ಲಾಕ್ ವೇಳೆ 11 ಸಾವಿರಕ್ಕೆ ದತ್ತು ಕೊಟ್ಟಿದ್ದ ಮಗು ತಾಯಿ ಮಡಲಿಗೆ
ಲಾಕ್ಡೌನ್ ವೇಳೆ 11 ಸಾವಿರ ಪಡೆದು ಶಿರಾ ಮೂಲದವರಿಗೆ ಮಗು ದತ್ತು ನೀಡಿದ್ದ ತಾಯಿ
Team Udayavani, Aug 30, 2020, 11:42 AM IST
ನೆಲಮಂಗಲ: ಕೋವಿಡ್ನಿಂದ ಸರ್ಕಾರ ಲಾಕ್ ಡೌನ್ ವಿಧಿಸಿದ್ದ ಸಂದರ್ಭದಲ್ಲಿ ಮಗುವನ್ನು ಸಾಕಲಾರದೇ 11 ಸಾವಿರ ರೂ.ಹಣ ಪಡೆದು ಹೆಣ್ಣು ಮಗುವನ್ನು ದತ್ತು ನೀಡಿದ್ದ ತಾಯಿ, ಮತ್ತೆ ಮಗುವನ್ನು ಪೊಲೀಸರ ಸಮ್ಮುಖದಲ್ಲಿ ವಾಪಸ್ ಪಡೆದುಕೊಂಡಿದ್ದಾರೆ.
ತಾಲೂಕಿನ ಬಸವನಹಳ್ಳಿ ನಿವಾಸಿ ಆಗಿರುವ ನಾಗಲಕ್ಷ್ಮೀ ತನ್ನ ಮೂರೂವರೆ ವರ್ಷದ ಹೆಣ್ಣು ಮಗುವಿಗೆ ಲಾಕ್ಡೌನ್ ಸಮಯದಲ್ಲಿ ಊಟ ತಿಂಡಿ, ಬಟ್ಟೆ ನೀಡಲು ಸಾಧ್ಯವಾಗದ ಕಾರಣ, ತುಮಕೂರು ಜಿಲ್ಲೆಯ ಶಿರಾ ಮೂಲದ ವ್ಯಕ್ತಿಗೆ ದತ್ತು ನೀಡಿ ಹಣ ಪಡೆದುಕೊಂಡಿದ್ದರು. ಮನವಿ ಮಾಡಿದ್ದರು: ಲಾಕ್ಡೌನ್ ಮುಕ್ತಾಯವಾಗಿ ವ್ಯಾಪಾರ ವಹಿ ವಾಟು ಪುನಾರಂಭವಾದ ನಂತರ ನಾಗಲಕ್ಷ್ಮೀ, ತನ್ನ ಮಗು ಬೇಕು ವಾಪಸ್ ನೀಡಿ ಎಂದು ದತ್ತು ಪಡೆದ ವ್ಯಕ್ತಿಯನ್ನು ಕೇಳಿದ್ದಾಳೆ. ಆದರೆ, ದತ್ತು ಪಡೆದಿರುವುದಾಗಿ ಪತ್ರಕ್ಕೆ ಸಹಿ ಹಾಕಿದ್ದ ಹಿನ್ನೆಲೆ ನೆಲಮಂಗಲ ಪೊಲೀಸರಿಗೆ ಮಗುವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ವೃತ್ತ ನಿರೀಕ್ಷಕ ಶಿವಣ್ಣ ನೇತೃತ್ವದ ತಂಡ ದತ್ತು ಪಡೆದುಕೊಂಡಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಮಗುವನ್ನು ಶುಕ್ರವಾರ ರಾತ್ರಿ ನಾಗಲಕ್ಷ್ಮೀ ಅವರಿಗೆ ವಾಪಸ್ ಕೊಡಿಸಿದರು.
ಮಗು ಸಾಕಲು ಅಸಾಧ್ಯವಾಗಿತ್ತು:ತಾಯಿ ನಾಗಲಕ್ಷ್ಮೀ ಪ್ರತಿಕ್ರಿಯಿಸಿ, ಲಾಕ್ಡೌನ್ ಸಂದರ್ಭದಲ್ಲಿ ಮಗುವನ್ನು ಸಾಕಲು ಸಾಧ್ಯವಾಗದ ಕಾರಣ ಕೃಷ್ಣಮೂರ್ತಿ ಎಂಬವರಿಗೆ ಪತ್ರಕ್ಕೆ ಸಹಿ ಹಾಕಿ ತಾನೇ ಮಗುವನ್ನು ನೀಡಿದ್ದೆ. ಆ ಸಂದರ್ಭದಲ್ಲಿ 11 ಸಾವಿರ ಹಣ ನೀಡಿದ್ದರು. ತನ್ನ ಮಗಳನ್ನು ಮರೆ ಯಲು ಸಾಧ್ಯವಾಗಲಿಲ್ಲ. ಪೊಲೀಸರ ಸಹಾಯದಿಂದ ಮತ್ತೆ ಮಗುವನ್ನು ಪಡೆದುಕೊಂಡಿದ್ದೇನೆಂದು ತಿಳಿಸಿದರು.