ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳಿಗೆ ರೂಢಿಸಿ
Team Udayavani, Dec 16, 2020, 3:06 PM IST
ದೇವನಹಳ್ಳಿ: ಇಂದಿನ ದಿನಗಳಲ್ಲಿ ಯುವ ಜನಾಂಗ ಪುಸ್ತಕ ಓದುವ ಬದಲು ಮೊಬೈಲ್ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಈ ಪರಿಣಾಮ ಮುಂದಿನ ದಿನಗಳಲ್ಲಿ ಸಮಾಜದ ಮೇಲೆ ದುಷ್ಪರಿಣಾಮಗಳು ಆಗುವ ಸಾದ್ಯತೆ ಇದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪುಸ್ತಕ ಓದುವ ಸಂಸ್ಕೃತಿ ಮರುಕಳಿಸಬೇಕಿದೆ. ಪ್ರತಿಯೊಬ್ಬರು ಪುಸ್ತಕ ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಶಿಡ್ಲಘಟ್ಟದ ಕನ್ನಡ ಸ್ವಾರಸ್ಯ ಪರಿಚಾರಿಕೆ ಸಂಘಟನೆಯ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸಾಹಿತಿ ಪ್ರೊ.ಎಚ್.ಗವಿಸಿದ್ಧಯ್ಯ ಅವರ 20ನೇ ನೀತಿವಂತ ಆಪ್ತ ಮಿತ್ರರು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಬದಲಾಗುತ್ತಿದೆ. ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾಡಿನ ಕಲೆ, ಸಂಸ್ಕೃತಿ, ಭಾಷೆ ಜತೆಗೆ ಸಮಾಜದಲ್ಲಿ ನಡೆಯುವ ಎಡರುತೊಡರುಗಳನ್ನು ಸಾಹಿತಿಗಳು ಮತ್ತು ಮಾದ್ಯಮಗಳು ವಸ್ತು ನಿಷ್ಠವಾಗಿ ಪ್ರಕಟಿಸಿದರೆ ಜನಜಾಗೃತಿ ಮೂಡಿಸಲು ಸಾಧ್ಯವಾಗಲಿದೆ.ಚಿಕ್ಕಮಕ್ಕಳಿಗೆ ನೀತಿ ಕತೆಗಳನ್ನುಹೇಳಿ,ಅವರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಬೇಕು ಎಂದು ಹೇಳಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹ ಕಾರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಆಪ್ತ ಮಿತ್ರ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತಿಗಳಿಗೆ ಸಮಾಜದಲ್ಲಿಗೌರವವಿದೆ. ಸಾಹಿತ್ಯದ ಗುಣಮಟ್ಟದ ಜತೆ ಅಭಿರುಚಿ ಹೆಚ್ಚಾಗಬೇಕು. ಹಿರಿಯ ಸಾಹಿತಿಗಳು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ಇಳಿವಯಸ್ಸಿನಲ್ಲಿಯೂಪುಸ್ತಕದಬಗ್ಗೆ ಕಾಳಜಿಯನ್ನಿಟ್ಟುಕೊಂಡಿರುವ ಗವಿಸಿದ್ಧಯ್ಯ ಸಾಹಿತ್ಯಹಾಗೂ ಪುಸ್ತಕ ಬರೆಯುವುದರಲ್ಲಿ ತಲೀನರಾಗಿರುವುದು ಶ್ಲಾಘನೀಯ ಎಂದರು.
ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಕೆ.ಮಹಾಲಿಂಗಯ್ಯ ಮಾತನಾಡಿದರು. ಸಾಹಿತಿ ಮ.ಸುರೇಶ್ ಬಾಬು, ಅಬಕಾರಿ ಇಲಾಖೆ ನಿವೃತ್ತ ಅಧಿಕಾರಿ ರಾಮಯ್ಯ, ಕಾರ್ಯನಿರತ ಪತ್ರಕರ್ತರಸಂಘದ ಜಿಲ್ಲಾ ಖಜಾಂಚಿ ಡಿ.ಕೆ.ಮಹೇಂದ್ರಕುಮಾರ್, ಜಿಲ್ಲಾಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್,ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ರುದ್ರೇಶ್ ಮೂರ್ತಿ, ಇತಿಹಾಸ ಸಂಶೋಧಕ ಬಿ.ಜಿ.ಗುರುಸಿದ್ಧಯ್ಯ ಇತರರಿದ್ದರು.