ಕೋವಿಡ್ ನಿಯಂತ್ರಣಕ್ಕೆ ತಂಡಗಳ ರಚಿಸಿ
Team Udayavani, Apr 7, 2021, 12:21 PM IST
ದೇವನಹಳ್ಳಿ: ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಸೇರಿ ಗ್ರಾಪಂ ಹಂತದಲ್ಲಿಯೂ ತಂಡ ರಚಿಸಿ, ನಿಯಂತ್ರಣಕ್ಕೆ ಒಗ್ಗಟ್ಟಿ ನಿಂದಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗೆ ಕಂದಾಯ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ತ್ತೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ಹಾಗೂ ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿಕೈಗೊಳ್ಳಲಾಗಿರುವ ನಿಯಂತ್ರಣ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಮದುವೆ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆನಿಯಂತ್ರಿಸಬೇಕು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಪ್ರತಿ ಮನೆಗೂ ಕರಪತ್ರ ಹಂಚಿ: ಕೋವಿಡ್ಮಾರ್ಗಸೂಚಿಗಳನ್ನು ಪಾಲಿಸದ ಕಲ್ಯಾಣ ಮಂಟಪಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಆರು ತಿಂಗಳು ಕಲ್ಯಾಣ ಮಂಟಪ ಮುಚ್ಚಲಾಗುವುದು. ಜಿಲ್ಲೆಯು ಬೆಂಗಳೂರು ನಗರ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ಸಾರ್ವಜನಿಕರಿಗೆ ಕೋವಿಡ್ ಸೋಂಕಿನ ಬಗ್ಗೆ ಹಾಗೂ ಲಸಿಕೆ ಪಡೆದುಕೊಳ್ಳುವಬಗ್ಗೆ ಮಾಹಿತಿಯುಳ್ಳ ಕರಪತ್ರ ಪ್ರಕಟಿಸಿ, ಪ್ರತಿ ಮನೆಗೂಶೀಘ್ರ ತಲುಪಿಸುವ ಕೆಲಸ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಜಾತ್ರೆ ಅಂಗಡಿಗಳ ಮಧ್ಯೆ 10 ಅಡಿ ಅಂತರ: ಕೋವಿಡ್ ಜೊತೆಗೆ ಜೀವನವನ್ನು ನಡೆಸಬೇಕಾಗಿರುವುದು ಅನಿವಾರ್ಯಆಗಿರುವುದರಿಂದ, ರಾಜ್ಯದ ಆದಾಯದ ಬಹುಪಾಲು ಕೋವಿಡ್ ನಿಯಂತ್ರಣಕ್ಕೆ ಬಳಸಬೇಕಾಗಿದೆ. ಜಿಲ್ಲೆಯಲ್ಲಿ ಯಾವುದೇ ಜಾತ್ರೆಗಳಿಗೆ ಅನುಮತಿ ನೀಡಬಾರದು, ಸಂತೆಗಳಲ್ಲಿ ಒಂದು ಅಂಗಡಿಯಿಂದ ಮತ್ತೂಂದು ಅಂಗಡಿಗೆ 10 ಅಡಿ ಅಂತರ ಇರಬೇಕು ಎಂದು ಸಲಹೆ ನೀಡಿದರು.
ಹಾಸ್ಟೆಲ್ ಕೋವಿಡ್ ಕೇಂದ್ರವಾಗಿಸಿ: ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿ, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಮೀಸಲಿರಿಸುವಂತೆ ನೋಡಿಕೊಳ್ಳಬೇಕು. 1 ರಿಂದ 9ನೇ ತರಗತಿವರೆಗೆ ತರಗತಿ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸಲು ಸೂಚನೆ ನೀಡಿದರು.
ಭಯಮುಕ್ತ ವಾತಾವರಣ ನಿರ್ಮಿಸಿ: ಜಿಲ್ಲೆಯಲ್ಲಿನ ಆ್ಯಂಬುಲೆನ್ಸ್ಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು, ಕೋವಿಡ್ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ಮೂಲಕ ಕರೆದೊಯ್ಯುವ ವೇಳೆ ಸೈರನ್ ಮಾಡುವಂತಿಲ್ಲ ಹಾಗೂ ಸಾರ್ವಜನಿಕರಲ್ಲಿ ಕೋವಿಡ್ ಕುರಿತು ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಹೆಚ್ಚು ಮಂದಿಗೆ ಲಸಿಕೆ ನೀಡಬೇಕಿದೆ: ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ವೈರಸ್ ನ ತೀವ್ರತೆ ಹೆಚ್ಚಾಗುತ್ತಿದೆ. ಲಸಿಕೆಯನ್ನು ಹೆಚ್ಚು ಮಂದಿಗೆ ನೀಡುವಂತಾಗಬೇಕು.
ಜಿಪಂ ಅಧ್ಯಕ್ಷ ವಿ.ಪ್ರಸಾದ್, ಉಪಾಧ್ಯಕ್ಷೆ ರೂಪಾ ಮರಿಯಪ್ಪ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಅಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾಧಿ ಕಾರಿ ಕೆ.ಶ್ರೀನಿವಾಸ್,ಜಿಪಂ ಸಿಇಒ ಎಂ.ಆರ್.ರವಿಕುಮಾರ್, ಎಸ್ಪಿ ರವಿಡಿ.ಚನ್ನಣ್ಣನವರ್, ಎಸಿ ಅರುಳ್ಕುಮಾರ್, ಡಿಎಚ್ಒ ಕೆ.ಮಂಜುಳಾದೇವಿ, ನಿರ್ಮಿತಿ ಕೇಂದ್ರದ ಅಧಿಕಾರಿ ವಾಸುದೇವ ಮೂರ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಈಗಾಗಲೇ 71,023 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಜನರು ಲಸಿಕೆಪಡೆಯುವಂತೆ ಉತ್ತೇಜಿಸುವ ಕೆಲಸವಾಗಬೇಕು, ಲಸಿಕೆ ಪಡೆಯದ ಅಧಿಕಾರಿಗಳು ಶೀಘ್ರ ಹಾಕಿಸಿಕೊಳ್ಳಲಿ. -ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ.