ಗುಟ್ಟೆ ಬೆಟ್ಟ ಏರಿ ಸಾಹಸ ತೋರಿದ ಜೋಡಿ ಎತ್ತು
Team Udayavani, Jan 26, 2019, 7:11 AM IST
ನೆಲಮಂಗಲ: ತಾಲೂಕಿನ ಪ್ರಸಿದ್ಧ ಮಹಿಮ ರಂಗ ಸ್ವಾಮಿ (ಗುಟ್ಟೆ)ಬೆಟ್ಟದ ಜಾನುವಾರು ಜಾತ್ರೆಯಲ್ಲಿ 2.50 ಲಕ್ಷ ರೂ. ಬೆಲೆ ಬಾಳುವ ಸಾಹಸಿ ಎತ್ತುಗಳು ಬೆಟ್ಟದ ಮೇಲಿರುವ ಮಹಿಮ ರಂಗ ಸ್ವಾಮಿ ದರ್ಶನ ಪಡೆದು ಸಾಹಸ ಪ್ರದರ್ಶನ ಮಾಡಿವೆ.
ತಾಲೂಕಿನ ಮಹಿಮ ರಂಗಸ್ವಾಮಿ ಜಾನುವಾರಗಳ ಜಾತ್ರೆಯಲ್ಲಿ ಮಾರಾಟ ಕ್ಕೆಂದು ಬಂದಿರುವ ಹೊಸಕೋಟೆ ತಾಲೂಕಿನ ಬಿ.ಶೆಟ್ಟಿಹಳ್ಳಿ ಗ್ರಾಮದ ರೈತ ರಾಮಾಂಜಿ ಅವರ ಮೂರು ವರ್ಷದ ಒಂದು ಜೋಡಿ ಎತ್ತುಗಳನ್ನು ಬೆಟ್ಟ ಹತ್ತಿಸುವ ಸಾಹಸ ಮಾಡಲಾಯಿತು. ಇಲ್ಲಿಯವರೆಗೂ ಯಾವುದೇ ಜೋಡಿ ಎತ್ತುಗಳು ಬೆಟ್ಟವನ್ನು ಹತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಜೋಡಿ ಎತ್ತುಗಳು ಬೆಟ್ಟದ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ರೈತ ರಾಮಾಂಜಿ ಮಾತನಾಡಿ, ನಾನು ಸಾಕಿರುವ ಜೋಡಿ ಎತ್ತುಗಳ ಬೆಲೆ 2.50 ಲಕ್ಷ ರೂ. ಆಗಿದ್ದು, ತೀರಾ ಇಷ್ಟಪಟ್ಟು ಸಾಕಿದ್ದೇನೆ. ಮೂರು ವರ್ಷದ ಈ ಎತ್ತುಗಳನ್ನು ಬೆಟ್ಟ ಹತ್ತಿಸಿ ದಾಖಲೆ ಮಾಡ ಬೇಕು ಎನ್ನುವ ಆಸೆಯಿತ್ತು. ಅದನ್ನು ಈ ಎತ್ತುಗಳು ಪೂರೈಸಿವೆ. ಜನರೇ ಹತ್ತಲು ಆಯಾಸ ಪಡುವ ಈ ಬೆಟ್ಟಕ್ಕೆ ಆಯಾಸ ವಿಲ್ಲದೇ ಬೆಟ್ಟ ಹತ್ತಿರುವ ಎತ್ತುಗಳ ಸಾಹಸ ಮರೆಯಲಾಗುವುದಿಲ್ಲ ಎಂದು ತಿಳಿಸಿದರು.
ಜಾತ್ರೆಗೆ ಆಗಮಿಸಿದ ರೈತ ಸಿದ್ಧ ಗಂಗಯ್ಯ ಮಾತನಾಡಿ, ತಾವು ಅನೇಕ ವರ್ಷಗಳಿಂದ ಗುಟ್ಟೆಯ ಜಾನು ವಾರ ಜಾತ್ರೆಗೆ ಬರುತ್ತಿದ್ದು, ಈ ಬಾರಿ ಜೋಡಿ ಎತ್ತುಗಳು ಬೆಟ್ಟ ಹತ್ತಿರುವುದು ಆಶ್ವರ್ಯ ದ ಸಂಗತಿ ಎಂದು ತಿಳಿಸಿದರು.