ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ
ಗ್ರಾಮದ ಸುತ್ತಲೂ ಮಹಿಳೆಯರು ಕಳಸವನ್ನು ಹಿಡಿದು ಮೆರವಣೆಯಲ್ಲಿ ಸಾಗಿದರು.
Team Udayavani, May 10, 2022, 6:05 PM IST
ದೇವನಹಳ್ಳಿ: ತಾಲೂಕಿನ ಸೀಕಾಯನಹಳ್ಳಿ ಗ್ರಾಮದ ಶನೇಶ್ವರ ಸ್ವಾಮಿ ದೇವರ ಬಿಂಬ ಹಾಗೂ ಗೋಪುರ ಪ್ರತಿಷ್ಟಾಪನಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಶನೇಶ್ವರ ಸ್ವಾಮಿ ದೇವಾಲಯ ಸುಮಾರು ವರ್ಷಗಳಿಂದ ಮನೆಯಲ್ಲೇ ಪೂಜೆ ನಡೆಯುತ್ತಿತ್ತು. ಅರ್ಚಕ ಕುಮಾರ್ ಒಂದು ಗುಂಟೆ ಜಾಗವನ್ನು ಖರೀದಿಸಿಕೊಂಡು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದೊಂದಿಗೆ ದೇವಾಲಯ ನಿರ್ಮಾಣ ಮಾಡಲಾಗಿದೆ.
ಶನೇಶ್ವರ ಸ್ವಾಮಿ ಸ್ಥಿರಬಿಂಬ ಸ್ಥಾಪನೆ, ಸೂತ್ರ ಬಂಧನ, ನಯನ್ಮೋಮಿಲನ ಹೋಮ, ನಯನ್ಮೋಮಿಲನ ಪ್ರಾಣ ಪ್ರತಿಷ್ಟೆ, ಹೋಮ ಪಂಚಗವ್ಯ ಸ್ನಪನ ಇತರೆ ಪೂಜಾ ಕಾರ್ಯಗಳು ನೆರವೇರಿದವು. ಗ್ರಾಮದ ಸುತ್ತಲೂ ಮಹಿಳೆಯರು ಕಳಸವನ್ನು ಹಿಡಿದು ಮೆರವಣೆಯಲ್ಲಿ ಸಾಗಿದರು.
ದೇವರನ್ನು ನಂಬಿದರೆ ಕೈ ಬಿಡಲ್ಲ:ಸೀಕಾಯನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಶ್ರೀಧರ್ ಗೌಡ ಮಾತನಾಡಿ, ಪ್ರತಿ ಗ್ರಾಮದಲ್ಲೂ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆದಾಗ ಶಾಂತಿ ಹಾಗೂ ನೆಮ್ಮದಿ ದೊರೆಯುವುದು. ದೇವರನ್ನು ನಂಬಿದರೆ ಕೈ ಬಿಡುವುದಿಲ್ಲ ಎಂದರು.
ಆಧುನಿಕತೆ ಬೆಳೆದಂತೆ ಒತ್ತಡದ ಜೀವನ:
ಗ್ರಾಪಂ ಉಪಾಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಆಧುನಿಕತೆ ಬೆಳೆದಂತೆ ಪ್ರತಿಯೊಂದು ಕುಟುಂಬದಲ್ಲಿ ಒತ್ತಡ ಜೀವನ ಸಾಗುತ್ತಿದೆ. ಮನುಷ್ಯ ತನ್ನ ನಿತ್ಯ ಜೀವನದ ಗೊಂದಲದ ಬದುಕಿನ ನಡುವೆ ನೆಮ್ಮದಿಯನ್ನು ಕಾಣಲು ದೇವರ ಮೊರೆ ಹೋಗಬೇಕು. ಶನೇಶ್ವರ ಸ್ವಾಮಿ ದೇವರಲ್ಲಿ ಪ್ರಾರ್ಥಿಸುವುದೇನೆಂದರೆ ರೈತರಿಗೆ ಮಳೆಯನ್ನು ಕರುಣಿಸಿ ಸಂವೃದ್ಧಿ ಜೀವನ ನಡೆಸುವಂತೆ ಆಗಬೇಕು ಎಂದರು. ದೇವಾಲಯದ ಅರ್ಚಕ ಎಸ್.ಪಿ.ಕುಮಾರ್, ಮುಖಂಡರಾದ ಕೃಷ್ಣಮೂರ್ತಿ, ಗಂಗಾಧರ್, ಧನಂಜಯ್, ಬಾಬು, ಅಶ್ವಥ್ ಇದ್ದರು.