ಕೈ ಹಿಡಿದ ರಾಗಿ ಬೆಳೆ: ರೈತರಲ್ಲಿ ಹರ್ಷ
Team Udayavani, Jan 25, 2018, 1:41 PM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮುಂಗಾರು ಹಂಗಾಮು ಮುಗಿದಿದ್ದು, ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ರೈತರಿಗೆ ಸಮಾಧಾನ ತಂದಿದೆ. ರಾಗಿ, ಜೋಳಗಳ ಬೆಳೆ ಕಟಾವಿಗೆ ಬಂದಿದ್ದು, ರೈತರು ಕಣ ಮಾಡುವುದರಲ್ಲಿ ನಿರತರಾಗಿದ್ದಾರೆ.
ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ತಾಲೂಕಿನಲ್ಲಿ ಒಟ್ಟಾರೆ ಡಿಸೆಂಬರ್ ಅಂತ್ಯದ ವೇಳೆಗೆ 757 ಮಿಮೀ ಮಳೆ ಆಗಬೇಕಿದ್ದು, 1091ಮಿಮೀ ಮಳೆಯಾಗಿದೆ. ತಾಲೂಕಿನಲ್ಲಿ ಕಸಬಾ ಹೋಬಳಿಯಲ್ಲಿ 1026 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 1139 ಮಿಮೀ, ಸಾಸಲು ಹೋಬಳಿಯಲ್ಲಿ 12095 ಮಿಮೀ, ತೂಬಗೆರೆ ಹೋಬಳಿಯಲ್ಲಿ 1119 ಮಿಮೀ, ಮಧುರೆ ಹೋಬಳಿಯಲ್ಲಿ 1063 ಮಿಮೀ ಸೇರಿ ತಾಲೂಕಿನಲ್ಲಿ ಸರಾಸರಿ 1085.8 ಮಿಮೀ ಮಳೆಯಾಗಿದ್ದು, ವಾಡಿಕೆ ಮಳೆಗಿಂತ 328 ಮಿಮೀ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ 651.8 ಮಿಮೀ ಮಳೆಯಾಗಿತ್ತು.
ರಾಗಿ ಹೆಚ್ಚು, ಜೋಳ ಕಡಿಮೆ: ತಾಲೂಕಿನ ಹೋಬಳಿಗಳಲ್ಲಿ 2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಬೆಳೆ ಪ್ರಗತಿಯನ್ವಯ ಅಂತಿಮ ಬಿತ್ತನೆಯಲ್ಲಿ ಗುರಿ ಮುಟ್ಟಿ ಶೇ.97.9 ಪ್ರಗತಿ ಸಾಧಿಸಿದೆ. ಈ ಹಿಂದೆ ತಾಲೂಕಿನಲ್ಲಿ ಜೋಳ ಹೆಚ್ಚು ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ರಾಗಿ ಬೆಳೆ ಹೆಚ್ಚಾಗಿರುವುದು. ರೈತರಿಗೆ ಮೇವಿನ
ಬವಣೆ ನೀಗಿಸುವ ವಿಶ್ವಾಸವಿದೆ.
ತಾಲೂಕಿನಲ್ಲಿ ರಾಗಿ 9,140 ಹೆಕ್ಟೇರ್ ಪ್ರದೇಶದ ಗುರಿ ಹೊಂದಲಾಗಿದ್ದು, 12,250 ಹೆಕ್ಟೇರ್ ಗುರಿ ತಲುಪಿದೆ. ಮುಸುಕಿನ ಜೋಳ 10,200 ಹೆಕ್ಟೇರ್ ಪ್ರದೇಶದ ಗುರಿ ಹೊಂದಲಾಗಿದ್ದು, 7,211 ಹೆಕ್ಟೇರ್ ಗುರಿ ತಲುಪಿದೆ.
ಭತ್ತ, ರಾಗಿ, ಮುಸುಕಿನ ಜೋಳ, ತೃಣಧಾನ್ಯ, ಏಕದಳ ತೊಗರಿ, ಆಲಸಂದೆ, ಅವರೆ, ಉದ್ದು, ಹೆಸರು, ಹುರುಳಿ (ದ್ವಿದಳ), ನೆಲೆಗಡಲೆ, ಹರಳು, ಸಾಸುವೆ, ಹುಚ್ಚೆಳ್ಳು (ಎಣ್ಣೆಕಾಳು), ಮೇವಿನ ಜೋಳ, ಪಾಪ್ ಕಾರ್ನ್ ಸೇರಿದಂತೆ ಎಲ್ಲಾ ಬೆಳೆಗಳ ಗುರಿ 21,830 ಹೆಕ್ಟೇರ್ಗಳಾಗಿದ್ದು, 21,373 ಹೆಕ್ಟೇರ್ ಗುರಿ ತಲುಪಿದೆ.
ಹಿಂಗಾರು ಹಂಗಾಮು: ತಾಲೂಕಿನ ಐದು ಹೋಬಳಿಗಳಲ್ಲಿ 2017-18ನೇ ಸಾಲಿನ ಹಿಂಗಾರು ಹಂಗಾಮಿನ ಕೃಷಿ ಇಲಾಖೆ ಬೆಳೆ ಪ್ರಗತಿಯನ್ವಯ ರಾಗಿ, ಮುಸುಕಿನ ಜೋಳ, ಗೋಧಿ, ಹುರುಳಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ಎಲ್ಲಾ ಬೆಳೆಗಳ ಗುರಿ 700 ಹೆಕ್ಟೇರ್ ಗಳಾಗಿದ್ದು, 341ಹೆಕ್ಟರ್ಗಳ ಗುರಿ ಮುಟ್ಟಿದೆ.
ಜೋಳಕ್ಕಿಲ್ಲ ಬೆಲೆ: ರೈತರು, ರಾಗಿ ಹುಲ್ಲಿಗಿಂತ ಜೋಳದ ತೆನೆಗಳನ್ನೇ ಹೆಚ್ಚಾಗಿ ಪಶುಗಳಿಗೆ ನೀಡುತ್ತಿದ್ದಾರೆ. ರಾಗಿಗೆ ಹೋಲಿಸಿದರೆ ಮುಸುಕಿನ ಜೋಳ ಬೆಳೆಯುವುದು ಸುಲಭ. ಇದಲ್ಲದೇ ಕಳೆದ ಬಾರಿ ಜೋಳಕ್ಕೆ ಉತ್ತಮ ಬೆಲೆ ದೊರಕಿತ್ತು. ಆದರೆ, ಈ ಬಾರಿ ಜೋಳದ ಬೆಲೆ ಕಡಿಮೆಯಾಗಿದೆ.
ಡಾ.ಸ್ವಾಮಿನಾಥನ್ ವರದಿಯಂತೆ ರಾಗಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಕೆಎಂಎಫ್ ತಯಾರಿಸುವ ಪಶು ಆಹಾರಕ್ಕೆ ಬಳಕೆ ಮಾಡಲು ಮೆಕ್ಕೆಜೋಳವನ್ನು ಬೇರೆ ದೇಶಗಳಿಂದ ತರಿಸಲಾಗುತ್ತಿದೆ. ಇದಕ್ಕೆ ಬದಲಾಗಿ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ ಮಾಡಿ ಆಶು ಆಹಾರ ತಯಾರಿಕೆಗೆ ನೀಡಬೇಕು.
●ಸತೀಶ್, ರೈತ ಮುಖಂಡ