ಅಪಘಾತ ಸಂಭವಿಸದಂತೆ ಕ್ರಮವಹಿಸಿ
ಡೀಸಿ ಕೆ.ಶ್ರೀನಿವಾಸ್ ಸೂಚನೆ ರಸ್ತೆ ದುರಸ್ತಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ
Team Udayavani, Oct 31, 2021, 12:02 PM IST
ದೇವನಹಳ್ಳಿ: ಜಿಲ್ಲೆಯಲ್ಲಿರುವ ರಸ್ತೆಗಳ ಸ್ಥಿತಿ ಹದಗೆಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸುಧಾರಿತ ರಸ್ತೆಗಳನ್ನಾಗಿ ಮಾಡ ಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಬೆಂ. ಗ್ರಾ. ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ ದ ಅವರು, ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಟೋಲ್ಗಳಲ್ಲಿ ವಿಐಪಿ ವಾಹನಗಳು ಚಲಿಸುವ ಮಾರ್ಗಗಳಿಗೆ ಸ್ಥಳಾವಕಾಶ ಮಾಡಿ ಕೊಡಿ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ದುರಸ್ತೀಕರಣ, ರಸ್ತೆ ದೀಪಗಳ ಸರಿಯಾದ ಅಳವಡಿಕೆ, ರಸ್ತೆ ಬದಿ ಯ ಅನಗತ್ಯ ಅಂಗಡಿ ಮುಂಗಟ್ಟಗಳ ತೆರವು, ಸೂಕ್ತ ಏಕಮುಖ ರಸ್ತೆಗಳ ರಚನೆ, ರೋಡ್ ಮಾರ್ಕಿಂಗ್ ಹಾಗೂ ಮುಂತಾದ ಸಮಸ್ಯೆಗಳ ಕುರಿತಂತೆ ಸಾರಿಗೆ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಸುಸ್ಥಿತಿಗೆ ಕ್ರಮವಹಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಮಾತನಾಡಿ, ರಸ್ತೆ ಅಪಘಾತ ಸಂಭವಿಸಿದರೆ ಅವರ ಸಾವಿನಿಂದ ಇಡೀ ಕುಟುಂಬದವರೇ ನೋವು ಅನುಭವಿಸಬೇಕಾಗುತ್ತದೆ. ಅಪಘಾತದಿಂದ ಅಂಗವಿಕಲನಾದರೆ ಅವರನ್ನು ನೋಡಿಕೊಳ್ಳುವ ಹೊಣೆ ಕುಟುಂಬದವರಿಗೆ ಬಹಳ ಕಠಿಣವಾಗಿರುತ್ತದೆ.
ಇದನ್ನೂ ಓದಿ:- ಮಂಗಳೂರು: ಬಲ್ಲಾಳ್ ಭಾಗ್ ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿ: ಏಳು ಮಂದಿಯ ಬಂಧನ
ನೆಲಮಂಗಲದಲ್ಲಿ ಈಗಾಗಲೇ ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಅವುಗಳ ಸುಸ್ಥಿತಿಗೆ ಕ್ರಮವಹಿಸಿ, ತಾತ್ಕಾಲಿಕ ವ್ಯವಸ್ಥೆ ಗಳಿಗಿಂತ ಶಾಶ್ವತ ಪರಿಹಾರದ ಕಡೆ ಗಮನವಹಿಸಬೇಕು.ರಸ್ತೆಯ ಸುರಕ್ಷಿತ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.
ಅರಿವು ಮೂಡಿಸಿ: ಅಪರ ಜಿಲ್ಲಾಧಿಕಾರಿ ವಿಜಯಾ. ಈ. ರವಿಕುಮಾರ್ ಮಾತನಾಡಿ, ಶಾಲೆಗಳು ಪ್ರಾರಂಭವಾಗುತ್ತಿದ್ದು, ಶಾಲೆಗಳ ಸುತ್ತಮುತ್ತಲಿನ ಅವೈಜ್ಞಾನಿಕ ಹಂಪ್ಸ್ಗಳನ್ನು ತೆರವುಗೊಳಿಸಿ ಹಾಗೂ ಶಾಲಾ-ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತಂತೆ ಕಾರ್ಯಗಾರಗಳನ್ನು ನಡೆಸುವ ಮೂಲಕ ಅರಿವು ಮೂಡಿಸಬೇಕೆಂದರು.
ದೊಡ್ಡಬಳ್ಳಾಪುರ ಡಿವೈಎಸ್ಪಿ ನಟರಾಜ್, ನೆಲಮಂಗಲ ಡಿವೈಎಸ್ಪಿ ಜಗದೀಶ್, ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕ ಬಿ.ಆರ್.ಹರ್ಷ, ನೆಲಮಂಗಲ ಪಿಡಬ್ಲ್ಯೂಡಿ ಅಧಿಕಾರಿ ನಟರಾಜ್, ಕಾರ್ಯಪಾಲಕ ಅಭಿಯಂತರ ಯತೀಶ್ರಾಜ್, ಕೋಲಾರದ ಇ.ಎ. ಅಸೋಸಿಯೇಟ್ ಸೌತ್ ಪ್ರೈವೇಟ್ ಲಿಮಿಟೆಡ್ ಸಂದೀಪ್ ಕುಮಾರ್, ಎನ್. ಎಚ್ಎಐ ಯೋಜನಾ ನಿರ್ದೇಶಕ ಶ್ರೀನಿವಾಸ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಅವೈಜ್ಷಾನಿಕ ಹಂಪ್ಸ್ ತೆರವುಗೊಳಿಸಿ: ಡೀಸಿ ರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡುವ ವ್ಯಕ್ತಿಗಳನ್ನು ಗುರುತಿಸಲು ಸಿಸಿಟೀವಿ ಅಳವಡಿಸಿ ಹಾಗೂ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹೊಸಕೋಟೆ ವಲಯದಲ್ಲಿ ಈಗಾಗಲೇ ಸಿಸಿಟೀವಿ ಅಳವಡಿಸಲಾಗಿದ್ದು, ಉಳಿದ ತಾಲೂಕುಗಳಲ್ಲಿ ಯೂ ಸಿಸಿಟಿವಿ ಅಳವಡಿಸಬೇಕು.
ರಸ್ತೆಯ ಸಿಗ್ನಲ್ಗಳಲ್ಲಿ ಕಂಡುಬರುವ ಬ್ಲಿಂಕರ್ಸ್ಗಳ ತೀವ್ರತೆ ಕಡಿಮೆಗೊಳಿಸಲು ರೇಡಿಯಂಗಳನ್ನು ಅಳವಡಿಸಬೇಕು ಹಾಗೂ ಟ್ರಕ್ಟರ್ಮಿನಲ್ ನಿರ್ಮಿಸಿ, ಅವೈಜ್ಞಾನಿಕ ರಸ್ತೆ ಹಂಪ್ಸ್ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.