ದೊಡ್ಡಬಳ್ಳಾಪುರ: ಕಾಳಗದಲ್ಲಿ ಹೆಣ್ಣು ಚಿರತೆ ಸಾವು
Team Udayavani, Mar 20, 2021, 5:53 PM IST
ದೊಡ್ಡಬಳ್ಳಾಪುರ: ಎರಡು ಚಿರತೆಗಳ ನಡುವೆ ನಡೆದ ಕಾಳಗದಲ್ಲಿ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿ ಗ್ರಾಮ ಸಮೀಪದ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಗ್ರಾಮದ ಯುವಕರು ಬೆಟ್ಟದ ಬಳಿ ತೆರಳಿದಾಗ ಚಿರತೆ ಕಳೇಬರ ಕಂಡಿದೆ. ಸುಮಾರು ಮೂರು ವರ್ಷದೆನ್ನಲಾಗುತ್ತಿರುವ ಚಿರತೆ ಸತ್ತು ಒಂದು ವಾರವಾಗಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಚಿರತೆ ಕಳೇಬರ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿ ಚೇತನ್ ಮೃತ ಚಿರತೆಯ ವೈದ್ಯಕೀಯ ತಪಾಸಣೆ ನಡೆಸಿದ್ದು, ಎರಡು ಚಿರತೆಗಳ ನಡುವೆ ನಡೆದ ಕಾಳಗದಿಂದಾಗಿ ಚಿರತೆ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಗುರುವಾರ ರಾತ್ರಿ ಗುಮ್ಮನಹಳ್ಳಿ ಗ್ರಾಮದ ಬಳಿ ಮೇಕೆಯ ಮೇಲೆ ಸಹ ದಾಳಿ ನಡೆಸಿದೆ. ಮಾಕಳಿ ಹಾಗೂ ಉಜ್ಜನಿ ಬೆಟ್ಟದ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಪದೇ ಪದೆ ಗ್ರಾಮಕ್ಕೆ ನುಗ್ಗುತ್ತಿವೆ ಎಂದು ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿ ಚೇತನ್ ಚಿರತೆಗಳ ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.