ಫ್ಲೆಕ್ಸ್, ಬ್ಯಾನರ್ ತೆರವಿಗೆ ಸೂಚನೆ
Team Udayavani, Mar 13, 2019, 7:50 AM IST
ನೆಲಮಂಗಲ: ಚುನಾವಣೆ ನೀತಿಸಂಹಿತೆ ಜಾರಿಯಾದ ತಕ್ಷಣ ಫ್ಲೆಕ್ಸ್ ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರು, ಫ್ಲೆಕ್ಸ್ಗಳನ್ನು ತೆರವುಗೊಳಿಸಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯಾಗಿ 24 ಗಂಟೆಗಳಾದರೂ ತಾಲೂಕಿನಾದ್ಯಂತ ರಾಜಕೀಯ ಮುಖಂಡರ ಭಾವಚಿತ್ರ ಹಾಗೂ ಸರ್ಕಾರದ ಸಾಧನೆಯ ಫ್ಲೆಕ್ಸ್ಗಳನ್ನು ತೆರವುಗೊಳಿಸದಿರುವ ಬಗ್ಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇದ್ದರೂ ಬ್ಯಾನರ್ ತೆರವಿನ ಬಗ್ಗೆ ಗಮನ ಹರಿಸದ ಅಧಿಕಾರಿಗಳ ವರ್ತನೆಯಿಂದ ಬೇಸರಗೊಂಡ ಜಿಲ್ಲಾಧಿಕಾರಿ ಕರೀಗೌಡರು, ಬೆಳ್ಳಂಬೆಳ್ಳಗ್ಗೆಯೇ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಅಲ್ಲದೇ, ಸ್ವತಃ ಸ್ಥಳ ಪರಿಶೀಲಿಸಿ ಜಾಹಿರಾತು ಫಲಕ, ಬಸ್ ನಿಲ್ದಾಣದಲ್ಲಿ ಹಾಕಲಾಗಿದ್ದ ಜನಪ್ರತಿನಿಧಿಗಳ ಭಾವಚಿತ್ರಗಳು, ಇಂದಿರಾ ಕ್ಯಾಂಟೀನ್ನಲ್ಲಿನ ಇಂದಿರಾ ಗಾಂಧಿ ಫೋಟೋಗಳನ್ನು ಮುಚ್ಚಿಸಿದ್ದಾರೆ. ಕೆಲವು ಫ್ಲೆಕ್ಸ್ಗಳನ್ನು ತೆರವುಗೊಳಿಸಿದರು. ತಾಲೂಕಿನಲ್ಲಿ ಮಂಕಾಗಿದ್ದ ಚುನಾವಣಾಧಿಕಾರಿಗಳನ್ನು ಎಚ್ಚರಿಸಿದ ಜಿಲ್ಲಾಧಿಕಾರಿಗಳು, ಚುನಾವಣೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ.
ಮಂಗಳವಾರ ಚುನಾವಣೆ ನೀತಿ ಸಂಹಿತೆ ಪಾಲಿಸದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದ್ದನ್ನು ಅರಿತು ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತಾಲೂಕಿನಾದ್ಯಂತ ಸಂಚರಿಸಿ ಚೆಕ್ ಪೋಸ್ಟ್ಗಳು, ಫ್ಲೆಕ್ಸ್ ತೆರವಾಗಿರುವುದನ್ನು ಪರಿಶೀಲಿಸುವುದರೊಂದಿಗೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಚೆಕ್ಪೋಸ್ಟ್ಗಳನ್ನು ಪರಿಶೀಲಸಿ, ಯಾವುದೇ ಅಹಿತಕರಘಟನೆಗಳು ಸಂಭವಿಸದಂತೆ ಕಾಳಜಿ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.