ಕಾನೂನು ವ್ಯಾಪ್ತಿಯಲ್ಲೂ ಹೆಚ್ಚಿದ ಭ್ರಷ್ಟಾಚಾರ
Team Udayavani, Mar 25, 2022, 1:22 PM IST
ನೆಲಮಂಗಲ: ಕಾರ್ಯಾಂಗ ಹಾಗೂ ಶಾಸಕಾಂಗ ದಲ್ಲಿನ ಭ್ರಷ್ಟಾಚಾರದಂತೆ ನ್ಯಾಯಾಂಗದ ಕಾನೂನು ವ್ಯಾಪ್ತಿಯಲ್ಲಿಯೂ ಭ್ರಷ್ಟಾಚಾರ ಮಿತಿಮೀರಿದೆ ಎಂದು ನಿವೃತ್ತ ಲೋಕಾಯುಕ್ತ ಡಾ. ಎನ್ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ನಗರದ ಪುಷ್ಪಬೈರೇಗೌಡ ಕಲ್ಯಾಣ ಮಂಟಪದಲ್ಲಿ ಶ್ರೀ ಶಿರಡಿ ಸಾಯಿ ಎಜುಕೇಷನ್ ಟ್ರಸ್ಟ್ ಹಾಗೂ ಹೊಯ್ಸಳ ಪಿಯು ಕಾಲೇಜಿನಿಂದ ಆಯೋಜಿಸಿದ್ದ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಸಮಯದಲ್ಲಿ ರಾಜಕೀಯ ಹಾಗೂ ಸರ್ಕಾರಿ ಆಡಳಿತದಲ್ಲಿ ಮಾತ್ರವಲ್ಲದೇ ಕಾನೂನಿನ ವ್ಯಾಪ್ತಿಯಲ್ಲಿಯೂ ಭ್ರಷ್ಟಾಚಾರ ಹೆಚ್ಚಾಗಿದ್ದು ಅಧಿಕಾರಿಗಳು, ಕೆಲವು ನ್ಯಾಯಾಧೀಶರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಬಡಜನರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದ್ದು, ದೇಶದಲ್ಲಿ 70 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದ ಕಾಲವಿತ್ತು. ಇಂತಹ ಪ್ರಕರ ಣಮರುಗಳಿಸದಂತೆ ಎಚ್ಚರಿಕೆ ವಹಿಸುವ ಕಾಲ ನಮ್ಮ ಮೇಲಿದೆ ಎಂದರು.
ಮೀಸಲಾತಿ ಅನಿವಾರ್ಯವಲ್ಲ: ಶಿಕ್ಷಣ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕೆ ವಿನಃ ಜಾತಿಯನ್ನು ನೋಡಿ ನೀಡಬಾರದು. ಒಂದು ಬಾರಿ ಮೀಸಲಾತಿ ಪಡೆದ ವ್ಯಕ್ತಿಗೆ ಮತ್ತೆ ಅವಕಾಶ ನೀಡುವುದು, ಅವರ ಮಕ್ಕಳಿಗೆ ಅವಕಾಶ ನೀಡುವ ಕೆಲಸ ಮಾಡಬಾರದು. ಮೀಸಲಾತಿಗೆ ದೊಡ್ಡ ಸರ್ಜರಿಯಾಗಬೇಕಾಗಿದೆ ಎಂದು ಕಾಲೇಜು ವಿದ್ಯಾರ್ಥಿಯ ಮೀಸಲಾತಿ ಅನಿವಾರ್ಯವೇ ಎಂಬ ಪ್ರಶ್ನೆಗೆ ಸಂತೋಷ್ ಹೆಗಡೆ ಉತ್ತರ ನೀಡಿದರು.
ರಾಷ್ಟ್ರಮಟ್ಟದಲ್ಲಿ ಸಾಧನೆ
ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಕೆ.ವಿ. ಗೌರಿಶಂಕರ್ ಮಾತನಾಡಿ, ನಿರಂತರ ಪರಿಶ್ರಮದಿಂದ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದು ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ಗಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸ್ಥಾನ ಪಡೆದಿದ್ದಾರೆ. ಪೋಷಕರ ಸಹಕಾರ, ವಿದ್ಯಾರ್ಥಿಗಳ ಬದ್ಧತೆ, ಶಿಕ್ಷಕರ ಮಾರ್ಗದರ್ಶನ ಹಾಗೂ ಆಡಳಿತ ಮಂಡಳಿ ನಿರ್ಧಾರ ವಿದ್ಯಾರ್ಥಿಗಳ ಉನ್ನತ ಸ್ಥಾನಕ್ಕೆ ಶಕ್ತಿಯಾಗಿದೆ ಎಂದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಹೊಯ್ಸಳ ಕಾಲೇಜಿ ನಲ್ಲಿ ಶಿಕ್ಷಣ ಪಡೆದ ಅನನ್ಯ, ಕುಶಾಲ್.ಎಚ್ಎಸ್, ಹರ್ಷಿತಾ, ದೀಪಿಕಾ,ಚಂದಮ,ನೇಹಾ, ಕಾರ್ತಿಕ್ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಎಂಬಿ ಬಿಎಸ್ ಕೋರ್ಸ್ಗಳಿಗೆ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಲ್ಲಿ ಸಾಧನೆ ಮಾಡಿದ್ದರೆ, ಗಿರೀಶ್, ಜಯಂತ್ಕುಮಾರ್, ಗೀತಾ, ಮೋಹನ್ಕುಮಾರ್, ಶಶಾಂಕ್ ಗೌಡ, ತೇಜಸ್ ಗೌಡ ಎನ್ಐಟಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಆಯ್ಕೆ ಯಾಗಿದ್ದು, ಹೊಯ್ಸಳ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಂತೋಷ್ ಹೆಗ್ಡೆ ಅಭಿನಂದನೆ ಸಲ್ಲಿಸಿದರು.
ಶ್ರೀ ಶಿರಡಿ ಸಾಯಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣಪ್ಪ, ಟ್ರಸ್ಟಿ ಸುರೇಶ್.ಬಿ.ವಿ, ಅನ್ನಪೂರ್ಣ, ಕಾರ್ಯದರ್ಶಿ ಜಯಂತಿ. ಎನ್, ಹೊಯ್ಸಳ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಗೋಪಾಲ್.ಎಚ್.ಆರ್ ಹಾಗೂ ಮತ್ತಿತರರಿದ್ದರು