ಕೋವಿಡ್ ಮುಕ್ತಕ್ತಾಗಿ ಹಳ್ಳಿಗಳಲ್ಲಿ ಲಸಿಕೆ ನೀಡಿ
Team Udayavani, Jul 6, 2021, 11:16 AM IST
ವಿಜಯಪುರ: ಪ್ರಪಂಚವನ್ನೇ ತಲ್ಲಣಗೊಳಿಸಿ ಕಣ್ಣಿಗೆ ಕಾಣದ ಸಣ್ಣ ವೈರಸ್ ಮನುಷ್ಯ ಸಂಕುಲದ ಮೇಲೆ ಮಾರಣಾಂತಿಕವಾಗಿ ಪರಿಣಾಮ ಬೀರುತ್ತಿದೆ. ಇದರ ನಿರ್ಮೂಲನೆಗಾಗಿ ಮೊದಲು ಹಳ್ಳಿಗಳಲ್ಲಿ ಲಸಿಕೆ ನೀಡಬೇಕು. ಅಗತ್ಯಕ್ಕೆ ತಕ್ಕಷ್ಟು ಲಸಿಕೆ ಪೂರೈಸಬೇಕು ಎಂದು ಮಂಡಿ ಬೆಲೆ ಗ್ರಾಪಂ ಉಪಾಧ್ಯಕ್ಷಕೇಶವ ತಿಳಿಸಿದರು.
ಹೋಬಳಿಯ ಮಂಡಿಬೆಲೆ ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಹೋಪ್ ಫೌಂಡೇಶನ್, ಹಮ್ಚಮ್ ಫೌಂಡೇಶನ್ ನಿಂದ ಕೋವಿಡ್ ಲಸಿಕೆ ನೀಡುವ ಅಭಿಯಾನದಲ್ಲಿ ಮಾತನಾಡಿ, ಲಸಿಕೆ ಬಂದ ಪ್ರಾರಂಭದಲ್ಲಿ ಸಾರ್ವಜನಿಕರುಲಸಿಕೆಪಡೆಯಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಇದರ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ಜನತೆ ಲಸಿಕೆ ಪಡೆಯಲು ಮುಂದಾಗಿರುವುದು ಸಂತಸದ ವಿಷಯ.
ಸರ್ಕಾರದ ಜೊತೆ ಇತರೆ ಎನ್ಜಿಒಗಳು ಕೈಜೋಡಿಸಿ, ಕೋವಿಡ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬಿಕ ವೀರಭದ್ರ ಮಾತನಾಡಿ, 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆಯನ್ನು ನೀಡುವ ಗುರಿ ಹೊಂದಿದೆ. ತಾಲೂಕಿನಲ್ಲಿ ಮೊದಲು ನಮ್ಮ ಗ್ರಾಮವನ್ನು ಕೋವಿಡ್ ಮುಕ್ತ ಗ್ರಾಮ ಮಾಡಲು ಮುಂದಾಗಿದ್ದೇವೆ. ಗ್ರಾಮದ ಜನರು ಇದಕ್ಕೆ ಸಹಕರಿಸುತ್ತಿದ್ದಾರೆ ಎಂದರು.
10 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ: ಖಾಸಗಿ ಕಂಪನಿಯ ಅನಿಲ್ ಕುಮಾರ್ ಮಾತನಾಡಿ, ಸಿಎಸ್ಆರ್ ಅನುದಾನದಡಿ ಲಸಿಕೆ ಅಭಿಯಾನ ನಡೆಯುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡುತ್ತಿದ್ದು, ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ ಕ್ಷೇತ್ರ ಹೀಗೆ
ಹಲವು ಸಮಾಜಮುಖೀ ಕೆಲಸಗಳಲ್ಲಿ ಕೈಜೋಡಿಸಿದ್ದೇವೆ. ನಮ್ಮ ಸಂಸ್ಥೆಯಿಂದ 10 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು,ಗ್ರಾಮೀಣ ಪ್ರದೇಶದ ಬಿ.ಪಿ.ಎಲ್ ಕಾರ್ಡ್ಹೊಂದಿರುವ ಬೀದಿಬದಿ ವ್ಯಾಪಾರಿಗಳು, ಅಗತ್ಯವಿರುವ ಜನರಿಗೆ ನೀಡುತ್ತಿದ್ದು, ಈಗಾಗಲೇ 1 ಲಕ್ಷ ಲಸಿಕೆ ಪೂರೈಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ9 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ವರಲಕ್ಷ್ಮೀ ವಿಜಯ್ ಕುಮಾರ್, ತಾಪಂ ಇಒ ವಸಂತ್ ಕುಮಾರ್, ಪಂಚಾಯತಿಅಭಿವೃದ್ಧಿಅಧಿಕಾರಿಮುನಿರಾಜು ಮತ್ತು ಏಕದಂತ ಗೆಳೆಯರ ಬಳಗದ ಪದಾಧಿಕಾರಿಗಳು ಹಾಜರಿದ್ದರು.