬಿಸಿಲು ಬೀಳುವುದರಿಂದ ಉತ್ತಮ.
ಶ್ರೀ ಪದ್ಧತಿ ಕಾವೇರಿ ವಿವಾದಕ್ಕೆ ಪರಿಹಾರ
ಕರ್ನಾಟಕ-ತಮಿಳುನಾಡು ರೈತರು ಶ್ರೀ ಪದ್ಧತಿಯಲ್ಲಿ ಭತ್ತ ಬೆಳೆದರೆ, ಕಾವೇರಿ ವಿವಾದವನ್ನೇ ಬಗೆಹರಿಸಬಹುದು ಎಂದು ಕೃಷಿಕ ನಾರಾಯಣ ರೆಡ್ಡಿ ತಿಳಿಸಿದರು. ಒಣಭೂಮಿಯಲ್ಲಿ ಭತ್ತ ಬೆಳೆಯಲು ಸಾಧ್ಯವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತಾ ಒಣಭೂಮಿ ಯಲ್ಲೂ ಭತ್ತ ಬೆಳೆಯಬಹುದು. ಬಳಕೆಯಾಗುತ್ತಿರುವುದರ ಪೈಕಿ ಮೂರನೇ ಒಂದು ಭಾಗ ನೀರು ಬಳಸಿ, ಈಗ ಬರುತ್ತಿರುವ ಇಳುವರಿಗಿಂತ ನಾಲ್ಕು ಪಟ್ಟು ಭತ್ತ ಬೆಳೆಯಬಹುದು. ಆಗ, ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಎರಡೂ ರಾಜ್ಯಗಳ ರೈತರಿಗೆ ನೀರಿನ ಕೊರತೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಯೂಟ್ಯೂಬ್ ನೋಡಿ ಕೃಷಿಯತ್ತ ಮುಖ! “ಯೂಟ್ಯೂಬ್ನಲ್ಲಿ ನಾರಾಯಣ ರೆಡ್ಡಿ ಅವರ ಸಾಧನೆ ವಿಡಿಯೋ ನೋಡಿ, ನಾನು ಕೃಷಿಕನಾ ಗಲು ನಿರ್ಧರಿಸಿದ್ದೇನೆ,’ ಎಂದು ಗೋಕಾಕ್ನ ಹಿರೇಮಠ ತಿಳಿಸಿದರು. “18 ವರ್ಷದಿಂದ ಬೆಂಗಳೂರಿನಲ್ಲಿರುವ ನನಗೆ ನಗರದ ಜೀವನಸಾಕಾಗಿದೆ. ಯ್ಯೂಟ್ಯೂಬ್ನಲ್ಲಿ ನಿಮ್ಮ ಕೃಷಿ ಸಾಧನೆ ನೋಡಿ ಇಷ್ಟವಾಯಿತು. ಈಗ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಜನವರಿಯಿಂದ ಹಳ್ಳಿಗೆ ತೆರಳಿ, ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ನಿರ್ಧರಿಸಿದ್ದೇನೆ,’ ಎಂದಾಗ ಚಪ್ಪಾಳೆಗಳ ಸ್ವಾಗತ ದೊರೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ