2024ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ
Team Udayavani, Nov 29, 2020, 10:45 AM IST
ದೇವನಹಳ್ಳಿ: ಕೋವಿಡ್ ಹಾವಳಿಯಿಂದಾಗಿ ಎತ್ತಿನ ಹೊಳೆ ನೀರಿನ ಯೋಜನೆ ಕುಂಠಿತವಾಗಿದೆ. ಈಗಾಗಲೇ ಪೈಪ್ಲೈನ್ ಕಾಮಗಾರಿ ನಡೆಯುತ್ತಿದೆ. ಬಯಲು ಸೀಮೆಯ ಜನರಿಗೆ ಎತ್ತಿನಹೊಳೆ ಯೋಜನೆ 2024ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಪಂ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮೇಲ್ವಿಚಾರಣಾ ಸಮಿತಿ (ಡಿಡಿಸಿಎಂಸಿ) ವತಿಯಿಂದ ನಡೆದ 2020-21ನೇ ಸಾಲಿನ ತ್ತೈಮಾಸಿಕ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಗೆ ಇನ್ನಷ್ಟು ಜಮೀನು ಅವಶ್ಯಕತೆಯಿದೆ. 12.50 ಸಾವಿರ ಕೋಟಿ ರೂ. ಖರ್ಚಾಗಿದೆ. 2024ಕ್ಕೆ ಯೋಜನೆ ಪೂರ್ಣಗೊಳ್ಳುತ್ತದೆಂಬ ಅಂದಾಜು ಇದೆ. ಕೊರಟಗೆರೆ-ಬೈರಗೊಂಡನಹಳ್ಳಿವರೆಗೂ ಕಾಮಗಾರಿ ಬಂದಿದೆ. ಈಗಾಗಲೇ268ಕಿ.ಮೀ.ನಷ್ಟು ಪೈಪ್ಲೈನ್ ಕಾಮಗಾರಿ ನಡೆದಿದೆ ಎಂದು ತಿಳಿಸಿದರು.
ದೇವನಹಳ್ಳಿ ನಗರದ ಸಮೀಪದಲ್ಲಿನ ಗೋಖರೆ ರಸ್ತೆಯಲ್ಲಿ ಸುಮಾರು2 ಎಕರೆ ಜಾಗವನ್ನು ಚಿತಾಗಾರ ನಿರ್ಮಾಣಕ್ಕೆ ಗುರ್ತಿಸಲಾಗಿದೆ. ಅಲ್ಲಿ ಚಿತಗಾರ ನಿರ್ಮಾಣಗೊಳ್ಳಲಿದೆ. ಕೊರೊನಾ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆ ಕಡಿಮೆ ಇದೆ. ದಿನೇದಿನೆಕೊರೊನಾ ಇಳಿಮುಖವಾಗುತ್ತಿದೆಎಂದು ಹೇಳಿದರು.
ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಹೊಸ ಕೋಟೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ನೀಡಿ3ವರ್ಷ ಕಳೆದಿದೆ. ಆದರೂ, ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಇರುವ ಜಾಗ ಬಳಸಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ, ಜಿಲ್ಲೆಯಲ್ಲಿ 17482 ಕೋವಿಡ್ ಪ್ರಕರಣಗಳಲ್ಲಿ 16933 ಪ್ರಕರಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. 407 ಪ್ರಕರಣ ಆಸ್ಪತ್ರೆ ಯಲ್ಲಿರುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀ ನಾರಾಯಣ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 207 ದಾಬಸ್ಪೇಟೆಯಿಂದ ಹೊಸಕೋಟೆ ಮಾರ್ಗವಾಗಿ ಹೋಗುತ್ತದೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿವೆ ಎಂದು ಹೇಳಿದರು. ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ, ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ನಾಮ್ ಕೆ ವಾಸ್ಥೆಗೆ ಬರಬೇಡಿ : ಎನ್ಎಚ್ ವ್ಯಾಲಿ ಮತ್ತುಕೆಸಿ ವ್ಯಾಲಿ ನೀರು ಈ ಭಾಗದಕೆರೆಗಳಿಗೆ ಬರುತ್ತಿವೆ. ಅಧಿಕಾರಿಗಳುಸಭೆಗೆ ಬರುವ ಮುನ್ನ ನಿಖರ ಮಾಹಿತಿ ನೀಡ ಬೇಕು. ನಾಮ್ಕೆವಾಸ್ಥೆಗೆ ಸಭೆಗೆ ಬಂದು ಹೋದರೆ ಸಾಲದು. ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಸರಿಯಾದ ಮಾಹಿತಿ ನೀಡಿ ಎಷ್ಟು ಜಿಲ್ಲೆಯಲ್ಲಿ ಎಷ್ಟು ಅರಣ್ಯ ಪ್ರದೇಶವಿದೆ ಎಂಬುವುದರ ಮಾಹಿತಿ ನೀಡಬೇಕು. ಬಾಯಿಗೆ ಬಂದ ರೀತಿ ಹೇಳಬಾರದು. ಈ ರೀತಿ ಮುಂದೆ ನೀಡಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಂಸದ ಬಚ್ಚೇಗೌಡ ಎಚ್ಚರಿಸಿದರು.