ಕಾಮಗಾರಿ ಗುಣಮಟ್ಟ ಕಾಪಾಡಿ: ಡೀಸಿ
Team Udayavani, Oct 17, 2020, 2:49 PM IST
ದೇವನಹಳ್ಳಿ: ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿ ರುವ ಕಾಮಗಾರಿಗಳ ಗುಣಮಟ್ಟಉತ್ತಮವಾಗಿರಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಭಿವೃದ್ಧಿ ಕಾರ್ಯಗಳಿಗಾಗಿಯೇ ಸಾಕಷ್ಟು ಅನುದಾನವನ್ನು ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಯೋಜನೆಯಡಿ ಮೀಸಲಿಡಲಾಗಿದ್ದು, ಸಮರ್ಪಕವಾಗಿ ಅನುದಾನ ಬಳಕೆಮಾಡುವ ಮೂಲಕ ದುರ್ಬಲ ವರ್ಗದವರ ಧ್ವನಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ ಭೌತಿಕ ಮತ್ತು ಆರ್ಥಿಕ ಗುರಿಯನ್ನು ಪೂರ್ಣವಾಗಿಸಾಧಿಸಬೇಕು. ಆಹಾರ ಮತ್ತು ನಾಗರಿಕಸರಬರಾಜು ಇಲಾಖೆಯು ಬಾಕಿ ಉಳಿದಿರುವ 2018-19 ನೇ ಸಾಲಿನಪಡಿತರ ಚೀಟಿ ವಿತರಣೆ ಕಾರ್ಯವನ್ನು ತ್ವರಿತವಾಗಿ ಪೂರೈಸುವಂತೆ ತಿಳಿಸಿದರು.ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದಡಿ ವಿವಿಧ ಯೋಜನೆಗಳ ಫಲಾನುಭವಿಗಳ ಬದುಕು ಸಕಾರಾ ತ್ಮಕವಾಗಿ ಬದಲಾಗುವ ನಿಟ್ಟಿನಲ್ಲಿ ಅಭಿವೃದ್ಧಿಕಾರ್ಯಕ್ರಮಕೈಗೊಂಡು ಯೋಜನೆಗಳುಅರ್ಹ ಫಲಾನುಭವಿಗಳಿಗೆ ತಲುಪುವಂತೆಕ್ರಮಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ಸಮಾಜಕಲ್ಯಾಣಇಲಾಖೆ ಉಪನಿರ್ದೇಶಕ ಹನುಮಂತರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕಿ ಪುಷ್ಪಾ, ಜಿ.ರಾಯ್ಕರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ :
ನೆಲಮಂಗಲ: ಉತ್ತರ ಪ್ರದೇಶದ ದಲಿತ ಯುವತಿ ಮೇಲೆ ಅತ್ಯಾಚಾರದಂತಹ ಹೀನ ಕೃತ್ಯ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆವಿಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಹನುತರಾಯಪ್ಪ ಒತ್ತಾಯಿಸಿದ್ದಾರೆ.ನಗರದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅತ್ಯಾಚಾರಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಪ್ರತಿಭಟನೆ ನಡೆಸಿ ಮಾತನಾಡಿದರು.
ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿರುವುದು ಖಂಡನೀಯ. ಇಂತಹಕೃತ್ಯ ನಡೆಸುವ ಆರೋಪಿಗಳಿಗೆ ಕಾನೂನು ರೀತಿ ಶಿಕ್ಷೆ ನೀಡಬೇಕಾದ ಉತ್ತರ ಪ್ರದೇಶದ ಪೊಲೀಸರು ಅತ್ಯಾಚಾರದಿಂದ ಮೃತವಾದ ಯುವತಿಯ ಅಂತ್ಯಕ್ರಿಯೆ ಮಾಡಲು ಪೋಷಕರಿಗೆ ಅವಕಾಶ ನೀಡದೆ ಅಮಾನವೀಯತೆ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿಗಳಿಗೆ ಸಂವಿಧಾನದ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಂಡು ಗಲ್ಲುಶಿಕ್ಷೆ ವಿಧಿಸಿ ಮುಂದಿನ ದಿನಗಳಲ್ಲಿ ಈರೀತಿ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಸಂಪೂರ್ಣವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು. ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನಾಸಂಚಾಲಕ ಗಂಗಾಧರ್, ಶಿವಕುಮಾರ, ಖಜಾಂಚಿ ದಂಡು ವಯ್ಯ, ಕಾರ್ಯದರ್ಶಿ ಮೈಲಾರಪ್ಪ, ಜಿಲ್ಲಾ ಸಮಿತಿಯ ರವೀಂದ್ರ, ಪದಾಧಿಕಾರಿಗಳಾದ ಹೆಚ್.ಗಂಗರಾಜು, ನರಸಿಂಹಯ್ಯ, ಜಯರಾಮ್, ಶಿವನಂದನಗರ ಮತ್ತಿತರರಿದ್ದರು