ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ
Team Udayavani, Oct 23, 2021, 4:52 PM IST
ವಿಜಯಪುರ: ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರನ್ನು ಹೊಸಕೋಟೆ ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಿಬೆಲೆ ರಸ್ತೆಯಲ್ಲಿರುವ ರಾಘವೇಂದ್ರ ಚಿತ್ರ ಮಂದಿರ ಬಳಿ ಅ.15 ಮತ್ತು 20 ರಂದು ಮಧ್ಯಾಹ್ನ 3.30_ರ ಸಮಯದಲ್ಲಿ ಹೊಸಕೋಟೆ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕರಾದ ಎಸ್.ಆರ್ ಮಂಜುನಾಥ್ ಖಚಿತ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಆಟೋ ನಿಲ್ಲಿಸಿಕೊಂಡು ಮಾದಕ ವಸ್ತುವಾದ ಗಾಂಜಾವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ರಸ್ತೆಯ ಪಕ್ಕ ಇದ್ದಿದ್ದು ತಿಳಿದುಬಂತು. ಈ ಮಾಹಿತಿ ಅನುಸರಿಸಿ ಮುಂದುವರೆದಾಗ ಆರೋಪಿಗಳು ಕೈ ಸನ್ನೆ ಮಾಡಿ ಗಿರಾಕಿಗಳನ್ನು ಕರೆಯುತ್ತಿದ್ದರು. ಆ ಸಮಯದಲ್ಲಿ ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿಗಳು ಅವರನ್ನು ದಸ್ತಗಿರಿ ಮಾಡಿದ್ದಾರೆ.
ಇವರ ಬಳಿ 2 ಕೆ.ಜಿ ಗಾಂಜಾ ಇದ್ದು 2 ಕೆಜಿಯ 8 ಬಂಡಲ್, 9 ಕೆಜಿಯ 1 ಬಂಡಲ್, 8 ಕೆಜಿಯ 1 ಬಂಡಲ್ ಇತ್ತು. ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ 14 ಕೆಜಿ 750 ಗ್ರಾಂ, ಇನ್ನೂಂದು ಗೋಣಿ ಚೀಲದಲ್ಲಿ 5 ಕೆಜಿ 900 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳಾದ ಸುರಾಂಗಿ, ಮೊನಿಪಾಲ್ ರನ್ನು ವಿಚಾರಣೆಗೊಳಪಡಿಸಿದಾಗ ಸತ್ಯಪ್ರದಾನ್, ಮತ್ತು ಕೃಷ್ಣ ಆಟೋ ಡ್ರೈವರ್ ಮತ್ತು ಮೊಬೈಲ್ ಗಳ ಜೊತೆ ಒಟ್ಟು 55 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಖದೀಮರನ್ನು ಬಂಧಿಸಿದ್ದಾರೆ.