ಅರಣ್ಯಾಧಾರಿತ ಮರಗಳಿಂದ ಆರ್ಥಿಕಾಭಿವೃದ್ಧಿ
Team Udayavani, Sep 5, 2020, 12:52 PM IST
ನೆಲಮಂಗಲ: ರೈತರು ವ್ಯವಸಾಯದ ಜತೆಗೆ ಅರಣ್ಯಾಧಾರಿತ ಮರಗಳನ್ನು ಬೆಳೆಯುವ ಮೂಲಕ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ ಎಂದು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ಮೋಹನ್ ಸಲಹೆ ನೀಡಿದರು.
ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ರೈತ ವಿಜಯಶಂಕರ್ ತೋಟದಲ್ಲಿ ಬೆಳೆದಿರುವ ಮಹಾಘನಿ ಗಿಡಗಳನ್ನು ವೀಕ್ಷಣೆ ಮಾಡುವ ಮೂಲಕ ನಡುತೋಪುಗಳ ಪರಿಶೀಲಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ, ಅರಣ್ಯ ಇಲಾಖೆಯಿಂದ ಮಹಾಘನಿ ಬೆಳೆಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಮೂಲಕ 3 ವರ್ಷಕ್ಕೆ 120 ರೂ.ನೀಡಲಿದೆ. ಕೇಂದ್ರ ಸರ್ಕಾರ ಅರಣ್ಯಧಾರಿತ ಮರಗಳಿಗೆ ಪ್ರೋತ್ಸಾಹ ಧನವನ್ನು ಶೇಕಡಾವಾರು ಉತ್ತಮವಾಗಿ ನಾಲ್ಕು ವರ್ಷಗಳ ಕಾಲ ನೀಡುತ್ತಿದೆ. ಮಹಾಘನಿ ಮತ್ತು ಶ್ರೀಗಂಧ ಮರಗಳು ಬೆಳೆಯುವುದು ಅರಣ್ಯ ಉಳಿಸುವ ಜೊತೆಗೆ ರೈತರ ಆರ್ಥಿಕ ಮಟ್ಟ ಸುಧಾರಿಸಲು ಅನುಕೂಲವಾಗಿದೆ ಎಂದರು.
ನಡುತೋಪು ವೀಕ್ಷಣೆ: ಶಿವಗಂಗೆ ಹಾಗೂ ಕೆರೆಕತ್ತಿಗನೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಪೋಷಣೆ ಮಾಡುತ್ತಿರುವ ನಡುತೋಪುಗಳನ್ನು ಪರಿಶೀಲನೆ ಮಾಡಿ ಉತ್ತಮವಾಗಿ ಪೋಷಣೆ ಮಾಡುವಂತೆ ಸೂಚನೆ ನೀಡಿದರು. ಹತ್ತು ವರ್ಷದಲ್ಲಿ ಇದೇ ಮೊದಲು: ರಾಜ್ಯಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹತ್ತು ವರ್ಷಗಳ ನಂತರ ತಾಲೂಕಿಗೆ ಭೇಟಿ ನೀಡಿದ್ದು, ಅಧಿಕಾರಿಗಳಲ್ಲಿ ಆಚ್ಚರಿಯಾದರೆ ರೈತರಿಗೆ ಸಂತೋಷವಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಅನಿತಾ ಅರೇಕಲ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾದೇಶಿಕ ಅರಣ್ಯ ಇಲಾಖೆಯ ಅಂಥೋನಿ ಮರಿಯಪ್ಪಾ, ವಲಯ ಅರಣ್ಯಾಧಿಕಾರಿ ಲಷ್ಕರ್ ನಾಯಕ್, ವಲಯ ಅರಣ್ಯಾಧಿಕಾರಿ ರುದ್ರಮೂರ್ತಿ, ಉಪಅರಣ್ಯಾಧಿಕಾರಿ ಗುರುಮೂರ್ತಿ, ರೈತರಾದ ಆರ್.ರಂಗ ನಾಥ್, ಪ್ರಶಾಂತ್, ರಾಮಸ್ವಾಮಿ, ರಾಜಣ್ಣ ಇದ್ದರು