ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 3,771 ಮಂದಿ ಏಡ್ಸ್ ಪೀಡಿತರು..
Team Udayavani, Dec 1, 2021, 12:44 PM IST
ದೇವನಹಳ್ಳಿ: ಜಿಲ್ಲೆಯಲ್ಲಿ 2007ರಿಂದ 2021ರ ಅಕ್ಟೋಬರ್ವರೆಗೆ 3771 ಎಚ್ಐವಿ ಪ್ರಕರಣ ದಾಖಲಾಗಿದ್ದು ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಲೈಂಗಿಕ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಾಗಿರುವ ಜಾಗೃತಿ ಪರಿಣಾಮ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.
ಎಚ್ಐವಿ ಸೋಂಕು ಹರಡುವ ವಿಧಾ ನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆಯಾದರೂ ಸ್ವಯಂ ಸುರಕ್ಷತೆ ಕಾಳಜಿ ವಹಿಸುವಂತೆ ನಿರಂತರ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಎಚ್ಐವಿ ಪೀಡಿತರನ್ನು ಕೀಳಾಗಿ ಕಾಣಬೇಡಿ ಎಂಬ ಜಾಗೃತಿ ಅವಶ್ಯಕತೆ ಇದೆ ಎಂಬುವುದು ತಜ್ಞರ ಅಭಿಪ್ರಾಯವಿದೆ.
ಎಚ್ಚರಿಕೆ: ಎಚ್ಐವಿಯಿಂದ ರಕ್ಷಿಸಿಕೊಳ್ಳಲು ಏನು ಮಾಡ ಬೇಕು. ಅನೇಕರೊಂದಿಗೆ ಲೈಂಗಿಕ ಸಂಬಂಧ ಬೇಡ, ರಕ್ತ ಸಂಬಂಧ ಪಡೆಯುವಾಗ ಎಚ್ಐವಿ ಸೇರಿ ವಿವಿಧ ಸೋಂ ಕು ಇಲ್ಲವೆಂದು ಗುಣಪಡಿಸಿಕೊಂಡಿರುವುದನ್ನು ಖಚಿತ ಪಡಿಸಿಕೊಳ್ಳಿ, ಸಿರೆಂಜು, ಸೂಚಿ, ಬ್ಲೇಡ್ ಗಳನ್ನು ಬಳಸುವಾಗ ಕುದಿಯುವ ಬಿಸಿ ನೀರಿನಲ್ಲಿ ಹಾಕುವುದರ ಮೂಲಕ ಅದನ್ನು ಉಪಯೋಗಿಸಬೇಕು. ಇನ್ನು ಒಳಿತೆಂದರೆ, ಹೊಸದನ್ನೇ ಬಳಸಿ.
ಎಚ್ಐವಿ ಸೋಂಕಿತರನ್ನು ಮುಟ್ಟುವುದರಿಂದ ಜತೆಯಲ್ಲಿ ಕುಳಿತುಕೊಳ್ಳುವುದರಿಂದ, ಶೌಚಾಲಯ ಬಳಸುವುದರಿಂದ ಹರಡುವುದಿಲ್ಲ. ಸೋಂಕಿತರನ್ನು ಕೀಳಾಗಿ ಕಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 2007ರಿಂದ 20ರವರೆಗೆ 3771 ಮಂದಿಗೆ ಎಚ್ಐವಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:- ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ
ಈ ಕುರಿತು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ವರ್ಷದಿಂದ ವರ್ಷಕ್ಕೆ ಸೋಂಕು ಕಡಿಮೆ ಯಾಗುತ್ತಿರುವುದು ಆರೋಗ್ಯ ಇಲಾಖೆಗೆ ಸಮಧಾನ ತಂದಿದ್ದು, ಸೋಂಕಿತರ ಪ್ರಮಾಣ ಶೂನ್ಯಕ್ಕೆ ತರಲು ಇಲಾಖೆ ಶ್ರಮಿಸುತ್ತಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಚ್ಐವಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ಬಹುತೇಕರಿಗೆ ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಇಲಾಖೆ ಸೋಂಕಿತರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವೈದ್ಯಕೀಯ ಚಿಕಿತ್ಸೆ ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಲಾಗುತ್ತಿದೆ.
“ಜಿಲ್ಲೆಯಲ್ಲಿ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಸೌಲಭ್ಯ ಉಚಿತವಾಗಿದೆ. ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.” – ಡಾ.ನಾಗೇಶ್, ಜಿಲ್ಲಾ ಕ್ಷಯರೋಗ ಅಧಿಕಾರಿ.
“ಏಡ್ಸ್ ಸೋಂಕಿತರನ್ನು ಕೀಳಾಗಿ ಕಾಣಬೇಡಿ, ಅವರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಬೇಕು. ಪ್ರತಿ ವರ್ಷವೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಮ್ ಯುವಕರ ವೇದಿಕೆಯಿಂದ ಏಡ್ಸ್ ದಿನಾಚರಣೆ ಮಾಡಿಕೊಂಡು ಬರಲಾಗಿದೆ.” – ಎಂ.ಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷರು.
●ಎಸ್.ಮಹೇಶ್