ದಿನ್ನೆ ಸೋಲೂರಲ್ಲಿ ಜೋಡಿ ವೀರಗಲ್ಲು ಪತ್ತೆ
Team Udayavani, Aug 4, 2021, 3:31 PM IST
ದೇವನಹಳ್ಳಿ: ತಾಲೂಕಿನ ದಿನ್ನೆ ಸೋಲೂರು ಗ್ರಾಮದಲ್ಲಿ ಜೋಡಿ ವೀರಗಲ್ಲು ಶಿಲೆಗಳಿರುವ ಗುಡಿಯೊಂದು ಪತ್ತೆಯಾಗಿದೆ. ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ವೀರಗಲ್ಲು, ಮಾಸ್ತಿಗಲ್ಲುಗಳು ಪತ್ತೆಯಾಗುತ್ತಿದ್ದು, ಜಿಲ್ಲಾಡಳಿತವು ಇವುಗಳ ಸಂರಕ್ಷಣೆ ಮಾಡಿ ವಸ್ತು ಸಂಗ್ರಹಾಲಯದಲ್ಲಿ ಇಡಬೇಕು. ಪುರತತ್ವ ಇಲಾಖೆ ದೊರೆತಿರುವ ಶಾಸನ ಮತ್ತು ವೀರಗಲ್ಲುಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು ಎಂದು ಇತಿಹಾಸ ತಜ್ಞರು ಒತ್ತಾಯಿಸಿದ್ದಾರೆ.
ಜೀರ್ಣೋದ್ದಾರಗೊಳಿಸುವ ಚಿಂತನೆ : ಗ್ರಾಪಂ ಸದಸ್ಯ ಕೆ.ಶ್ರೀನಿವಾಸ್ ಮಾತನಾಡಿ, ಹಿರಿಯರ ಕಾಲದಿಂದಲೂ ಈ ವೀರಗಲ್ಲು ಗುಡಿ ಇತ್ತು. ಎಲ್ಲವೂ ನಶಿಸಿಹೋಗಿದೆ. ವೀರಗಲ್ಲು ಗುಡಿಯನ್ನು ಜೀರ್ಣೋದ್ದಾರಗೊಳಿಸುವ ಚಿಂತನೆ ನಡೆಸಲಾಗುತ್ತಿದೆ. ಪುರಾತನ ಕಾಲದ ಗುಡಿಯಲ್ಲಿ ಅನ್ನದಾನ, ಪರ್ವ ಹೀಗೆ ಹಲವು ರೀತಿಯಲ್ಲಿ ಪೂಜೆಗಳು ನಡೆಯುತ್ತಿದ್ದವು ಎಂದು ಹಿರಿಯರು ಹೇಳುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ಪೀಳಿಗೆಗೆ ವೀರಗಲ್ಲು, ಮಾಸ್ತಿಗಲ್ಲು ಶಾಸನಗಳ ಬಗ್ಗೆ ತಿಳಿಸಲು ಸಹಕಾರಿಯಾಗುತ್ತದೆ ಎಂದರು.
ಶಾಸನಗಳು ಅತ್ಯಮೂಲ್ಯ ದಾಖಲೆ: ಇತಿಹಾಸ ಸಂಶೋಧಕ ಹಾಗೂ ಸಾಹಿತಿ ಬಿಟ್ಟಸಂದ್ರ ಬಿ.ಜಿ.ಗುರುಸಿದ್ದಯ್ಯ ಮಾತನಾಡಿ, ಶಾಸನಗಳು ಹಿಂದಿನ ಕಾಲದ ಜನರ ಬದುಕಿನ ಕುರುಹು. ಶಿಲಾ ಶಾಸನಗಳು ಗತಕಾಲದ ಇತಿಹಾಸದ ಅತ್ಯಮೂಲ್ಯ ದಾಖಲೆಗಳಾಗಿವೆ. ದೇಶದಲ್ಲಿ ಹೆಚ್ಚು ಶಾಸನಗಳು ದೊರೆಯುವುದು ತಮಿಳುನಾಡಿನಲ್ಲಿ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಶಾಸನಗಳು ಆಯಾ ಕಾಲದ ಸಾಮಾಜಿಕ ಬದುಕಿನ
ಕೈಕನ್ನಡಿ. ಪುರಾತತ್ವ ಇಲಾಖೆಗೆ ಗುರಿತಿಸಿ ಸಂರಕ್ಷಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಇತಿಹಾಸ ನಶಿಸಿ ಹೋಗುವುದರಲ್ಲಿ ಎರಡು ಮಾತಿಲ್ಲ. ಎಂದು ಹೇಳಿದರು.
ಇದನ್ನೂ ಓದಿ:ಡಬಲ್ ಇಂಜಿನ್ ಸರ್ಕಾರದಿಂದ ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ
ಮುಖಂಡ ನಾರಾಯಣಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಯುದ್ಧ ಮಾಡಿ ವೀರಸಾವು ಹೊಂದಿದ ನೆನೆಪಿನಲ್ಲಿ ವೀರಗಲ್ಲು ಸ್ಥಾಪಿಸುತ್ತಿದ್ದರು. ಇದರ ಜ್ಞಾಪಕಾರ್ಥವಾಗಿ ಸುಮಾರ ವರ್ಷಗಳ ಹಿಂದೆಯೇ ವೀರಗಲ್ಲು ಗುಡಿ ಸ್ಥಾಪಿಸಿದ್ದು, ಇದಕ್ಕೆ ಪೂಜೆ ನೆರವೇರಿಸುತ್ತಿದ್ದರು ಎಂದು ಹೇಳಿದರು. ಗ್ರಾಪಂ ಸದಸ್ಯ ಕೆ.ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಮಣ್ಣಿನಲ್ಲಿ ಮರೆಯಾಗಿದ್ದ ವೀರಗಲ್ಲು ದುರಸ್ತಿಗೊಳಿಸಿದರು.