ಯುವಜನತೆ ಪರಿಸರ ಸಂರಕ್ಷಣೆ ಜವಾಬ್ದಾರಿ ವಹಿಸಿ
Team Udayavani, Aug 24, 2017, 1:45 PM IST
ನೆಲಮಂಗಲ: ಯುವ ಜನತೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಅರಣ್ಯನಾಶದ ಫಲದಿಂದಾಗಿ ಸಕಾಲದಲ್ಲಿ ಮಳೆಬೆಳೆಯಾಗುತ್ತಿಲ್ಲ, ಋತುಗಳಲ್ಲಿ ವ್ಯತ್ಯಾಸಗಳಾಗುತ್ತಿದೆ ಎಂದು ಉಪ ಪ್ರಾಂಶುಪಾಲ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎನ್ಸಿಸಿ 21 ಕರ್ನಾಟಕ ಬೆಟಾಲಿಯನ್ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತಾನಾಡಿದರು. ಅಜ್ಜಂದಿರು ಹಾದಿ ಬದಿಯಲ್ಲಿ ಹಾಗೂ ಹೊಲ ಗದ್ದೆಗಳ ಬದುವಿನಲ್ಲಿ ಬೃಹತ್ ಮರಗಳನ್ನು ಬೆಳೆಸುವ ಮೂಲಕ ನಮಗೆ ಒಳ್ಳೆಯ ಪರಿಸರ ಕೊಡುಗೆಯಾಗಿ ನೀಡಿದ್ದಾರೆ. ಸಕಾಲಕ್ಕೆ ಮಳೆಯಾಗಲು ಕಾರಣರಾಗಿದ್ದಾರೆ. ಆ ಮೂಲಕ ಆರೋಗ್ಯವಂತ ಸಮಾಜಕ್ಕೆ ಭದ್ರವಾದ ಬುನಾದಿ ಹಾಕಿ ಆದರ್ಶ ಪ್ರಾಯರಾಗಿದ್ದಾರೆ. ಈಗ ಅಭಿವೃದ್ಧಿ ನೆಪದಲ್ಲಿ ಹೆದ್ದಾರಿಯಲ್ಲಿನ ವೃಕ್ಷಗಳ ಮಾರಣ ಹೋಮ ನಡೆಯುತ್ತದೆ. ದೀರ್ಘ ಕಾಲ ಬಾಳುವ, ಗಾಳಿ ಹಾಗೂ ನೆರಳು ನೀಡುವ ಮರಗಳನ್ನು ಕಡ್ಡಾಯವಾಗಿ ಬೆಳೆಸಬೇಕು. ಮರಗಳಲ್ಲಿ ಆಶ್ರಯ ಪಡೆಯುವ ಪಕ್ಷಿಗಳು ಕ್ರಿಮಿ ಕೀಟಗಳನ್ನು ತಿನ್ನುವ ಮೂಲಕ ಮಾರಕ ರೋಗಗಳನ್ನು ತಡೆಯುತ್ತವೆ. ಕೃತಕ ಕಾಡು ನಿರ್ಮಾಣ ನಮ್ಮ ಮುಂದಿನ ಗುರಿಯಾಗಿದ್ದು, ಔಷಧೀಯ ಗುಣಗಳ ಮರ ಹಾಗೂ ಗಿಡಗಳನ್ನು ನೆಟ್ಟು ಪೋಷಿಸಿ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಸಾಮಾಜಿಕ ಜವಾಬ್ದಾರಿ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕೊಡುಗೆ ನೀಡಬೇಕು. ಪರಿಸರ ಜೊತೆ ಬೆಸೆದುಕೊಂಡಿರುವ ಮನುಷ್ಯ ಪರಿಸರದಿಂದ ಬೇರ್ಪಟ್ಟರೆ ಅವನತಿ ಖಂಡಿತ ಎಂದು ಎಚ್ಚರಿಸಿದರು. ಎನ್ಸಿಸಿ ಆಧಿಕಾರಿ ಎಚ್.ಕೆ.ನಾಗೇಶ್ ಮಾತಾನಾಡಿ, ಪ್ರತಿಯೊಬ್ಬರೂ ಮರ ಬೆಳೆಸಿ, ನಾಡು
ಉಳಿಸಲು ಮುಂದಾಗಬೇಕು. ನೀರನ್ನು ಮಿತವಾಗಿ ಬಳಸಬೇಕು. ಇಂಧನ ಅಪವ್ಯಯ ಮಾಡಬಾರದು. ಅಗತ್ಯವಿದ್ದಾಗ ಮಾತ್ರ ವಿದ್ಯುತ್ ದೀಪಗಳನ್ನು ಉರಿಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿ ತಾವು ಕಲಿತದ್ದನ್ನು ಪೋಷಕರಿಗೆ ಹಾಗೂ ನೆರೆ ಹೊರೆಯವರಿಗೆ ತಿಳಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಪ್ರತಿಯೊಬ್ಬರ ಹೊಣೆ. ಹಾಗಾಗಿ ಪರಿಸರಕ್ಕೆ ಪ್ರತಿಯೊಬ್ಬರ ಕೊಡುಗೆ ಅತ್ಯಮೂಲ್ಯ. ಜಾಗತಿಕ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮೊದಲ ಆದ್ಯತೆಯಾಗಿದೆ. ಆದರೆ ಪರಿಸರ ಕಾಳಜಿ ಸಸಿ ನೆಡುವುದಕಷ್ಟೇ ಸೀಮಿತವಾಗಿರದೇ ಸಂರಕ್ಷಿಸಿ ಪೋಷಿಸುವುದಾಗಿದೆ. ಪರಿಸರ ಮಾಲಿನ್ಯದಿಂದಾಗಿ ಇಂದು ಜಗತ್ತು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂಕಟದಿಂದ ಮನುಷ್ಯ ಪಾರಾಗಬೆಕಾದರೆ ಪ್ರತಿಯೊಬ್ಬರು ತಮ್ಮ ಮನೆ-ಹೊಲ-ಗದ್ದೆ ಇನ್ನಿತರ ಸ್ಥಳದಲ್ಲಿ ಮರಗಿಡಗಳನ್ನು
ಬೆಳೆಸಬೆಕಾಗಿದೆ. ಮುಂದೊಂದು ದಿನ ಇಡೀ ಮನಕುಲ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದರು. ಈ ವೇಳೆ ಬೆಟಾಲಿಯನ್ ಅಧಿಕಾರಿ ದೇವೆಂದ್ರ ಸಿಂಗ್, ಶಿಕ್ಷಕರಾದ ಮಂಜುನಾಥ್, ಮೋಹನ್, ಭಾರತೀ, ಜಯಲಕ್ಷ್ಮೀ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.