ಜಿಂದಾಲ್ಗೆ ಭೂಮಿ ನೀಡಿದರೆ ಉಗ್ರ ಹೋರಾಟ
Team Udayavani, Jun 19, 2019, 3:00 AM IST
ನೆಲಮಂಗಲ: ಸರ್ಕಾರ ಶಾಮೀಲಾಗಿ ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕನ್ನಡಸೇನೆ ರಾಜ್ಯಾದ್ಯಕ್ಷ ಕೆ.ಆರ್.ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಸಮೀಪದ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ನವಯುಗ ಟೋಲ್ಬಳಿಯಲ್ಲಿ ಕನ್ನಡ ಅಭಿಮಾನದ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಜನರ ಸಂಕಷ್ಟಗಳ ನಿವಾರಣೆಗೆ ಮುಂದಾಗಬೇಕಾಗಿದ್ದ ಸರ್ಕಾರದ ಜನಪ್ರತಿನಿಧಿಗಳು ರಾಜ್ಯವನ್ನು ಲೂಟಿ ಮಾಡಲು ಮುಂದಾಗಿದ್ದಾರೆ. ಸರ್ಕಾರವೇ ನೇರವಾಗಿ ಖಾಸಗಿ ಕಂಪನಿ ಜಿಂದಾಲ್ಗೆ ಭೂಮಿಯನ್ನು ಪರಭಾರೆ ಮಾಡುವ ಮೂಲಕ ಹಗಲು ದರೋಡೆಗೆ ಮುಂದಾಗಿರುವುದು ದುರಂತ.
ಕೂಡಲೇ ಸರ್ಕಾರ ಮಾರಾಟ ಮಾಡುತ್ತಿರುವುದನ್ನು ಕೈಬಿಡದಿದ್ದರೆ ಉಗ್ರಹೋರಾಟ ಮಾಡಲಿದ್ದೇವೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಸಂಕಲ್ಪ ಯಾತ್ರೆ: ರಾಜ್ಯದ ಪ್ರಮುಖ ನಗರಗಳಲ್ಲಿ ಅನ್ಯ ಭಾಷೆ ವಲಸಿಗರು ವ್ಯಾಪಕವಾಗಿ ಆವರಿಸಿದ್ದಾರೆ. ಕನ್ನಡ ಭಾಷೆಯನ್ನು ಅಳಿವಿನಂಚಿಗೆ ತೆಗೆದುಕೊಂಡು ಹೋಗುತಿದ್ದಾರೆ. ಆದ್ದರಿಂದ ಕನ್ನಡ ನಾಡು ನುಡಿಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸೇನೆ ಹೋರಾಟಕ್ಕೆ ಮುಂದಾಗಿದೆ.
ಮೊದಲ ಹಂತವಾಗಿ ನೆಲಮಂಗಲದಿಂದ ಭುವನಗಿರಿಯ ಭುವನೇಶ್ವರಿ ದೇವಾಲಯದವರೆಗೂ ಸಂಕಲ್ಪ ಯಾತ್ರೆಯನ್ನು ಆರಂಭಿಸಿದೆ. ಕನ್ನಡ ಭಾಷೆಗೆ ಶಕ್ತಿ ತುಂಬುವಂತಹ ಕೆಲಸ ಮಾಡುವುದೇ ನಮ್ಮ ಗುರಿ ಎಂದರು.
ಕನ್ನಡಿಗರಿಗೆ ಉದ್ಯೋಗ: ಕರ್ನಾಟಕದಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೆ ಪರಭಾಷೆ ಜನರಿಗೆ ನೀಡುತ್ತಿರುವ ಉದ್ಯೋಗದ ಅವಕಾಶ ನಿಲ್ಲಿಸಿ, ಮೊದಲ ಆದ್ಯತೆಯನ್ನು ಕನ್ನಡಿಗರಿಗೆ ನೀಡಬೇಕು. ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿದರೇ ಮಾತ್ರ ಕನ್ನಡ ಭಾಷೆ ಉಳಿಸಲು ಜನರು ಮುಂದಾಗುತ್ತಾರೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೇಗೌಡ, ಮಾದನಾಯಕನಹಳ್ಳಿ ಅಧ್ಯಕ್ಷ ಮಂಜುನಾಥ್, ಬೆಂಗಳೂರು ನಗರ ಕಾರ್ಯದರ್ಶಿ ಅರುಣ್ ಕುಮಾರ್, ರಾಜೇಂದ್ರ, ನಾರಾಯಣಸ್ವಾಮಿ, ಮುನಿರಾಜು, ನೀಲಪ್ಪ, ವಿನಯ್ಕುಮಾರ್ ಸೇರಿದಂತೆ ಕನ್ನಡ ಸೇನೆ ಪದಾಧೀಕರಿಗಳಿದ್ದರು.