ಗ್ರಾಮಾಭಿವೃದ್ಧಿಯಿಂದ ಆರ್ಥಿಕ ಚೈತನ್ಯ
Team Udayavani, Sep 14, 2020, 12:39 PM IST
ದೇವನಹಳ್ಳಿ: ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕ ವಿಶ್ವನಾಥ್ ತಿಳಿಸಿದರು.
ನಗರದ ಹಳೇ ಬಸ್ ನಿಲ್ದಾಣದ ಫರ್ಹಾನ್ ಡಿಟಿಪಿ ಸೆಂಟರ್ನ ಲಲಿತ ಚೇತನ್ ನಿವಾಸದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನೂತನ ಸೂರ್ಯ ಪ್ರಗತಿ ಬಂಧು ಮಹಿಳಾ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸ್ವಾವಲಂಬನೆ ಬದುಕು ನಡೆಸಿ, ಆರ್ಥಿಕ ಮಟ್ಟ ಸುಧಾರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ಯೋಜನೆಗಳನ್ನು ಮನೆ ಬಾಗಿಲಿಗೆ ತಂದಿದೆ ಎಂದು ತಿಳಿಸಿದರು.
ಮಹಿಳೆಯರು ನಾಲ್ಕು ಗೋಡೆಯ ಮಧ್ಯೆಯೇ ಇದ್ದು, ತಮ್ಮ ಕೈಯಲ್ಲಿ ಆಗುವ ಕೆಲಸಗಳನ್ನು ಮಾಡಿಕೊಂಡು ನೀಡಿರುವ ಸಾಲದಿಂದ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಯೋಜನೆ. ನಿಮ್ಮ ಸಂಘದ ಹೆಸರು ಸೂರ್ಯ ಇರುವುದರಿಂದ ಸೂರ್ಯನಂತೆ ವಿಜೃಂಭಿಸಲಿ ಎಂದರು.ಸೇವಾ ಪ್ರತಿನಿಧಿ ಸುಷ್ಮಾ, ಸಂಘದ ಪದಾಧಿಕಾರಿಗಳಾದ ಶಾಜೀನ್ ಹೈದರ್, ಶಶಿಕಲಾ, ಎಸ್.ಅಕ್ಷಾ, ಜುಲೇಖ ಪಾಚಲ್ಸಾಬ್, ಶೈಲಾಕೆ.ಬಿ.ಬಾಬು, ಲಲಿತಾ, ನಾಜೀಮಾ ಮತ್ತಿತರರಿದ್ದರು.
………………………………………………………………………………………………………………………………………………………
ಪೌಷ್ಟಿಕ ಆಹಾರದಿಂದ ಆರೋಗ್ಯವಂತ ಸಮಾಜ : ನೆಲಮಂಗಲ: ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಸಂಕಲ್ಪ ದೃಢವಾದರೆ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಆರೋಗ್ಯವಂತರನ್ನಾಗಿಸಲು ಸಹಕಾರಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲತಾ ಸಲಹೆ ನೀಡಿದರು.
ತಾಲೂಕಿನ ಹೊನ್ನಗಂಗಯ್ಯನ ಪಾಳ್ಯದ ಅಂಗನವಾಡಿ ಆವರಣದಲ್ಲಿ ಆಯೋಜಿಸಲಾಗಿದ್ದ ಪೋಷಣ್ ಮಾಸಾಚರಣೆ ಅಭಿಯಾನದಲ್ಲಿ ಮಾತನಾಡಿದರು. ಅಪೌಷ್ಟಿಕತೆಯುಳ್ಳ ಮಕ್ಕಳ ಗುರುತಿಸುವಿಕೆ ಅವರಿಗೆ ಚಿಕಿತ್ಸೆ ನೀಡುವುದು, ಕೈತೋಟಗಳ ಅಭಿವೃದ್ಧಿ ಜತೆ ಮಕ್ಕಳ ಬಲ ಹೆಚ್ಚಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು ಸಲಹೆ ನೀಡಲಿದ್ದಾರೆ. ತಾಲೂಕಿನಲ್ಲಿ ಅಪೌಷ್ಟಿಕತೆಯುಳ್ಳ 3 ಮಕ್ಕಳಿದ್ದು ಮುಂದಿನ ದಿನಗಳಲ್ಲಿ ಹೆಚ್ಚಾಗದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ವರ್ಷದಂತೆ ಪೋಷಣ್ ಮಾಸವನ್ನು ಆಚರಿಸಲಾಗುತ್ತಿದ್ದು ಕೋವಿಡ್-19 ಸಮಯದಲ್ಲಿ ಡಿಜಿಟಲ್ ವಿಧಾನದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮೇಲ್ವಿಚಾರಕಿ ಪುಷ್ಟಾ ಮಾತನಾಡಿ, ಪ್ರತಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಮಾಡಲಾಗುತ್ತಿದ್ದು ಕೈತೋಟಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಕೋವಿಡ್ ಸಮಸ್ಯೆ ಇರುವುದರಿಂದ ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಜಾಗೃತಿ ಮೂಡಿಸಲಾಗಿದೆ ಎಂದರು. ಕೈತೋಟ ಅಭಿವೃದ್ಧಿ: ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈತೋಟಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತೆ ಸಲಹೆ ನೀಡಲಾಯಿತು. ಈ ವೇಳೆ ಮೊದಲಕೋಟೆ ವೃತ್ತದ ವೈದ್ಯೆ ಡಾ.ಅರುಂಧತಿ, ಅಂಗನವಾಡಿ ಕಾರ್ಯಕರ್ತೆ, ಆಶಾಕಾರ್ಯಕರ್ತೆಯರು ಇದ್ದರು.