ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ವಿದ್ಯಾರ್ಥಿಗಳಿಗೆ ಪಾಠ
Team Udayavani, Sep 2, 2019, 3:00 AM IST
ನೆಲಮಂಗಲ: ಅದ್ಧೂರಿಯಾಗಿ ಗಣೇಶನ ಹಬ್ಬ ಆಚರಿಸುವ ಭರದಲ್ಲಿ ಪರಿಸರ ಸಂರಕ್ಷಣೆ ಮರೆಯುತ್ತಿರುವ ಜನರಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯ ಉಪಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಪಟ್ಟಣದ ನ್ಯೂ ಸೆಂಚುರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ “ಪರಿಸರ ಸ್ನೇಹಿ ಗಣಪನ ಜೊತೆ ಹಬ್ಬದ ಸಡಗರ’ ಸಮಾರಂಭಕ್ಕೆ ನಿವೃತ್ತ ಶಿಕ್ಷಕ ಮಾರುತಿ ಚಾಲನೆ ನೀಡಿ ಮಾತನಾಡಿದರು.
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಗಣೇಶನ ಹಬ್ಬವು ಒಂದಾಗಿದ್ದು, ಈ ಹಿಂದೆ ಮಾರುಕಟ್ಟೆ ಪ್ರವೇಶಿಸಿದ್ದ ಪಿಒಪಿ ಗಣೇಶ ಮೂರ್ತಿಗಳು ಜನರ ಆಕರ್ಷಣೆಯಿಂದ ಪ್ರಸಿದ್ಧವಾಗಿದ್ದವು. ಆದರೆ ಈ ಮೂರ್ತಿಗಳಿಂದ ಉಂಟಾದ ಪರಿಸರ ಮಾಲಿನ್ಯನಿಂದ ಪಿಒಪಿ ಗಣೇಶ ಮೂರ್ತಿಯನ್ನು ನಿಷೇಧಿಸಲಾಗಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪೂಜಿಸುವಂತೆ ಮನವಿ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾಡುವುದನ್ನು ಕಲಿಸಲಾಗುತ್ತಿರುವುದು ಸ್ವಾಗತಾರ್ಹ ಇದೇ ರೀತಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು ಎಂದರು.
ನ್ಯೂ ಸೆಂಚುರಿ ಶಾಲಾ ವ್ಯವಸ್ಥಾಪಕ ಗಂಗಪ್ಪ ಮಾತನಾಡಿ, ಮಕ್ಕಳಿಗೆ ಗಣೇಶ ಬಹಳ ಇಷ್ಟವಾದ ದೇವರಾಗಿರುವುದರಿಂದ ಗಣೇಶ ಹಬ್ಬಕ್ಕೆ ಮಕ್ಕಳ ಸಡಗರ ಹೆಚ್ಚಾಗಿರುತ್ತದೆ. ಆದರೆ ಮಕ್ಕಳಲ್ಲಿ ಪಿಒಪಿ ಹಾಗೂ ಮಣ್ಣಿನ ಗಣೇಶ ಮೂರ್ತಿಯ ಬಗ್ಗೆ ಅರಿವು ಮೂಡಿಸಿದರೆ, ಪರಿಸರದ ಜೊತೆ ಹಬ್ಬವನ್ನು ಆಚರಿಸುತ್ತಾರೆ. ಅಂತಹ ಕಾರ್ಯವನ್ನು ನಮ್ಮ ಶಾಲೆಯಲ್ಲಿ ಮಾಡುತ್ತಿರುವುದು ಸಂತೋಷವಾಗಿದೆ ಎಂದರು.
ಗಣೇಶ ಮೂರ್ತಿ ಮಾಡುವ ವಿಧಾನ: ಚಿತ್ರಕಲಾವಿದರಾದ ಅಶ್ವಿನಿ ಗೋವರ್ಧನ್, ಮಂಜುನಾಥ್ ಪ್ರಭು ಅವರು, ಶಾಲಾ ವಿದ್ಯಾರ್ಥಿಗಳಿಗೆ ಮಣ್ಣಿನ ಗಣೇಶ ಮೂರ್ತಿ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಈ ವೇಳೆ ಸಾಹಿತಿ ವೆಂಕಟೇಶ್ಆರ್ ಚೌಥಾಯಿ, ಚಿತ್ರಕಲಾವಿದರಾದ ಅಶ್ವಿನಿ ಗೋವರ್ಧನ್, ಮಂಜುನಾಥ್ ಪ್ರಭು, ಶಿಲ್ಪಶ್ರೀ, ಮದನ್ಕುಮಾರ್, ಗಂಗಾಧರ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.